ಯೋಗಗುರು ಬಾಬಾ ರಾಮ್ದೇವ್ಗೆ ಸಮನ್ಸ್ ನೀಡಿದ ದೆಹಲಿ ಹೈಕೋರ್ಟ್
ನವದೆಹಲಿ, ಜೂನ್ 3: ದೆಹಲಿ ಮೆಡಿಕಲ್ ಅಸೊಸಿಯೇಶನ್ ಹೂಡಿದ್ದ ಮೊಕದ್ದಮೆಯ ಹಿನ್ನೆಲೆಯಲ್ಲಿ ಯೋಗಗುರು ಬಾಬಾ ರಾಮ್ದೇವ್ಗೆ ದೆಹಲಿ ಹೈಕೋರ್ಟ್ ಗುರುವಾರ ಸಮನ್ಸ್ ಜಾರಿಗೊಳಿಸಿದೆ. ಬಾಬಾ ರಾಮ್ದೇವ್ ಅವರ ಸಂಸ್ಥೆಯಾದ ಪತಂಜಲಿ ಅದರ ಕೊರೊನಿಲ್ ಕಿಟ್ ವಿಚಾರವಾಗಿ ಜನರಲ್ಲಿ ಸುಳ್ಳುಸುದ್ದಿಯನ್ನು ಹಬ್ಬಿಸುತ್ತಿದೆ. ಈ ಕೊರೋನಿಲ್ ಕಿಟ್ನಿಂದ ಕೊರೊನಾ ವೈರಸ್ನಿಂದ ಗುಣಮುಖರಾಗಬಹುದು ಎಂದು ಹೇಳಿಕೊಳ್ಳುತ್ತಿದೆ ಎಂದು ಡಿಎಂಎ ದಾವೆಯನ್ನು ಹೂಡಿತ್ತು.
ವೈದ್ಯರ ಪರವಾಗಿ ಡಿಎಂಎ ಬಾಬಾ ರಾಮ್ದೇವ್ ಅವರು ಸಾರ್ವಜನಿಕವಾಗಿ ನೀಡಿದ ಹೇಳಿಕೆ ವೈದ್ಯರು ಹಾಗೂ ವಿಜ್ಞಾನಿಗಳ ಗೌರವಕ್ಕೆ ಧಕ್ಕೆ ತಂದಿದೆ ಎಂದಿದೆ. "ಇದು ವೈದ್ಯರ ನಾಗರೀಕ ಹಕ್ಕುಗಳ ದಾವೆಯಾಗಿದೆ" ಎಂದು ಡಿಎಂಎ ಪರ ವಕೀಲ ರಾಜೀವ್ ದತ್ತಾ ಪ್ರತಿಕ್ರಿಯಿಸಿದ್ದಾರೆ.
ಸಿಎಂ ಯೋಗಿ, ಬಾಬಾ ರಾಮ್ದೇವ್ ಪುಸ್ತಕಗಳು ಯುಪಿ ವಿವಿಗಳ ತತ್ವಶಾಸ್ತ್ರ ವಿದ್ಯಾರ್ಥಿಗಳ ಪಠ್ಯ
ಇನ್ನು ಈ ಸಂದರ್ಭದಲ್ಲಿ ಹೈಕೋರ್ಟ್ ಬಾಬಾ ರಾಮ್ದೇವ್ಗೆ ಮೌಖಿಕ ಸಲಹೆಯನ್ನು ನೀಡಿದೆ. ಜುಲೈ 13ರಂದು ಮುಂದಿನ ವಿಚಾರಣೆ ನಡೆಯಲಿದ್ದು ಅಲ್ಲಿಯವರೆಗೆ ಯಾವುದೇ ಪ್ರಚೋದನಕಾರಿ ಹೇಳಿಕೆಯನ್ನು ನೀಡಬಾರದು ಮತ್ತು ಈ ವಿಚಾರವಾಗಿ ಪ್ರತಿಕ್ರಿಯಿಸಬಾರದು ಎಂದಿದೆ.
ಕೊರೊನಾ ವೈರಸ್ನ ಲಸಿಕೆ ಹಾಗೂ ಅಲೋಪತಿ ಔಷಧಿಗಳ ವಿಚಾರವಾಗಿ ಇತ್ತೀಚೆಗೆ ಬಾಬಾ ರಾಮ್ದೇವ್ ಸಾಕಷ್ಟು ಗಂಭೀರ ಆರೋಪಗಳನ್ನು ಮಾಡಿದ್ದರು. ಅಲೋಪತಿ ವೈದ್ಯ ಪದ್ದತಿ ಒಂದು ಮೂರ್ಖ ವಿಜ್ಞಾನ ಎಂದು ಬಾಬಾ ರಾಮ್ದೇವ್ ಆಡಿದ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಹೀಗಾಗಿ ಇಡೀ ವೈದ್ಯ ಸಮುದಾಯ ಬಾಬಾ ರಾಮ್ದೇವ್ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿತ್ತು. ಇಂಡಿಯನ್ ಮೆಡಿಕಲ್ ಅಸೊಸಿಯೇಶನ್ ಈ ಹೇಳಿಕೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು ಕಾನೂನು ಹೋರಾಟಕ್ಕೆ ಮುಂದಾಗಿದೆ.
ರಾಮ್ದೇವ್ ವಿರುದ್ದ ಪಿಪಿಇ ಕಿಟ್ಗಳಲ್ಲಿ ಘೋಷಣೆ ಬರೆದು, ಕಪ್ಪು ಬ್ಯಾಂಡ್ ಧರಿಸಿ ವೈದ್ಯರ ಪ್ರತಿಭಟನೆ
ಐಎಂಎ ಈ ಬಗ್ಗೆ ಕೇಂದ್ರ ಸರ್ಕಾರಕ್ಕೂ ಪತ್ರವನ್ನು ಬರೆದಿದ್ದು ಬಾಬಾ ರಾಮ್ದೇವ್ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೋರಿದೆ. ಕೊರೊನಾ ವೈರಸ್ನ ಈ ಸಂಕಷ್ಟದ ಸಂದರ್ಭದಲ್ಲಿ ವೈದ್ಯರು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಸಾಕಷ್ಟು ವೈದ್ಯರು ಇದಕ್ಕಾಗಿ ತಮ್ಮ ಪ್ರಾಣವನ್ನು ಕೂಡ ಕಳೆದುಕೊಂಡಿದ್ದಾರೆ. ಹೀಗಾಗಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಈ ಪತ್ರದಲ್ಲಿ ಮನವಿ ಮಾಡಿಕೊಂಡಿದೆ.