ಅಯೋಧ್ಯಾ ತೀರ್ಪು: ಆರೆಸ್ಸೆಸ್ನಿಂದ ಮಧ್ಯಾಹ್ನ ಮಹತ್ವದ ಸುದ್ದಿಗೋಷ್ಠಿ
ನವದೆಹಲಿ, ನವೆಂಬರ್ 9: ಸುಮಾರು 70 ವರ್ಷಗಳ ಕಾನೂನು ಸಮರದ ಬಳಿಕ ಅತ್ಯಂತ ಸೂಕ್ಷ್ಮವಾದ ಅಯೋಧ್ಯಾ ಭೂ ವಿವಾದದ ಕುರಿತಾದ ತೀರ್ಪನ್ನು ಸುಪ್ರೀಂಕೋರ್ಟ್ ಶನಿವಾರ ಬೆಳಿಗ್ಗೆ 10.30ಕ್ಕೆ ಪ್ರಕಟಿಸಲಿದೆ. ತೀರ್ಪು ಪ್ರಕಟವಾದ ಬಳಿಕ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಅವರು ಸುದ್ದಿಗೋಷ್ಠಿ ನಡೆಸಲಿದ್ದು, ತೀರ್ಪಿನ ಹಿನ್ನೆಲೆಯಲ್ಲಿ ಅವರ ಪ್ರತಿಕ್ರಿಯೆ ಮತ್ತು ಆರೆಸ್ಸೆಸ್ ನಡೆ ಏನಿರಲಿದೆ ಎಂಬ ಕುತೂಹಲ ಮೂಡಿಸಿದೆ.
ಅಯೋಧ್ಯೆ ತೀರ್ಪು ಹಿನ್ನೆಲೆ: ಹಲವೆಡೆ ಇಂಟರ್ನೆಟ್ ಸೇವೆ ಸ್ಥಗಿತ
ತೀರ್ಪು ಪ್ರಕಟವಾದ ಬಳಿಕ ದೆಹಲಿಯ ಝಾಂಡೆವಾಲನ್ನಲ್ಲಿನ ಕೇಶವ್ ಕುಂಜ್ ಪರಿಸರ್ನಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ಸಂಘದ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ನೀಡಲಾಗಿದೆ.
ಅಯೋಧ್ಯಾ ವಿವಾದ ಕುರಿತಂತೆ ಸುಪ್ರೀಂಕೋರ್ಟ್ನ ಅಂತಿಮ ತೀರ್ಪು ಪ್ರಕಟವಾಗುವುದಕ್ಕೂ ಮುನ್ನ ಭಾಗ್ವತ್ ಅವರು ರಾಷ್ಟ್ರೀಯ ರಾಜಧಾನಿಗೆ ತೆರಳಿದ್ದಾರೆ. ಅಯೋಧ್ಯಾ ಪ್ರಕರಣದಲ್ಲಿ ವಿಚಾರಣೆ ಪೂರ್ಣಗೊಂಡಿದ್ದು, ತೀರ್ಪು ಶೀಘ್ರದಲ್ಲಿಯೇ ಹೊರಬೀಳಲಿದೆ ಎಂಬುದು ಖಚಿತವಾದ ನಂತರ ಕಳೆದ ಹತ್ತು ದಿನಗಳಿಂದ ಆರೆಸ್ಸೆಸ್ನ ಪ್ರಮುಖ ಮುಖಂಡರು ದೆಹಲಿಯ 'ಉದಾಸಿನ್ ಆಶ್ರಮ'ದಲ್ಲಿ ವಾಸ್ತವ್ಯ ಹೂಡಿದ್ದಾರೆ. ಪರ ಅಥವಾ ವಿರೋಧ ತೀರ್ಪು ಬಂದರೆ ಮುಂದಿನ ನಡೆ ಏನು ಎಂಬ ಬಗ್ಗೆ ಸುದೀರ್ಘ ಚರ್ಚೆಗಳನ್ನು ನಡೆಸಿದ್ದಾರೆ. ಜತೆಗೆ ತೀರ್ಪು ಯಾರ ಪರವೇ ಬರಲಿ ದೇಶದೆಲ್ಲೆಡೆ ಕೋಮು ಸೌಹಾರ್ದ ಕಾಪಾಡಿಕೊಳ್ಳುವ ಸಲುವಾಗಿ ಅನೇಕ ಸುತ್ತಿನ ಮಾತುಕತೆಗಳನ್ನು ನಡೆಸಿದ್ದಾರೆ.