ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ವಿಚಾರಣೆ ಪೂರ್ಣಗೊಳಿಸಲು ಸೆ.30ಕ್ಕೆ ಸುಪ್ರೀಂಕೋರ್ಟ್ ಡೆಡ್ಲೈನ್
ನವದೆಹಲಿ, ಆಗಸ್ಟ್ 22: ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡರಾದ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಶಿ ಮತ್ತು ಉಮಾ ಭಾರತಿ ವಿರುದ್ಧದ ವಿಚಾರಣೆಯನ್ನು ಪೂರ್ಣಗೊಳಿಸಲು ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 30ಕ್ಕೆ ಹೊಸ ಗಡುವನ್ನು ನಿಗದಿಪಡಿಸಿದೆ.
ನ್ಯಾಯಮೂರ್ತಿ ಆರ್.ಎಫ್ ನಾರಿಮನ್, ನವೀನ್ ಸಿನ್ಹಾ ಮತ್ತು ಇಂದಿರಾ ಬ್ಯಾನರ್ಜಿ ನೇತೃತ್ವದ ನ್ಯಾಯಾಧೀಶರ ಪೀಠವು ವರದಿಯನ್ನು ಗಣನೆಗೆ ತೆಗೆದುಕೊಂಡ ನಂತರ ಗಡುವು ಇನ್ನೂ ಒಂದು ತಿಂಗಳು ವಿಸ್ತರಿಸಿದೆ. ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸುರೇಂದ್ರ ಕುಮಾರ್ ಯಾದವ್ ಅವರ ವಿನಂತಿ ಮೇರೆಗೆ ಆಗಸ್ಟ್ 19ರಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
'ವಿಶೇಷ ನ್ಯಾಯಾಧೀಶರಾದ ಶ್ರೀ ಸುರೇಂದ್ರ ಕುಮಾರ್ ಯಾದವ್ ಅವರ ವರದಿಯನ್ನು ಓದಿದ ನಂತರ ತೀರ್ಪಿನ ವಿತರಣೆ ಸೇರಿದಂತೆ ವಿಚಾರಣೆಯನ್ನು ಪೂರ್ಣಗೊಳಿಸಲು ನಾವು ಒಂದು ತಿಂಗಳ ಸಮಯವನ್ನು ನೀಡುತ್ತೇವೆ, ಅಂದರೆ, ಸೆಪ್ಟೆಂಬರ್ 30, 2020 ರವರೆಗೆ, ನ್ಯಾಯಮೂರ್ತಿಗಳಾದ ನವೀನ್ ಸಿನ್ಹಾ ಮತ್ತು ಇಂದಿರಾ ಬ್ಯಾನರ್ಜಿ ಅವರನ್ನೂ ಒಳಗೊಂಡ ನ್ಯಾಯಪೀಠ ಆಗಸ್ಟ್ 19 ರಂದು ಅಂಗೀಕರಿಸಿದ ಆದೇಶದಲ್ಲಿ ತಿಳಿಸಿದೆ. ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಲು ಸುಪ್ರೀಂಕೋರ್ಟ್ ಗಡುವು ನಿಗದಿಪಡಿಸಿದ ಇದು ನಾಲ್ಕನೇ ಉದಾಹರಣೆಯಾಗಿದೆ.
ಈ ಹಿಂದೆ ಏಪ್ರಿಲ್ 2020ರ ಒಳಗೆ ತೀರ್ಪು ನೀಡಬೇಕು ಎಂದು ಹೇಳಿತ್ತು. ನ್ಯಾಯಾದೀಶರು ವಿನಂತಿಯ ಮೇರೆಗೆ ಗಡುವನ್ನು ಆಗಸ್ಟ್ 31ಕ್ಕೆ ವಿಸ್ತರಿಸಲಾಗಿತ್ತು. ನಂತರ ಇದೀಗ ಸೆಪ್ಟೆಂಬರ್ 30ಕ್ಕೆ ಅವಧಿ ವಿಸ್ತರಿಸಲಾಗಿದೆ.