ಅಯೋಧ್ಯೆ ವಿವಾದ: ಸುಪ್ರೀಂ ತೀರ್ಪಿಗೆ ಯಾರು, ಏನಂದರು?
ನವದೆಹಲಿ, ಮಾರ್ಚ್ 08: ಅಯೋಧ್ಯೆಯಲ್ಲಿ ರಾಮಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕೋರ್ಟ್ ಮೇಲ್ವಿಚಾರಣೆಯಲ್ಲಿ ಸಂಧಾನದ ಮೂಲಕ ಪರಿಹಾರ ಕಂಡುಕೊಳ್ಳುವ ಕುರಿತಂತೆ ತನ್ನ ತೀರ್ಪನ್ನು ಸುಪ್ರೀಂ ಕೋರ್ಟ್ ಇಂದು(ಮಾ.08) ಬೆಳಿಗ್ಗೆ ಪ್ರಕಟಿಸಿತ್ತು.
ಅಯೋಧ್ಯೆ ವಿವಾದ : ಸುಪ್ರೀಂಕೋರ್ಟ್ ತೀರ್ಪಿನ 5 ಪ್ರಮುಖ ಅಂಶಗಳು
ನ್ಯಾ.ಇಬ್ರಾಹಿಂ ಖಾಲಿಫುಲ್ಲಾ, ಶ್ರೀ ರವಿಶಂಕರ್ ಗುರೂಜಿ, ಶ್ರೀರಾಮ್ ಪಂಚು ಅವರನ್ನೊಳಗೊಂಡ ತ್ರಿಸದ್ಯ ಸಮಿತಿಯನ್ನು ಸುಪ್ರೀಂ ಕೋರ್ಟ್ ನೇಮಿಸಿದ್ದು, ತೀರ್ಪು ಬಂಧ ನಾಲ್ಕು ವಾರದೊಳಗೆ ಸಂಧಾನ ಪ್ರಕ್ರಿಯೆ ಆರಂಭಿಸುವಂತೆ ಸಮಿತಿಗೆ ಸೂಚನೆ ನೀಡಿದೆ. ಎಂಟು ವಾರಗಳೊಳಗೆ ಸಂಧಾನ ಪ್ರಕ್ರಿಯೆ ಮುಕ್ತಾಯಗೊಳ್ಳಬೇಕಿದೆ.
ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠ ಈ ಕುರಿತು ಮಾ.6 ರಂದು ವಿಚಾರಣೆ ನಡೆಸಿ, ತೀರ್ಪನ್ನು ಕಾಯ್ದಿರಿಸಿತ್ತು. ಪೀಠದಲ್ಲಿ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾ ಎಸ್ ಎ ಬೊಬ್ದೆ, ಡಿವೈ ಚಂದ್ರಚೂಡ್, ಅಶೋಕ್ ಭೂಷಣ್, ಎಸ್ ಅಬ್ದುಲ್ ನಾಜೀರ್ ಇದ್ದಾರೆ.
ಅಯೋಧ್ಯೆ ವಿವಾದ: ಫೈಜಾಬಾದ್ ಮೇಲೆ ಎಲ್ಲರ ಕಣ್ಣು
1992 ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಸಮಯದಲ್ಲಿ ಒಟ್ಟು 67 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿತ್ತು. ಅದರಲ್ಲಿ ಕೇವಲ 2.7 ಎಕರೆ ಭೂಮಿಯಷ್ಟೇ ವಿವಾದಾತ್ಮಕ ಸ್ಥಳವಾಗಿದ್ದು, ಉಳಿದವು ವಿವಾದಮುಕ್ತವಾಗಿವೆ. ಆದ್ದರಿಂದ ಈ ಭೂಮಿಯ ವಾರಸುದಾರರಾದ ರಾಮ ಜನ್ಮಭೂಮಿ ನ್ಯಾಸ್ ಟ್ರಸ್ಟ್ ಗೆ ಅದನ್ನು ಹಿಂದಿರುಗಿಸಬೇಕು ಎಂದು ಕೇಂದ್ರ ಸರ್ಕಾರ ಮನವಿ ಮಾಡಿದೆ. 2.77 ಎಕರೆ ವಿಸ್ತೀರ್ಣದ ಭೂಮಿಯನ್ನು ಸದ್ಯಕ್ಕೆ ಸುನ್ನಿ ವಕ್ಫ್ ಬೋರ್ಡ್, ನಿರ್ಮೋಹಿ ಅಖಾರ ಹಾಗು ರಾಮ್ ಲಲ್ಲಾ ಸಮಾನಾಗಿ ಹೊಂದಿವೆ.
|
ರವಿಶಂಕರ್ ಗುರೂಜಿ
ನಾನು ಈಗಷ್ಟೇ ಈ ಸುದ್ದಿಯ ಬಗ್ಗೆ ಕೇಳಿದೆ. ನನ್ನನ್ನೂ ಸಂಧಾನ ಸಮಿತಿಯಲ್ಲಿ ನೇಮಿಸಿದ್ದು ಸಂತೋಷ. ಸಂಧಾನ ನಡೆಸಿಯೇ ಸಮಸ್ಯೆ ಬಗೆಹರಿಸುವುದು ದೇಶದ ಒಳಿತಿನ ದೃಷ್ಟಿಯಿಂದಲೂ ಉತ್ತಮ ಎಂದು ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಮತ್ತು ಸಂಧಾನ ಸಮೀತಿ ಸದಸ್ಯರಲ್ಲೊಬ್ಬರಾದ ಶ್ರೀ ರವಿ ಶಂಕರ್ ಗುರೂಜಿ ಪ್ರತಿಕ್ರಿಯೆ ನೀಡಿದ್ದಾರೆ.
ಉಮಾ ಭಾರತಿ
ನಾನು ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ಮಾತನಾಡಲು ಬಯಸುವುದಿಲ್ಲ. ನ್ಯಾಯಾಲಯ ನೇಮಿಸಿದ ಸಂಧಾನಕಾರರ ಬಗ್ಗೆ ನಾನು ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ಆದರೆ ಒಬ್ಬ್ ಹಿಂದುವಾಗಿ ನನ್ನ ಪ್ರಕಾರ ರಾಮ ಜನಿಸಿದ ಸ್ಥಳದಲ್ಲೇ ಮಂದಿರ ನಿರ್ಮಿಸಬೇಕು ಎಂದು ಬಿಜೆಪಿ ನಾಯಕಿ ಉಮಾ ಭಾರತಿ ಹೇಳಿದ್ದಾರೆ.
ಅಯೋಧ್ಯೆ ವಿವಾದ : ಸುಪ್ರೀಂ ನೇಮಿಸಿರುವ ಮೂವರು ಸಂಧಾನಕಾರರು ಯಾರು?
|
ಮಾಯಾವತಿ
ಕ್ಯಾಮರಾ ಮೂಲಕ ಸಂಧಾನ ಪ್ರಕ್ರಿಯೆ ನಡೆಸಲು ಸುಪ್ರೀಂ ಕೋರ್ಟ್ ನಿರ್ಧರಿಸಿರುವುದು ಒಂದು ಪ್ರಾಮಾಣಿಕ ಪ್ರಯತ್ನ. ಸಂಬಂಧಗಳನ್ನು ಉಳಿಸಲು ಸುಪ್ರೀಂ ಕೋರ್ಟ್ ತೆಗೆದುಕೊಂಡ ಇಂಥ ನಿರ್ಧಾರ ಮೆಚ್ಚುವಂಥದ್ದು. ಬಿಎಸ್ಪಿ ಇದನ್ನು ಸ್ವಾಗತಿಸುತ್ತದೆ ಎಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಪ್ರತಿಕ್ರಿಯೆ ನೀಡಿದ್ದಾರೆ.
|
ಸಲ್ಮಾನ್ ಖುರ್ಷಿದ್
ಸಹಬಾಳ್ವೆ ಮತ್ತು ಸೌಹಾರ್ದತೆಯನ್ನು ನೆಲೆಗೊಳಿಸಲು ಸುಪ್ರೀಂ ಕೋರ್ಟ್ ಈ ಮೂಲಕ ನಮಗೆ ಒಂದು ಅತ್ಯುತ್ತಮ ಅವಕಾಶ ನೀಡಿದೆ. ಹಿಂದು ಮತ್ತು ಮುಸ್ಲಿಮರ ಸೌಹಾರ್ದತೆ ಹೆಚ್ಚಿಸಲು ಈ ಸಂಧಾನ ನೆರವಾಗಲಿದೆ. ಇದರಲ್ಲಿ ಗೆಲ್ಲು-ಸೋಲು ಎಂಬ ಭಯವಿಲ್ಲ. ಕೇವಲ ಗೆಲುವೊಂದೇ: ಅದು ಭಾರತೀಯರಿಗೆ, ಭಾರತಕ್ಕೆ ಎಂದಿದ್ದಾರೆ ಹಿರಿಯ ನ್ಯಾಯಾಧೀಶ, ಕಾಂಗ್ರೆಸ್ ಮುಖಂಡ ಸಲ್ಮಾನ್ ಖುರ್ಷಿದ್.
ಅಸಾದುದ್ದಿನ್ ಓವೈಸಿ
ಆದೇಶ ಸ್ವಾಗತಾರ್ಹ. ಆದರೆ ಸುಪ್ರೀಂ ಕೋರ್ಟ್, ಅಯೋಧ್ಯೆ ವಿವಾದದ ಸಂಧಾನಕಾರರನ್ನಾಗಿ ಶ್ರೀ ರವಿಶಂಕರ್ ಗುರೂಜಿ ಅವರನ್ನು ನೇಮಿಸಿದ್ದು ಸರಿಯಲ್ಲ. ಏಕೆಂದರೆ ಒಮ್ಮೆ ರವಿಶಂಕರ್ ಗುರೂಜಿ ಅವರೇ ಹೇಳಿದ್ದರು, "ಅಯೋಧ್ಯೆಯ ಕುರಿತ ತಮ್ಮ ವಾದವನ್ನು ಮುಸ್ಲಿಮರು ಬಿಟ್ಟುಕೊಡದೆ ಇದ್ದಲ್ಲಿ ಭಾರತವೂ ಸಿರಿಯಾ ಆಗಬಹುದು ಎಂದು. ಆದ್ದರಿಂದ ಅವರನ್ನು ಈ ಸಮಿತಿಯಲ್ಲಿ ನೇಮಿಸುವುದು ಸರಿಯಲ್ಲ. ಒಬ್ಬ ತಟಸ್ಥ ವ್ಯಕ್ತಿಯನ್ನು ನೇಮಿಸುವುದು ಒಳಿತು ಎಂದಿದ್ದಾರೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದಿನ್ ಓವೈಸಿ.