ಅಸಹಿಷ್ಣುತೆ ವಿರುದ್ಧ 'ಮೌನ' ಮುರಿದ ಮನಮೋಹನ ಸಿಂಗ್
ನವದೆಹಲಿ, ನವೆಂಬರ್ 06 : "ವಿಚಾರವಾದಿಗಳ ಹತ್ಯೆ ಸಮರ್ಥಿಸಬಾರದು ಮತ್ತು ಇಂಥ ಹೀನಾಯ ಕೃತ್ಯವನ್ನು ಪ್ರತಿರೋಧಿಸುವವರ ದನಿಯನ್ನೂ ದಮನಿಸಬಾರದು. ಇದರಿಂದಾಗಿ ದೇಶದ ವೈವಿಧ್ಯತೆಗೆ ಕುಂದು ಬಂದಿದೆ, ದೇಶ ಮತ್ತಷ್ಟು ದುರ್ಬಲವಾಗುತ್ತದೆ" ಎಂದು ಕಟುಟೀಕೆ ಮಾಡಿದವರು ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್.
'ಸ್ವಾತಂತ್ರ್ಯವಿಲ್ಲದೆ ಶಾಂತಿಯಿಲ್ಲ, ಶಾಂತಿಯಿಲ್ಲದೆ ಸ್ವಾತಂತ್ರ್ಯವಿಲ್ಲ' ಎಂಬ ವಿಷಯ ಕುರಿತು ದೇಶದ ರಾಜಧಾನಿಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ, ಲೇಖಕರ ಮೇಲೆ ಆಗುತ್ತಿರುವ ಹಲ್ಲೆ, ಹತ್ಯೆಯ ಕುರಿತು ಕಳವಳ ವ್ಯಕ್ತಪಡಿಸಿದರು. [ಬುದ್ದಿಜೀವಿಗಳಿಗೆ ದಿಗಿಲು: ಭೈರಪ್ಪ ವಾಗ್ದಾಳಿ]
'ಅಸಹಿಷ್ಣುತೆ' ಬಗ್ಗೆ ದೇಶದೆಲ್ಲೆಡೆ ಆಗುತ್ತಿರುವ ಪ್ರತಿಭಟನೆ, ಚರ್ಚೆಯನ್ನು ಬೆಂಬಲಿಸಿ 'ಮೌನಿ' ಎಂದೇ ಹೆಸರುಗಳಿಸಿದ್ದ ಡಾ. ಮನಮೋಹನ ಸಿಂಗ್ ಅವರು ತಮ್ಮ ದನಿ ಎತ್ತಿದ್ದಾರೆ. ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗುತ್ತಿದೆ, ಜಾತಿಯ ಹೆಸರಿನಲ್ಲಿ ದಬ್ಬಾಳಿಕೆಗಳಾಗುತ್ತಿವೆ, ಇದು ದೇಶದ ಮೇಲಾಗುತ್ತಿರುವ ಹಲ್ಲೆ' ಎಂದು ಕಿಡಿ ಕಾರಿದರು. [ಪ್ರಶಸ್ತಿ ವಾಪಸ್ ಮಾಡಿ ಅವಮಾನಿಸಲಾರೆ : ಕಮಲ್ ಹಾಸನ್]
ವಾಕ್ ಸ್ವಾತಂತ್ರ್ಯವನ್ನು ಅಥವಾ ಪ್ರತಿರೋಧವನ್ನು ದಮನಿಸುವುದು ದೇಶದ ಆರ್ಥಿಕ ಅಭಿವೃದ್ಧಿಗೆ ಮಾರವಾಗಬಲ್ಲದು. ಸ್ವಾತಂತ್ರ್ಯವಿಲ್ಲದೆ ಮುಕ್ತವಾಗಿ ಅಭಿಪ್ರಾಯ ಮಂಡಿಸಲು ಸಾಧ್ಯವಿಲ್ಲ ಎಂದು ತಮ್ಮಲ್ಲಿ ಹುದುಗಿಸಿಟ್ಟುಕೊಂಡಿದ್ದ ಆಕ್ರೋಶವನ್ನು ಸಿಂಗ್ ಹೊರಹಾಕಿದ್ದಾರೆ.
ಆಗಸ್ಟ್ 30ರಂದು ಧಾರವಾಡದಲ್ಲಿ ಎಂಎಂ ಕಲಬುರ್ಗಿಯವರ ಹತ್ಯೆ, ಸೆಪ್ಟೆಂಬರ್ 28ರಂದು ಉತ್ತರಪ್ರದೇಶದ ದಾದ್ರಿಯಲ್ಲಿ 52 ವರ್ಷದ ಮುಸ್ಲಿಂ ವ್ಯಕ್ತಿಯ ಹತ್ಯೆ ಮತ್ತು ಫರೀದಾಬಾದ್ ನಲ್ಲಾದ ದಲಿತ ಮಕ್ಕಳ ಹತ್ಯೆ ನಡೆದಾದ ನಂತರ ದೇಶದಾದ್ಯಂತ ನಡೆಯುತ್ತಿರುವ ಪ್ರಶಸ್ತಿ ವಾಪಸಿ ಮತ್ತು ಪ್ರತಿಭಟನೆಗೆ ಸಿಂಗ್ ಅವರು ತಮ್ಮ ದನಿ ಸೇರಿಸಿದ್ದಾರೆ. [ದನದ ಮಾಂಸದ ಸುತ್ತ ನಾರುತ್ತಿರುವ ರಾಜಕೀಯ ದುರ್ಮಾಂಸ]
ಹೆಚ್ಚುತ್ತಿರುವ ಅಸಹಿಷ್ಣುತೆಯ ವಿರುದ್ಧ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ಪಾದಯಾತ್ರೆ ನಡೆಸಿ ರಾಷ್ಟ್ರಪತಿಗೆ ಮನಸಿ ಸಲ್ಲಿಸಿದ ಗುಂಪಿನಲ್ಲಿ ಡಾ. ಮನಮೋಹನ ಸಿಂಗ್ ಅವರು ಇದ್ದರು. [ಪ್ರಶಸ್ತಿ ಹಿಂದಿರುಗಿಸುತ್ತಿರುವವರಿಗೆ ವಿದ್ಯಾ ಬಾಲನ್ ಟಾಂಗ್ ನೀಡಿದ್ದು ಹೀಗೆ]