ದೆಹಲಿ ಸಿಎಂ ಕೇಜ್ರಿವಾಲ್ ನಿವಾಸದ ಮೇಲಿನ ದಾಳಿ ಪ್ರಕರಣ, ಸಂಸದ ತೇಜಸ್ವಿ ಸೂರ್ಯಗೆ ನೋಟಿಸ್
ದೆಹಲಿ, ಏಪ್ರಿಲ್ 26 : ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿವಾಸದ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಹಾಜರಾಗುವಂತೆ ದೆಹಲಿ ಪೊಲೀಸರು ಬಿಜೆಪಿ ಸಂಸದ ತೇಜಸ್ವಿ ಸೂರ್ಯಗೆ ನೋಟಿಸ್ ಜಾರಿ ಮಾಡಿದ್ದಾರೆ.
"ದಿ ಕಾಶ್ಮೀರಿ ಫೈಲ್ಸ್" ವಿಚಾರವಾಗಿ ಕಳೆದ ತಿಂಗಳು ಮುಖ್ಯಮಂತ್ರಿ ಕೇಜ್ರಿವಾಲ್ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಭಾಷಣ ಮಾಡಿದ್ದರು. ಈ ಭಾಷಣದ ವೇಳೆ ಕಾಶ್ಮೀರಿ ಪಂಡಿತರ ಹತ್ಯಾಕಾಂಡವಾಗಿರುವುದು ಸುಳ್ಳು, ಬಿಜೆಪಿಯವರು ಈ ವಿಚಾರವನ್ನ ರಾಜಕೀಯವಾಗಿ ಇಟ್ಟುಕೊಂಡು ಕಾಶ್ಮೀರಿ ಫೈಲ್ಸ್ ಚಿತ್ರವನ್ನ ಪ್ರಚಾರ ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ದ ವಾಗ್ದಾಳಿ ನಡೆಸಿದ್ದರು.
ಇನ್ನು ಕೇಜ್ರಿವಾಲ್ ಈ ಭಾಷಣವನ್ನು ವಿರೋಧಿಸಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾಕಾರರು ಸಿಎಂ ಕೇಜ್ರಿವಾಲ್ ಮನೆ ಮುಂಭಾಗದ ಗೇಟ್ನ್ನು ಮುರಿದು ರಂಪಾಟ ಕೂಡ ಮಾಡಿದ್ದರು. ಕೂಡಲೇ ಸಿಎಂ ಕೇಜ್ರಿವಾಲ್ ಬೇಷರತ್ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದರು. ಕ್ಷಮೆ ಕೇಳುವವರೆಗೂ ನಮ್ಮ ಹೋರಾಟ ನಡೆಯುತ್ತದೆ ಎಂದು ಬಿಜೆಎಪಿ ಯುವ ಮೋರ್ಚಾ ಪ್ರತಿಭಟನೆ ಮುಂದುವರೆಸಿದ್ದರು. ಅಲ್ಲದೆ ಪ್ರತಿಭಟನೆ ಸಂದರ್ಭದಲ್ಲೇ ಸಂಸದ ತೇಜಸ್ವಿ ಸೂರ್ಯ ಕೇಜ್ರಿವಾಲ್ ವಿರುದ್ದ ಹರಿಹಾಯ್ದಿದ್ದರು. ರಾಮಮಂದಿರವನ್ನು ಗೇಲಿ ಮಾಡುವುದು, ಹಿಂದೂ ದೇವತೆಗಳ ಬಗ್ಗೆ ತಮಾಷೆ ಮಾಡುವುದು, ಸರ್ಜಿಕಲ್ ಸ್ಟ್ರೈಕ್ಗಳನ್ನ ಪ್ರಶ್ನಿಸುವುದು ಆಮ್ ಆದ್ಮಿ ಪಕ್ಷದ ನೀತಿಯಾಗಿದೆ ಎಂದು ಕಿಡಿಕಾರಿದ್ದರು.
ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ 8 ಜನರನ್ನು ಬಂಧಿಸಿದ್ದಾರೆ. ಈಗ ಸಂಸದ ತೇಜಸ್ವಿ ಸೂರ್ಯ ಅವರಿಗೆ ನೋಟಿಸ್ ನೀಡಿದ್ದು, ಪ್ರಕರಣ ಸಂಬಂಧ ತನಿಖೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಸದ್ಯಕ್ಕೆ ಸಂಸದ ತೇಜಸ್ವಿ ಸೂರ್ಯ ಈ ವಿಚಾರಣೆಗೆ ಹಾಜರಾಗುತ್ತಾರ ಅಥವಾ ಇಲ್ಲವಾ ಎಂದು ಕಾದು ನೋಡಬೇಕಿದೆ.