ಅಯೋಧ್ಯೆ ಪ್ರಕರಣ ಮುಕ್ತಾಯಕ್ಕೆ ದಿನಾಂಕ ನಿಗದಿ ಪಡಿಸಿದ ಸುಪ್ರೀಂ
ನವದೆಹಲಿ, ಸೆಪ್ಟೆಂಬರ್ 18: ವರ್ಷಾನು-ವರ್ಷದಿಂದ ನ್ಯಾಯಾಲಯದಲ್ಲೇ ಇರುವ ದೇಶದ ಅತಿ ದೊಡ್ಡ ಪ್ರಕರಣವೆಂದು ಬಿಂಬಿತವಾಗಿರುವ ರಾಮ ಮಂದಿರ ವಿವಾದ ಅಥವಾ ಅಯೋಧ್ಯಾ ಪ್ರಕರಣ ಅಂತ್ಯಕ್ಕೆ ಸುಪ್ರೀಕೋರ್ಟ್ ಮುಖ್ಯನ್ಯಾಯಮೂರ್ತಿ ಅವರು ದಿನಾಂಕ ನಿಗದಿಪಡಿಸಿದ್ದಾರೆ.
ಮುಂದಿನ ತಿಂಗಳು ಅಂದರೆ ಅಕ್ಟೋಬರ್ 18 ಕ್ಕೆ ಅಯೋಧ್ಯೆ ಪ್ರಕರಣದ ವಾದ ಮುಕ್ತಾಯವಾಗಬೇಕು ಎಂದು ಸುಪ್ರೀಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ಸಮಯ ನಿಗದಿಪಡಿಸಿದ್ದಾರೆ.
ಅಯೋಧ್ಯಾ ಪ್ರಕರಣ: ಸೌಹಾರ್ದದ ಸಂದೇಶ ನೀಡಿದ ಮುಸ್ಲಿಂ ಅರ್ಜಿದಾರರು
ಎರಡೂ ಕಡೆಯ ಪಾರ್ಟಿಗಳಿಗೆ ತಮ್ಮ ವಾದ ಮಂಡಿಸಲು ಹಿಡಿಸಬಹುದಾದ ಸಮಯದ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಿರುವ ಸುಪ್ರೀಂಕೋರ್ಟ್ ಆದಷ್ಟು ತ್ವರಿತವಾಗಿ ಈ ಪ್ರಕರಣವನ್ನು ಇತ್ಯರ್ಥ ಮಾಡುವ ಸೂಚನೆ ನೀಡಿದೆ.
ರಾಮ ಮಂದಿರ ಮತ್ತು ಬಾಬ್ರಿ ಮಸೀದಿಯ 2.77 ಎಕರೆ ಭೂಮಿಯ ಕುರಿತಾದ ಈ ಪ್ರಕರಣವು 70 ವರ್ಷ ಹಳೆಯದ್ದಾಗಿದೆ. ಪ್ರಕರಣವನ್ನು ಮುಗಿಸಿ ನ್ಯಾಯ ಹಂಚಿಕೆ ಮಾಡುವ ಉದ್ದೇಶದಿಂದಾಗಿ ಪ್ರಕರಣ ಕುರಿತು ಪ್ರತಿದಿನ ಹಿಯರಿಂಗ್ ಅನ್ನು ಇಟ್ಟುಕೊಳ್ಳಲಾಗಿತ್ತು. ಪ್ರತಿ ದಿನವೂ ವಾದ-ವಿವಾದಗಳೂ ಆಗುತ್ತಲೇ ಇದೆ. ನಿನ್ನೆಯ ವರೆಗೆ ಸತತ 25 ದಿನದ ವಾದ-ವಿವಾದ ಆಲಿಸಿಲಾಗಿದೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯ್ ಅವರು ನವೆಂಬರ್ 17 ರಂದು ನಿವೃತ್ತಿ ಹೊಂದಲಿದ್ದು, ಆ ಒಳಗೆ ಅಯೋಧ್ಯೆ ತೀರ್ಪು ಪ್ರಕಟವಾಗಲೇ ಬೇಕಿದೆ. ಹಾಗಾಗಿ ಎರಡೂ ಪಾರ್ಟಿಗಳು ತಮ್ಮ-ತಮ್ಮ ವಾದವನ್ನು ಶೀಘ್ರವಾಗಿ ಮಂಡಿಸಲು ಹೇಳಲಾಗಿದೆ.
ಬಾಬ್ರಿ ಮಸೀದಿ ಹಕ್ಕನ್ನು ಪ್ರತಿಪಾದಿಸಲು ದಾಖಲೆ ನೀಡಿ: ಸುಪ್ರೀಂ
ಇನ್ನು ಮುಂದೆ ಶನಿವಾರವೂ ಸಹ ವಿಚಾರಣೆ ನಡೆಯಲಿ ಎಂದಿರುವ ರಂಜನ್ ಗೊಗೋಯ್ ಅವರು ಪ್ರಕರಣದ ಅಂತ್ಯಕ್ಕೆ ಹೆಚ್ಚಿನ ಆಸ್ತೆ ತೋರಿದ್ದಾರೆ. ಹಾಗಾಗಿ ಪ್ರಕರಣದ ವಾದ ಮಂಡನೆ ಅಕ್ಟೋಬರ್ 18 ರ ಒಳಗಾಗಿ ಮುಗಿಯುವ ಸಂಭವನೀಯತೆ ಇದೆ. ಆ ನಂತರ ಕೆಲವೇ ದಿನಗಳಲ್ಲಿ ತೀರ್ಪು ಪ್ರಕಟವಾಗಲಿದೆ.