ಅಯೋಧ್ಯಾ ಪ್ರಕರಣ: ಸೌಹಾರ್ದದ ಸಂದೇಶ ನೀಡಿದ ಮುಸ್ಲಿಂ ಅರ್ಜಿದಾರರು
ನವದೆಹಲಿ, ಸೆಪ್ಟೆಂಬರ್ 5: ಅಯೋಧ್ಯಾದಲ್ಲಿನ ರಾಮ ಜನ್ಮಭೂಮಿ-ಬಾಬ್ರಿ ಮಸೀದಿಯ 2.77 ಎಕರೆ ಜಾಗದ ಮಾಲೀಕತ್ವದ ಕುರಿತಾದ ವಿವಾದಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಅರ್ಜಿದಾರರು ಸೌಹಾರ್ದದ ಸಂದೇಶ ರವಾನಿಸಿದ್ದಾರೆ.
ಬುಧವಾರ ಸುಪ್ರೀಂಕೋರ್ಟ್ನಲ್ಲಿ ವಿವಾದಕ್ಕೆ ಸಂಬಂಧಿಸಿದ ವಿಚಾರಣೆ ವೇಳೆ ಮುಸ್ಲಿಂ ಅರ್ಜಿದಾರರು, ಒಂದು ವೇಳೆ ವಿವಾದಿತ ಭೂಮಿಯ ಹಕ್ಕು ತಮಗೆ ದೊರೆತರೆ ಧ್ವಂಸ ಮಾಡಲಾದ ಮಸೀದಿಯ ಹೊರಭಾಗದ ಅಂಗಳದಲ್ಲಿ ರಾಮನ ಪೂಜೆಗೆ ಅವಕಾಶ ಕಲ್ಪಿಸುತ್ತೇವೆ ಎಂದು ಹೇಳಿದ್ದಾರೆ.
ಆಯೋಧ್ಯಾ ರಾಮಮಂದಿರಕ್ಕೆ ಚಿನ್ನದ ಇಟ್ಟಿಗೆ ನೀಡುತ್ತೇನೆಂದ ಮೊಘಲರ ವಂಶಸ್ಥ
ನಿರ್ಮೋಹಿ ಅಖಾರವನ್ನು ಬೆಂಬಲಿಸಿ ದೇವಕಿ ನಂದನ್ ಅಗರವಾಲ್ 1989ರಲ್ಲಿ ಸಲ್ಲಿಸಿದ್ದ ಪೂಜೆಯ ಹಕ್ಕಿನ ಅರ್ಜಿಗೆ ಮುಸ್ಲಿಂ ಅರ್ಜಿದಾರರ ಪರವಾಗಿ ವಾದ ಮಂಡಿಸಿದ ವಕೀಲ ರಾಜೀವ್ ಧವನ್ ವಿರೋಧ ವ್ಯಕ್ತಪಡಿಸಿದರು. ಅರ್ಚಕರಿಗೆ ಇರುವುದು ಪೂಜೆಗೆ ಸಂಬಂಧಿಸಿದ ಸಂಗತಿಗಳನ್ನು ನಿಭಾಯಿಸುವ ಹಕ್ಕು ಮಾತ್ರ. ಅವರ ಕರ್ತವ್ಯಕ್ಕೆ ಅಡ್ಡಿಯಾದರೆ ಮಾತ್ರ ಅವರ ಪರವಾಗಿ ಸ್ನೇಹಿತರು ಅರ್ಜಿ ಸಲ್ಲಿಸಬಹುದು ಎಂದು ವಾದಿಸಿದರು.
ಸುನ್ನಿ ವಕ್ಫ್ ಮಂಡಳಿಯ ಹಕ್ಕು
''ಭೂಮಿಯ ಮೇಲೆ ತಮ್ಮ ಸಂಪೂರ್ಣ ಹಕ್ಕು ಇದೆ ಎಂದು ಪ್ರತಿಪಾದಿಸಿದರು. ''ಸಹ ಜೀವನಕ್ಕೆ ಅಡ್ಡಿಯಿಲ್ಲ, ಆದರೆ ಅದರ ಮಾಲೀಕತ್ವವು ಸುನ್ನಿ ವಕ್ಫ್ ಮಂಡಳಿಗೆ ಸಿಗಬೇಕು. ಹಿಂದೂಗಳು ಮತ್ತು ನಾವು ಒಟ್ಟಾಗಿ ಜೀವಿಸಬಹುದು. ಆದರೆ ಅದು ನಮ್ಮ ಆಸ್ತಿ. ಕೆಲವು ಜನರು ಬಂದು ಪ್ರಾರ್ಥನೆ ಸಲ್ಲಿಸಲು ಬಯಸಿದ್ದರು. ಹಾಗಾಗಿ ನಾನು ಅವರಿಗೆ ಅವಕಾಶ ನೀಡಿದೆ'' ಎಂದು ಹೇಳಿದರು.
ಪೂಜೆಗೆ ವಿಗ್ರಹ ಬೇಕಲ್ಲವೇ?
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾಯಮೂರ್ತಿಗಳಾದ ಎಸ್ಎ ಬೊಬ್ಡೆ, ಡಿವೈ ಚಂದ್ರಚೂಡ, ಅಶೋಕ್ ಭೂಷಣ್ ಮತ್ತು ಎಸ್ ಅಬ್ದುಲ್ ನಜೀರ್ ಅವರನ್ನು ಒಳಗೊಂಡ ನ್ಯಾಯಪೀಠ ಈ ಬಗ್ಗೆ ತೀವ್ರ ಚರ್ಚೆ ನಡೆಸಿತು. 'ಅಖಾರಕ್ಕೆ ಪೂಜೆಯ ಹಕ್ಕು ನೀಡಿದರೆ ದೇವರ ಪ್ರತಿಷ್ಠಾಪನೆಯ ಹಕ್ಕನ್ನು ನೀಡುವುದು ಸಹ ಅಗತ್ಯವಾಗುತ್ತದೆ. ಏಕೆಂದರೆ ದೇವರ ಮೂರ್ತಿ ಇಲ್ಲದೆ ಪೂಜೆಯ ಹಕ್ಕು ಉದ್ಭವಿಸುವುದೇ ಇಲ್ಲ. ಮಸೀದಿಯ ಒಳಗೆ ವಿಗ್ರಹವನ್ನು ಪೂಜಿಸಲು ಹಿಂದೂಗಳಿಗೆ ಅವಕಾಶ ನೀಡಿದರೆ ಆ ಮಸೀದಿಯು ಕುರಾನ್ ಕಾನೂನಿನ ಅಡಿಯಲ್ಲಿಯೇ ಉಳಿಯುತ್ತದೆಯೇ?' ಎಂದು ನ್ಯಾಯಪೀಠ ಪ್ರಶ್ನಿಸಿತು.
ಬಾಬ್ರಿ ಮಸೀದಿ ಹಕ್ಕನ್ನು ಪ್ರತಿಪಾದಿಸಲು ದಾಖಲೆ ನೀಡಿ: ಸುಪ್ರೀಂ
ಮುಸ್ಲಿಂ-ಹಿಂದೂಗಳು ಒಟ್ಟಿಗೆ ಪ್ರಾರ್ಥಿಸಲು ಸಾಧ್ಯವೇ?
'ಅಲ್ಲಿ ದೇವರ ವಿಗ್ರಹವಿತ್ತು. ಮೂರ್ತಿಗಳಿದ್ದವು. ಅಲ್ಲಿ ವಿಗ್ರಹಗಳು ಇರಲಿಲ್ಲವೆಂದು ನಾವು ನಾಟಕವಾಡಲು ಸಾಧ್ಯವಿಲ್ಲ. ಆದರೆ, 1985ರಲ್ಲಿ ರಘುವರ ದಾಸ್ ಸಲ್ಲಿಸಿದ ಅರ್ಜಿಯಂತೆ ಹಿಂದೂಗಳ ಪೂಜಿಸುವ ಹಕ್ಕನ್ನು ನೀಡಲಾಗಿತ್ತು. ಆದರೂ ಭೂಮಿಯ ಹಕ್ಕನ್ನು ನಿರಾಕರಿಸಲಾಗಿತ್ತು' ಎಂದು ಧವನ್ ತಿಳಿಸಿದರು.
'ಮುಸ್ಲಿಮರು ಮತ್ತು ಹಿಂದೂಗಳು ಒಟ್ಟಿಗೆ ಪ್ರಾರ್ಥನೆ ಸಲ್ಲಿಸಲು ಸಾಧ್ಯವೇ? ಸೂಫಿ ಪಂಥ ಪ್ರಾಬಲ್ಯ ಹೊಂದಿದ್ದ ಭಾರತೀಯ ಸಮಾಜದಲ್ಲಿ ಇಸ್ಲಾಮಿಕ್ ಕಾನೂನಿನ ಅಡಿಯಲ್ಲಿರುವ ನಿಯಮಾವಳಿಗಳೇನು?' ಎಂದು ನ್ಯಾಯಮೂರ್ತಿ ನಜೀರ್ ಪ್ರಶ್ನಿಸಿದರು.
ಭೂಮಿಯ ಮೇಲೆ ಹಕ್ಕು ಪ್ರತಿಪಾದಿಸುತ್ತಿಲ್ಲ
'ಕುರಾನಿಕ್ ಕಾನೂನು ಪರಿಪೂರ್ಣ ಕಾನೂನು. ಆದರೆ ಆಧುನಿಕ ಪರಿಸ್ಥಿತಿಯಲ್ಲಿ ಇಲ್ಲಿ ಕುರಾನಿಕ್ ಕಾನೂನು ಹೇಗೆ ಅನ್ವಯವಾಗಬಹುದು ಎಂಬುದನ್ನು ಸುಪ್ರೀಂಕೋರ್ಟ್ ನಿರ್ಧರಿಸಬೇಕು' ಎಂದು ಧವನ್ ಪ್ರತಿಕ್ರಿಯೆ ನೀಡಿದರು.
ಇದಕ್ಕೆ ಮರು ಪ್ರಶ್ನೆ ಹಾಕಿದ ನ್ಯಾ. ಚಂದ್ರಚೂಡ್, 'ಹಾಗಾದರೆ ನೀವು ವಿವಾದಿತ ಭೂಮಿಯ ಮೇಲೆ ನಿಮ್ಮದೇ ಸಂಪೂರ್ಣ ಹಕ್ಕನ್ನು ಬಯಸುತ್ತಿಲ್ಲ, ಆದರೆ ಹಿಂದೂಗಳೊಂದಿಗೆ ಸಹಜೀವನ ನಡೆಸುವುದಕ್ಕೆ ವಕಾಲತ್ತು ವಹಿಸುತ್ತಿದ್ದೀರಾ?' ಎಂದು ಕೇಳಿದರು.
ಅಯೋಧ್ಯೆ ಪ್ರಕರಣ: ಆ 6 ರಿಂದ ಸುಪ್ರೀಂ ಕೋರ್ಟ್ ನಲ್ಲಿ ಪ್ರತಿದಿನ ವಿಚಾರಣೆ