ಬಾಬ್ರಿ ಮಸೀದಿ ಪ್ರಕರಣ: 9 ತಿಂಗಳಲ್ಲಿ ಅಡ್ವಾಣಿ, ಜೋಶಿ, ಉಮಾ ಭಾರತಿ ಭವಿಷ್ಯ ಪ್ರಕಟ
ನವದೆಹಲಿ, ಜುಲೈ 19: ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂಬತ್ತು ತಿಂಗಳ ಒಳಗೆ ತೀರ್ಪು ಪ್ರಕಟಿಸುವಂತೆ ವಿಶೇಷ ವಿಚಾರಣಾ ನ್ಯಾಯಾಧೀಶರಿಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
ರಾಜಕೀಯವಾಗಿ ಬಹಳ ಸೂಕ್ಷ್ಮವಾಗಿರುವ 1992ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಬಿಜೆಪಿಯ ಹಿರಿಯ ಮುಖಂಡರಾದ ಮಾಜಿ ಉಪ ಪ್ರಧಾನಿ ಎಲ್ಕೆ ಅಡ್ವಾಣಿ, ಮಾಜಿ ಕೇಂದ್ರ ಸಚಿವರಾದ ಮುರಳಿ ಮನೋಹರ್ ಜೋಷಿ ಮತ್ತು ಉಮಾ ಭಾರತಿ ಸೇರಿದಂತೆ ಅನೇಕ ಆರೋಪಿಗಳಿದ್ದಾರೆ.
25 ವರ್ಷಗಳ ಬಾಬ್ರಿ ಮಸೀದಿ ವಿವಾದ, ಟೈಮ್ ಲೈನ್
ಈ ಪ್ರಕರಣದ ತೀರ್ಪನ್ನು ಇಂದಿನಿಂದ (ಜುಲೈ 19) ಒಂಬತ್ತು ತಿಂಗಳ ಒಳಗೆ ನೀಡುವಂತೆ ಸುಪ್ರೀಂಕೋರ್ಟ್ ನಿರ್ದೇಶಿಸಿದೆ.
ಈ ಪ್ರಕರಣ ಸಂಬಂಧ ಸಾಕ್ಷ್ಯ ದಾಖಲೀಕರಣ ಪ್ರಕ್ರಿಯೆಯನ್ನು ಆರು ತಿಂಗಳ ಒಳಗೆ ಪೂರ್ಣಗೊಳಿಸಬೇಕು ಎಂದು ನ್ಯಾಯಮೂರ್ತಿಗಳಾದ ಆರ್ ಎಫ್ ನಾರಿಮನ್ ಮತ್ತು ಸೂರ್ಯಕಾಂತ್ ಅವರನ್ನು ಒಳಗೊಂಡ ನ್ಯಾಯಪೀಠ ಸೂಚನೆ ನೀಡಿದೆ.
ಅಯೋಧ್ಯಾ : ಆ.15ರೊಳಗೆ ಪರಿಹಾರ ಕಂಡುಕೊಳ್ಳಲು ಸುಪ್ರೀಂ ಅವಕಾಶ
ಈ ಪ್ರಕರಣವನ್ನು ವಿಚಾರಣೆ ನಡೆಸುತ್ತಿರುವ ಲಕ್ನೋ ನಗರದಲ್ಲಿರುವ ಸಿಬಿಐ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶ ಎಸ್.ಕೆ. ಯಾದವ್ ಅವರು ಇದೇ ವರ್ಷದ ಸೆಪ್ಟೆಂಬರ್ 30ರಂದು ನಿವೃತ್ತರಾಗುತ್ತಿದ್ದಾರೆ. ಈ ಪ್ರಕರಣದ ವಿಚಾರಣೆಗೆ ಇನ್ನೂ ಹೆಚ್ಚಿನ ಸಮಯ ಬೇಕಾಗುತ್ತದೆ ಎಂದು ಯಾದವ್ ಅವರು ಸುಪ್ರೀಂಕೋರ್ಟ್ಗೆ ಪತ್ರ ಬರೆದಿದ್ದರು.
ವಿಚಾರಣೆ ಮತ್ತು ತೀರ್ಪು ಪ್ರಕಟಿಸಲು ಮಾತ್ರ
ಹೀಗಾಗಿ, ನ್ಯಾಯಾಧೀಶ ಯಾದವ್ ಅವರ ಸೇವಾ ಅವಧಿಯನ್ನು ವಿಸ್ತರಣೆ ಮಾಡಿ ನಾಲ್ಕು ವಾರಗಳ ಒಳಗೆ ಸೂಕ್ತ ಆದೇಶ ಹೊರಡಿಸುವಂತೆ ಕೂಡ ನ್ಯಾಯಪೀಠ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದೆ. ವಿಶೇಷ ನ್ಯಾಯಾಧೀಶರ ಸೇವಾವಧಿ ವಿಸ್ತರಣೆಯು ಬಾಬ್ರಿ ಮಸೀದಿ ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಲು ಮತ್ತು ತೀರ್ಪು ಪ್ರಕಟಿಸುವ ಉದ್ದೇಶವನ್ನಷ್ಟೇ ಹೊಂದಿರುತ್ತದೆ ಎಂದು ಸ್ಪಷ್ಟಪಡಿಸಿದೆ.
ಆರು ತಿಂಗಳ ಹೆಚ್ಚುವರಿ ಸಮಯ
ತಮ್ಮ ಸೇವೆಯ ವಿಸ್ತೃತ ಅವಧಿಯಲ್ಲಿ ನ್ಯಾಯಾಧೀಶ ಎಸ್ಕೆ ಯಾದವ್ ಅವರು ಅಲಹಾಬಾದ್ ಹೈಕೋರ್ಟ್ನ ಆಡಳಿತ ನಿಯಂತ್ರಣ ವ್ಯಾಪ್ತಿಯಲ್ಲಿಯೇ ಮುಂದುವರಿಯಲಿದ್ದಾರೆ. ಈ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಪ್ರಕಟಿಸಲು ಆರು ತಿಂಗಳ ಹೆಚ್ಚುವರಿ ಸಮಯವನ್ನು ಕೋರಿ ಯಾದವ್ ಅವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.
ಅಯೋಧ್ಯಾ ಭೂ ವಿವಾದ ವಿಚಾರಣೆ ಆಗಸ್ಟ್ 02ಕ್ಕೆ ಮುಂದೂಡಿಕೆ
13 ಮಂದಿ ವಿರುದ್ಧ ಆರೋಪಪಟ್ಟಿ
ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ ಮತ್ತು ಉಮಾ ಭಾರತಿ ಅವರಲ್ಲದೆ, ಬಿಜೆಪಿ ಸಂಸದ ವಿನಯ್ ಕಟಿಯಾರ್ ಮತ್ತು ಸಾಧ್ವಿ ರಿತಾಂಬರ ಸೇರಿದಂತೆ 13 ಆರೋಪಿಗಳ ವಿರುದ್ಧ ಆರೋಪ ಪಟ್ಟಿ ರದ್ದು ಮಾಡದಂತೆ ಸಿಬಿಐ ಕೋರಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಪುರಸ್ಕರಿಸಿತ್ತು.
ಮೂವರು ಆರೋಪಿಗಳು ಈಗಿಲ್ಲ
ಈ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿದ್ದ ಗಿರಿರಾಜ್ ಕಿಶೋರ್, ವಿಶ್ವಹಿಂದು ಪರಿಷದ್ ಮುಖಂಡ ಅಶೋಕ್ ಸಿಂಘಾಲ್ ಮತ್ತು ವಿಷ್ಣು ಹರಿ ದಾಲ್ಮಿಯಾ ಅವರು ವಿಚಾರಣೆ ಅವಧಿಯಲ್ಲಿ ಮೃತಪಟ್ಟಿರುವುದರಿಂದ ಅವರ ವಿರುದ್ಧದ ಪ್ರಕರಣಗಳು ರದ್ದಾಗಿವೆ.