ಬಾಬಾ ರಾಮದೇವ್ ವಿರುದ್ದ ಜೂನ್ 1 ರಂದು 'ಕಪ್ಪು ದಿನ'ಕ್ಕೆ ಕರೆ ನೀಡಿದ ವೈದ್ಯರ ಸಂಘ
ನವದೆಹಲಿ, ಮೇ 31: ಯೋಗ ಗುರು ಬಾಬಾ ರಾಮದೇವ್ ಅಲೋಪತಿ ಮತ್ತು ಆಧುನಿಕ ಔಷಧಿಗಳ ವಿರುದ್ದದ ಹೇಳಿಕೆಯನ್ನು ಖಂಡಿಸಿ ವೈದ್ಯರ ಸಂಘ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ನೀಡಿದೆ.
ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಶನ್ (ಫೋರ್ಡಾ) ಪ್ರಕಟಣೆ ಹೊರಡಿಸಿದ್ದು, ಜೂನ್ 1 ಅನ್ನು 'ಕಪ್ಪು ದಿನ' ಎಂದು ಆಚರಿಸಲಾಗುವುದು ಎಂದು ಹೇಳಿದೆ.
ವಿವಾದಾತ್ಮಕ ಹೇಳಿಕೆ ವಾಪಾಸ್ ಪಡೆದು 25 ಪ್ರಶ್ನೆ IMA ಮುಂದಿಟ್ಟ ರಾಮ್ದೇವ್
ಬಾಬಾ ರಾಮದೇವ್ ಮಾಡಿದ ಅವಹೇಳನಕಾರಿ ಮತ್ತು ಅಸಹ್ಯಕರ ಹೇಳಿಕೆಗಳನ್ನು ಖಂಡಿಸಲು ಈ ಕರೆ ನೀಡಲಾಗಿದೆ ಎಂದು ಫೋರ್ಡಾ ತಿಳಿಸಿದೆ. ಈ ಪ್ರತಿಭಟನೆ ದಿನಪೂರ್ತಿ ನಡೆಯಲಿದೆ. ಆದರೆ ಈ ಪ್ರತಿಭಟನೆಯಿಂದ ರೋಗಿಗಳ ಆರೈಕೆಗೆ ತೊಂದರೆಯಾಗುವುದಿಲ್ಲ ಎಂದು ಕೂಡಾ ಫೋರ್ಡಾ ಹೇಳಿದೆ.
Indian Medical Association (IMA) supports the black badge fight called by FORDA, FIMA and RDA & our IMA JDN members will join. IMA envision and working on to carry on 1 million free vaccinations by our members across the country: IMA pic.twitter.com/VUGjkKMlC5
— ANI (@ANI) May 31, 2021
ಅಲೋಪತಿ ವಿರುದ್ದ ಹೇಳಿಕೆ ನೀಡಿದ್ದ ರಾಮ್ದೇವ್
ರಾಮ್ದೇವ್ ಮಾತನಾಡಿದ ವಿಡಿಯೋವೊಂದು ಇತ್ತೀಚೆಗೆ ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ರಾಮ್ದೇವ್ ಅಲೋಪತಿ ಚಿಕಿತ್ಸೆಯನ್ನು 'ಮೂರ್ಖತನದ ವಿಜ್ಞಾನ' ಎಂದು ಟೀಕಿಸಿದ್ದರು. ರೆಮ್ಡಿಸಿವಿರ್, ಫೆವಿಫ್ಲೂ ಮತ್ತು ಇತರ ಔಷಧಿಗಳು ಕೋವಿಡ್ -19 ರೋಗಿಗಳಿಗೆ ಚಿಕಿತ್ಸೆ ನೀಡಲು ವಿಫಲವಾಗಿವೆ ಎಂದು ಹೇಳಿದ್ದರು. ಆದರೆ ಅಲೋಪತಿ ಹಾಗೂ ವೈಜ್ಞಾನಿಕ ವೈದ್ಯಕೀಯ ಪದ್ದತಿ ವಿರುದ್ಧ ರಾಮ್ದೇವ್ ಮಾತುಗಳನ್ನಾಡಿದ್ದಾರೆ ಎಂಬ ಆರೋಪಗಳನ್ನು ಪತಂಜಲಿ ಯೋಗಪೀಠ ಟ್ರಸ್ಟ್ ನಿರಾಕರಿಸಿತ್ತು. ಇದಕ್ಕೂ ಮುನ್ನ ರಾಮ್ದೇವ್ ಆಧುನಿಕ ವೈದ್ಯಕೀಯ ಸಿಬ್ಬಂದಿಗಳನ್ನು "ಕೊಲೆಗಾರರು" ಎಂಬ ಹೇಳಿಕೆಯನ್ನು ನೀಡಿದ್ದರು.
ಹೇಳಿಕೆ ವಿರೋಧಿಸಿ ಕಾನೂನು ಮೊರೆ ಹೋದ ಭಾರತ ವೈದ್ಯಕೀಯ ಸಂಘ
ಅಲೋಪತಿ ಚಿಕಿತ್ಸೆಯನ್ನು 'ಮೂರ್ಖತನದ ವಿಜ್ಞಾನ' ಎಂದು ಟೀಕಿಸಿದ್ದ ರಾಮ್ದೇವ್ ಹೇಳಿಕೆಯನ್ನು ಖಂಡಿಸಿ ಕಾನೂನು ಮೊರೆ ಹೋಗಿತ್ತು. ರಾಮ್ದೇವ್ಗೆ ಲೀಗಲ್ ನೋಟಿಸ್ ಕಳುಹಿಸಿತ್ತು. ಹಾಗೆಯೇ ಉತ್ತರ ಪ್ರದೇಶದ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಬಾಬಾ ರಾಮ್ದೇವ್ ವಿರುದ್ಧ 1000 ಕೋಟಿ ಮೊತ್ತದ ಮಾನನಷ್ಟ ಮೊಕದ್ದಮೆಯ ನೋಟಿಸ್ ಕಳುಹಿಸಿತ್ತು. ನೋಟಿಸ್ ತಲುಪಿದ 15 ದಿನಗಳೊಳಗೆ ಬಾಬಾ ರಾಮ್ದೇವ್ ಲಿಖಿತವಾಗಿ ಕ್ಷಮೆಯಾಚನೆ ಮಾಡಬೇಕೆಂದು ಒತ್ತಾಯಿಸಿತ್ತು. ಇಲ್ಲವಾದರೆ ಐಎಂಎಯ ಪ್ರತಿ ಸದಸ್ಯರಿಗೆ 50 ಲಕ್ಷ ರೂಪಾಯಿಯಂತೆ 1000 ಕೋಟಿ ಪರಿಹಾರವನ್ನು ಕೋರಲಾಗುತ್ತದೆ ಎಂದು ನೋಟಿಸ್ನಲ್ಲಿ ತಿಳಿಸಿತ್ತು. ಹಾಗೆಯೇ ರಾಮ್ದೇವ್ ವಿರುದ್ಧ ದೇಶದ್ರೋಹದ ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಪ್ರಧಾನಿ ನರೇಂದ್ರ ಮೋದಿಗೂ ವೈದ್ಯರ ಸಂಘ ಪತ್ರ ಬರೆದಿತ್ತು.
ರಾಮ್ದೇವ್ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾದ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್
''ನನ್ನನ್ನು ಯಾರಪ್ಪನಿಂದಲೂ ಬಂಧಿಸಲಾಗದು'' ಎಂದಿದ್ದ ರಾಮ್ದೇವ್
ಈ ಎಲ್ಲಾ ಬೆಳವಣಿಗೆಯ ಬೆನ್ನಲ್ಲೇ ರಾಮ್ದೇವ್ ಹೇಳಿಕೆ ಹಿಂಪಡೆದು 25 ಪ್ರಶ್ನೆಗಳನ್ನು ಸರ್ಕಾರದ ಮುಂದಿಟ್ಟಿದ್ದರು. ಆದರೆ ಆ ಬಳಿಕ ನನ್ನನ್ನು ಬಂಧಿಸುವ ಧೈರ್ಯ ಯಾರಿಗೂ ಇಲ್ಲ. ಅವರ ಅಪ್ಪನಿಂದಲೂ ನನ್ನನ್ನು ಬಂಧಿಸಲಾಗದು ಎಂದು ಹೇಳಿದ್ದರು. ಈ ವಿಡಿಯೋವನ್ನು ಕಾಂಗ್ರೆಸ್ ಮುಖಂಡ ಗೌರವ್ ಪಾಂಡಿ ಟ್ವೀಟರ್ನಲ್ಲಿ ಶೇರ್ ಮಾಡಿದ್ದರು.
'ಯಾರಿಗೂ ನನ್ನನ್ನು ಬಂಧಿಸುವ ಧೈರ್ಯವಿಲ್ಲ' - ಐಎಂಎಗೆ ಬಾಬಾ ರಾಮ್ ದೇವ್ ತಿರುಗೇಟು
ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದ ಐಎಂಎ
ಅಲೋಪತಿ ವೈದ್ಯ ಪದ್ದತಿಯ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧ ಎಂದು ಬಾಬಾ ರಾಮ್ದೇವ್ಗೆ ಹೇಳಿದ್ದ ಐಎಂಎ ಷರತ್ತಿನೊಂದಿಗೆ ಬಾಬಾ ರಾಮ್ದೇವ್ಗೂ ಆಹ್ವಾನ ನೀಡಿತ್ತು. ಐಎಂಎ ಉತ್ತರಾಖಂಡದ ಅಧ್ಯಕ್ಷ ಡಾ. ಅಜಯ್ ಖನ್ನಾ ಬಾಬಾ ರಾಮ್ದೇವ್ಗೆ ಪತ್ರವನ್ನು ಬರೆದಿದ್ದರು. ಈ ಚರ್ಚೆ ಮುಖಾಮುಖಿಯಾಗಿರಲಿ ಮತ್ತು ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಆಹ್ವಾನಿಸಿ ಅವರ ಉಪಸ್ಥಿತಿಯಲ್ಲಿ ನಡೆಯಲಿ ಎಂದು ಐಎಂಎ ಹೇಳಿತ್ತು.
ಕೇಂದ್ರಕ್ಕೆ 14 ಪುಟಗಳ ದೂರು ಪತ್ರ ಕಳುಹಿಸಿದ ಐಎಂಎ
"ಆರೋಪಿ ಒಬ್ಬ ಉದ್ಯಮಿ, ಪ್ರಸ್ತುತ ಪರಿಸ್ಥಿತಿಯ ಲಾಭ ಪಡೆಯಲು ಈ ಹೇಳಿಕೆ ನೀಡಲಾಗಿದೆ. ಅಲೋಪತಿ ಮತ್ತು ಆಧುನಿಕ ಔಷಧದ ಬಗ್ಗೆ ದೂರಿರುವ ರಾಮದೇವ್ ಅನುಮೋದಿಸದ ಮತ್ತು ಸಂಶಯಾಸ್ಪದ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಿದೆ.