ಅಸ್ಸಾಂನಲ್ಲಿ ಬಿರಿಯಾನಿ ತಿಂದ 145 ಮಂದಿ ಆಸ್ಪತ್ರೆಗೆ ದಾಖಲು
ದಿಸ್ಪುರ್, ಫೆಬ್ರವರಿ.04: ಸರ್ಕಾರವೇ ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ಬಿರಿಯಾನಿ ಸೇವಿಸಿದ 145 ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಅಸ್ಸಾಂನ ಕರ್ಬಿ ಅಂಗ್ಲಾಂಗ್ ಜಿಲ್ಲೆಯಲ್ಲಿ ನಡೆದಿದೆ.
ದಿಫು ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಕೋರ್ಸ್ ಆರಂಭಿಸುವುದಕ್ಕೆ ಸ್ವತಃ ಮುಖ್ಯಮಂತ್ರಿ ಸರ್ಬಾನಂದ್ ಸೋನಾವಾಲ ಮತ್ತು ಆರೋಗ್ಯ ಸಚಿವ ಹಿಮಾಂತ್ ಬಿಸ್ವಾ ಶರ್ಮಾ ಉಪಸ್ಥಿತಿ ವಹಿಸಿದ್ದು, ಸರಿಸುಮಾರು 8,000ಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಹಾಜರಾಗಿದ್ದರು.
ಪ್ರತಿಭಟನೆಗೆ ಬಂದ ರೈತರು ಪಿಜ್ಜಾ, ಬಿರಿಯಾನಿ ತಿನ್ನುವಂತಿಲ್ಲವೇ?
ಬುಧವಾರ ರಾತ್ರಿ ಕಾರ್ಯಕ್ರಮದಲ್ಲಿ ನೀಡಿದ ಬಿರಿಯಾನಿ ಸೇವಿಸಿದ ನಂತರದ ಹಲವರ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿತು. 145 ಜನರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, 28 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಬಾಕಿ ಉಳಿದ 117 ಜನರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಸಚಿವ ಹಿಮಾಂತ್ ಬಿಸ್ವಾ ಶರ್ಮಾ ತಿಳಿಸಿದ್ದಾರೆ.
ಆರೋಗ್ಯ ಸಚಿವರಲ್ಲೂ ಆರೋಗ್ಯ ಸಮಸ್ಯೆ:
ವೈದ್ಯಕೀಯ ಕಾಲೇಜು ಕಾರ್ಯಕ್ರಮದಲ್ಲಿ ಬಿರಿಯಾನಿ ಸೇವಿಸಿದ ಬಹುಪಾಲು ಜನರಲ್ಲಿ ಹೊಟ್ಟೆನೋವು ಕಾಣಿಸಿಕೊಂಡಿದೆ. ಆಸ್ಪತ್ರೆಗೆ ದಾಖಲಾದವರ ಪೈಕಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ಸಾವಿಗೆ ವಿಷಾಹಾರ ಸೇವನೆ ಕಾರಣವೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತದೆ. ಕಾರ್ಯಕ್ರಮದಲ್ಲಿ ನೀಡಿದ ಆಹಾರವನ್ನು ಸಂಗ್ರಹಿಸಿದ್ದು, ಪರೀಕ್ಷೆಗೆ ಕಳುಹಿಸಲಾಗಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಿ ಅಲ್ಲಿ ನೀಡಿದ ಬಿರಿಯಾನಿ ಸೇವಿಸಿದ ತಮಗೂ ಕೂಡಾ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಆದರೆ ಇದೀಗ ಯಾವುದೇ ರೀತಿ ತೊಂದರೆಯಿಲ್ಲ ಎಂದು ಸ್ವತಃ ಆರೋಗ್ಯ ಸಚಿವ ಹಿಮಾಂತ್ ಬಿಸ್ವಾ ಶರ್ಮಾ ಹೇಳಿದ್ದಾರೆ. ಇನ್ನು, ಘಟನೆಗೆ ಕಾರಣ ಏನು ಎಂಬುದರ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲಾಗುತ್ತದೆ ಎಂದು ಕರ್ಬಿ ಅಂಗ್ಲಾಂಗ್ ಜಿಲ್ಲಾಧಿಕಾರಿ ಎನ್. ಜಿ. ಚಂದ್ರ ಧ್ವಜ ಸಿಂಗ್ ತಿಳಿಸಿದ್ದಾರೆ.