ತೀರ್ಥಯಾತ್ರೆ ಯೋಜನೆಯಲ್ಲಿ ಅಯೋಧ್ಯೆ ಸೇರ್ಪಡೆ ಮಾಡಿದ ದೆಹಲಿ ಸರ್ಕಾರ
ಈ ಕುರಿತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾಹಿತಿ ನೀಡಿದ್ದಾರೆ.
ಇದೀಗ ಅಯೋಧ್ಯೆಯ ರಾಮಲಲ್ಲಾ ದರ್ಶನವನ್ನೂ ತೀರ್ಥಯಾತ್ರೆಗೆ ಸೇರಿಸಲಾಗಿದೆ. ಹಿರಿಯ ನಾಗರಿಕರಿಗೆ ಉಚಿತ ದರ್ಶನ ಭಾಗ್ಯವನ್ನು ಕಲ್ಪಿಸಲಾಗಿದೆ. ಯಾತ್ರೆ ಕೈಗೊಳ್ಳುವ ಹಿರಿಯರ ನಾಗರಿಕರು ಸಹಾಯಕ್ಕೆ ತಮ್ಮ ಜೊತೆಯಲ್ಲಿ ಒಬ್ಬರನ್ನು ಕರೆದುಕೊಂಡು ಹೋಗಬಹುದು ಎಂದು ಹೇಳಿದರು.
ಗೋವಾ ಜನತೆಗೆ ಅರವಿಂದ್ ಕೇಜ್ರಿವಾಲ್ರಿಂದ ಭರವಸೆಯ ಮಹಾಪೂರ
ಉತ್ತರ ಪ್ರದೇಶದ ಅಯೋಧ್ಯೆಗೆ ಭೇಟಿ ನೀಡಿ ವಾಪಸ್ ಆದ ಮರುದಿನವೇ ಸಿಎಂ ಈ ನಿರ್ಧಾರ ಪ್ರಕಟಿಸಿದರು. ದೆಹಲಿಯ ಜನರು ಕೂಡ ಅಯೋಧ್ಯೆ ನೋಡಬೇಕೆಂದು ಬಯಸುತ್ತಿರುವುದಾಗಿ ಹೇಳುತ್ತಾರೆ. ಹೀಗಾಗಿ ತೀರ್ಥಯಾತ್ರೆ ಯೋಜನೆಯನ್ನು 1 ತಿಂಗಳೊಳಗೆ ಪುನರಾರಂಭಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.
ದೆಹಲಿ ಸರ್ಕಾರವು 2018ರಲ್ಲಿ ಮುಖ್ಯಮಂತ್ರಿ ತೀರ್ಥಯಾತ್ರೆ ಯೋಜನೆಯನ್ನು ಪ್ರಾರಂಭಿಸಿತು. ಇದರಲ್ಲಿ ದೆಹಲಿಯ ಹಿರಿಯ ನಾಗರಿಕರಿಗೆ ಉಚಿತ ಪ್ರಯಾಣ ಪ್ಯಾಕೇಜ್ಗಳನ್ನು ನೀಡುತ್ತದೆ.
ಜಗನ್ನಾಥ ಪುರಿ, ರಾಮೇಶ್ವರಂ, ಶಿರಡಿ, ಮಥುರಾ, ಹರಿದ್ವಾರ, ತಿರುಪತಿ ಮುಂತಾದ ಸ್ಥಳಗಳಿಗೆ ಹಿರಿಯ ನಾಗರಿಕರ ಉಚಿತ ತೀರ್ಥಯಾತ್ರೆಗೆ ಸರ್ಕಾರವು ಸಂಪೂರ್ಣ ವೆಚ್ಚವನ್ನು ಭರಿಸುತ್ತದೆ.
ಭಾಗವಹಿಸುವ ಎಲ್ಲಾ ನಾಗರಿಕರಿಗೆ ವಸತಿ, ಊಟ ಹಾಗೂ ವಿಮೆಯನ್ನು ನೀಡುತ್ತದೆ. ಈ ಯೋಜನೆಯಲ್ಲಿ 35 ಸಾವಿರಕ್ಕೂ ಹೆಚ್ಚು ಹಿರಿಯ ನಾಗರಿಕರು ತೀರ್ಥಯಾತ್ರೆ ಕೈಗೊಂಡಿದ್ದಾರೆ.
ಯೋಜನೆ ಪ್ರಕಾರ ಅರ್ಜಿದಾರರು 60 ವರ್ಷಗಳನ್ನು ಪೂರ್ಣಗೊಳಿಸಿರಬೇಕು, ಈ ಹಿಂದೆ ಯೋಜನೆಯ ಲಾಭವನ್ನು ಪಡೆದಿರಬಾರದು, ಈ ಯೋಜನೆಯು ಕೇಂದ್ರ/ರಾಜ್ಯ ಸರ್ಕಾರಗಳು ಅಥವಾ ಸ್ಥಳೀಯ/ಸ್ವಾಯತ್ತ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿರುವ ಹಿರಿಯ ನಾಗರಿಕರಿಗೆ ಅನ್ವಯವಾಗುವುದಿಲ್ಲ.
2019ರಲ್ಲಿ ಹಿರಿಯ ನಾಗರಿಕರಿಗಾಗಿ ಉಚಿತ ಯಾತ್ರಾ ಯೋಜನೆಯಲ್ಲಿ ಕರ್ತಾರ್ಪುರ್ ಸಾಹಿಬ್ ಗುರುದ್ವಾರವನ್ನು ಸೇರಿಸಲು ದೆಹಲಿ ಸರ್ಕಾರ ಶುಕ್ರವಾರ ಅನುಮೋದನೆ ನೀಡಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ದೆಹಲಿ ಕ್ಯಾಬಿನೆಟ್ ಸಭೆಯಲ್ಲಿ ಇದಕ್ಕೆ ತಾತ್ವಿಕವಾಗಿ ಅನುಮೋದನೆ ನೀಡಿತ್ತು.
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನರೋವಾಲ್ ಜಿಲ್ಲೆಯ ಕರ್ತಾರ್ಪುರ್ ಸಾಹಿಬ್ ಗುರುದ್ವಾರ ಭಾರತದ ಗಡಿಯಿಂದ 4.5 ಕಿ.ಮೀ ದೂರದಲ್ಲಿದೆ. ಈ ದೇವಾಲಯಕ್ಕೆ ವರ್ಷಪೂರ್ತಿ ಭಾರತೀಯ ಯಾತ್ರಾರ್ಥಿಗಳಿಗೆ ಕಾರಿಡಾರ್ ಮೂಲಕ ಪ್ರವೇಶಿಸಲು ಅವಕಾಶ ಸಿಗಲಿದೆ.
ವಿಶೇಷವೆಂದರೆ, ದೆಹಲಿ ಮುಖ್ಯಮಂತ್ರಿ ತೀರ್ಥ ಯಾತ್ರೆ ಯೋಜನೆಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಿಂದ ವರ್ಷಕ್ಕೆ 1,100 ಹಿರಿಯ ನಾಗರಿಕರಿಗೆ ಉಚಿತ ತೀರ್ಥಯಾತ್ರೆ ಕೈಗೊಳ್ಳಲು ಅನುವು ಮಾಡಿಕೊಡುತ್ತದೆ. ಇದರ ವೆಚ್ಚವನ್ನು ದೆಹಲಿ ಸರ್ಕಾರವೇ ಭರಿಸಲಿದೆ.
'ಮುಖಮಂತ್ರಿ ತೀರ್ಥ ಯಾತ್ರೆ ಯೋಜನೆ' ಎಂಬ ಹೆಸರಿನ ಯೋಜನೆ ದೆಹಲಿಯ 60 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಮಾತ್ರ ಲಭ್ಯವಿರುತ್ತದೆ. ಹಿರಿಯ ನಾಗರಿಕರು ಈ ಯೋಜನೆಯ ಲಾಭವನ್ನು ಪಡೆಯಬಹುದು. 70 ವರ್ಷಕ್ಕಿಂತ ಮೇಲ್ಪಟ್ಟ ಜನರು ಸಹ ಅವರೊಂದಿಗೆ ಅಟೆಂಡೆಂಟ್ ಜೊತೆಗೆ ಹೋಗಬಹುದು.
ದೆಹಲಿ-ಮಥುರಾ-ವೃಂದಾವನ್-ಆಗ್ರಾ-ಫತೇಪುರ್ ಸಿಕ್ರಿ-ದೆಹಲಿ, ದೆಹಲಿ-ವೈಷ್ಣೋ ದೇವಿ-ಜಮ್ಮು-ದೆಹಲಿ, ದೆಹಲಿ-ಹರಿದ್ವಾರ-ರಿಷಿಕೇಶ-ನೀಲಕಂಠ-ದೆಹಲಿ, ಮತ್ತು ದೆಹಲಿ-ಅಜ್ಮೀರ್-ಪುಷ್ಕರ್-ದೆಹಲಿ ಈ ಯೋಜನೆಯ ವ್ಯಾಪ್ತಿಗೆ ಬರುವ ಇತರ ಮಾರ್ಗಗಳು
Recommended Video