ದೆಹಲಿಯ ಬಾಬರ್ ರಸ್ತೆಗೆ 5 ಆಗಸ್ಟ್ ರಸ್ತೆ ಎಂದು ಮರುನಾಮಕರಣ!
ನವದೆಹಲಿ, ಆಗಸ್ಟ್.05: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆಗೂ ಮುನ್ನ ದಿನ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿರುವ ಬಾಬರ್ ರಸ್ತೆಯ ಹೆಸರನ್ನೇ ಬದಲಾಯಿಸಲು ಬಿಜೆಪಿ ಮುಖಂಡ ವಿಜಯ್ ಗೋಯೆಲ್ ತೀರ್ಮಾನಿಸಿದ್ದಾರೆ.
ನವದೆಹಲಿಯ ಬೆಂಗಾಲಿ ಮಾರುಕಟ್ಟೆಯ ಬಳಿ ಇರುವ ಬಾಬರ್ ರಸ್ತೆಯನ್ನು 5 ಆಗಸ್ಟ್ ರಸ್ತೆ ಎಂದು ಮರುನಾಮಕರಣಗೊಳಿಸಿದ ಘಟನೆ ಇದೀಗ ಸುದ್ದಿಯಾಗಿದೆ. ಬಿಜೆಪಿ ಬೆಂಬಲಿಗರ ಜೊತೆಗೆ ತೆರಳಿದ್ದ ಮುಖಂಡ ವಿಜಯ್ ಗೋಯೆಲ್ ಅವರು 'ಬಾಬರ್ ರಸ್ತೆ' ಎಂಬ ಬೋರ್ಡ್ ಮೇಲೆ ಕಪ್ಪು ಪಟ್ಟಿ ಅಂಟಿಸಿದ್ದು, ಅದರ ಕೆಳಗೆ '5 ಆಗಸ್ಟ್ ರಸ್ತೆ' ಎಂದು ಬರೆದಿದ್ದಾರೆ.
ಐತಿಹಾಸಿಕ ಭವ್ಯ ರಾಮಮಂದಿರಕ್ಕೆ ಮೋದಿಯಿಂದ ಭೂಮಿಪೂಜೆ
ಇನ್ನು, ಬೋರ್ಡ್ ಎದುರು ಬಿಜೆಪಿ ಮುಖಂಡ ವಿಜಯ್ ಗೋಯೆಲ್ ಕ್ಲಿಕಿಸಿದ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಾಕಷ್ಟು ಸುದ್ದಿ ಆಗುತ್ತಿದೆ. ಇದರ ನಡುವೆ ರಸ್ತೆಯ ಮರುನಾಮಕರಣ ಮಾಡುವಂತೆ ಒತ್ತಾಯಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ನವದೆಹಲಿ ಮುನ್ಸಿಪಲ್ ಕೌನ್ಸಿಲ್ (ಎನ್ಡಿಎಂಸಿ) ಗೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ.
"ದೆಹಲಿಯ ಬಂಗಾಳಿ ಮಾರುಕಟ್ಟೆಯಲ್ಲಿ,' ಬಾಬರ್ ರಸ್ತೆ 'ಅನ್ನು' ಆಗಸ್ಟ್ 5 ಮಾರ್ಗ 'ಎಂದು ಮರುನಾಮಕರಣ ಮಾಡಬೇಕು. ಬಾಬರ್ ಒಬ್ಬ ವಿದೇಶಿ ಆಕ್ರಮಣಕಾರರಾಗಿದ್ದು, ಅಯೋಧ್ಯೆ ರಾಮ ದೇವಾಲಯ ನೆಲಸಮಗೊಳಿಸಲು ಕಾರಣರಾಗಿದ್ದರು. ಆಗಸ್ಟ್ 5 ರಂದು ಪ್ರಧಾನಿ ಅಯೋಧ್ಯೆಯ ಶ್ರೀ ರಾಮನ ಭವ್ಯ ದೇವಾಲಯದ ಅಡಿಪಾಯ ಹಾಕಲಿದ್ದಾರೆ. ಈ ಸಂದರ್ಭದಲ್ಲಿ ಎನ್ಡಿಎಂಸಿ ಬಾಬರ್ ರಸ್ತೆಯ ಹೆಸರನ್ನು ಬದಲಾಯಿಸಬೇಕು "ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಇನ್ನು, ರಸ್ತೆಯ ಹೆಸರನ್ನು ಬದಲಾಯಿಸುವಲ್ಲಿ ಯಾವುದೇ ರೀತಿ ರಾಜಕೀಯವಿಲ್ಲ. ಈ ಹಿಂದೆ 2015 ರಲ್ಲಿ ಔರಂಗಜೇಬ್ ರಸ್ತೆಯನ್ನು ಎಪಿಜೆ ಅಬ್ದುಲ್ ಕಲಾಂ ಮಾರ್ಗ ಎಂದು ಬದಲಾಯಿಸಲಾಯಿತು. 2016 ರಲ್ಲಿ ರೇಸ್ ಕೋರ್ಸ್ ರಸ್ತೆಯನ್ನು ಲೋಕ ಕಲ್ಯಾಣ್ ಮಾರ್ಗ ಎಂದು ಮರುನಾಮಕರಣ ಮಾಡಲಾಯಿತು. ಇದೀಗ ಬಾಬರ್ ರಸ್ತೆಯ ಹೆಸರನ್ನು ಬದಲಾಯಿಸುವುದರಲ್ಲಿ ಯಾವುದೇ ಸಮಸ್ಯೆ ಇರಲಾರದು ಎಂದು ವಿಜಯ್ ಗೋಯೆಲ್ ತಿಳಿಸಿದ್ದಾರೆ.
मैंने सरकार से माँग रखी है की बाबर एक विदेशी आक्रांता था। जिसने प्राचीन राम मंदिर का विध्वंस करवाया था।
— Vijay Goel (@VijayGoelBJP) August 4, 2020
इसलिए दिल्ली के बंगाली मार्केट में बाबर रोड का नाम बदल कर 5 अगस्त मार्ग रखा जाना चाहिए।#ChangeBabarRoadName pic.twitter.com/Ic2tQ57CUR
ತಮ್ಮ ಪ್ರಸ್ತಾಪವನ್ನು ಬಂಗಾಳಿ ಮಾರುಕಟ್ಟೆ ನಿವಾಸಿಗಳ ಕಲ್ಯಾಣ ಸೊಸೈಟಿ ಮತ್ತು ಬಂಗಾಳಿ ಮಾರುಕಟ್ಟೆ ವ್ಯಾಪಾರಿಗಳ ಸಂಘ ಬೆಂಬಲಿಸಿದೆ ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ. ಇದರ ಜೊತೆಗೆ ರಸ್ತೆಯ ಮರುನಾಮಕರಣದ ಬೇಡಿಕೆ ಒತ್ತಾಯಿಸಲು ಈ ಪ್ರದೇಶದಲ್ಲಿ ಸಹಿ ಅಭಿಯಾನವನ್ನು ಪ್ರಾರಂಭಿಸಲು ವಿಜಯ್ ಗೋಯೆಲ್ ಯೋಜಿಸಿದ್ದಾರೆ.