ಬಿಡಿಸಲಾರದ ನಂಟು: ಫೆಬ್ರವರಿ 14 ಹಾಗೂ ಅರವಿಂದ್ ಕೇಜ್ರಿವಾಲ್
ನವದೆಹಲಿ, ಫೆಬ್ರವರಿ 11: ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಮತ್ತೊಮ್ಮೆ ಅಧಿಕಾರ ಗದ್ದುಗೆಗೇರಿದೆ. ದೆಹಲಿ ವಿಧಾನಸಭೆ ಚುನಾವಣೆ 2020ರಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಪ್ರಾದೇಶಿಕ ಪಕ್ಷ ಎಎಪಿ ಎದುರು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಮಂಕಾಗಿವೆ.
ಸತತ ಎರಡನೇ ಬಾರಿಗೆ ಬಿಜೆಪಿ ವಿರೋಧ ಪಕ್ಷ ಸ್ಥಾನವೂ ಸಿಗದಂಥ ಪರಿಸ್ಥಿತಿಗೆ ದೂಡಲ್ಪಟ್ಟಿದೆ. ಇನ್ನು ದೇಶದ ಪುರಾತನ ಪಕ್ಷ ಕಾಂಗ್ರೆಸ್ ಪರಿಸ್ಥಿತಿ ಶೋಚನೀಯವಾಗಿದ್ದು, ಹಲವಾರು ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡಿದ್ದಲ್ಲದೆ, ಖಾತೆಯನ್ನು ತೆರೆಯುವಲ್ಲಿ ವಿಫಲವಾಗಿದೆ.
ಕೇಜ್ರಿವಾಲ್ ಫೆ.14ರ ಬಗ್ಗೆ ಹಳೆ ಟ್ವೀಟ್:
Last year, on this day, Delhi fell in love with AAP. This bonding is deep n everlasting.
— Arvind Kejriwal (@ArvindKejriwal) February 14, 2016
ಸತತ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಅರವಿಂದ್ ಕೇಜ್ರಿವಾಲ್ ಸಜ್ಜಾಗುತ್ತಿದ್ದು, ಬಹುತೇಕ ಫೆಬ್ರವರಿ 14 ದಿನಾಂಕದಂದು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಹೆಚ್ಚಿದೆ.
Delhi Election Results 2020 Live:ಬಿಜೆಪಿ ಒಂದು ಕ್ಷೇತ್ರದಲ್ಲಿ ಗೆಲುವು
ಬಹುಶಃ ಇದೇ ಮೊದಲ ಬಾರಿಗೆ ಚುನಾವಣಾ ಪೂರ್ವ ಹಾಗೂ ಮತದಾನೋತ್ತರ ಸಮೀಕ್ಷೆಗಳ ಫಲಿತಾಂಶ ನಿಜವಾಗಿದೆ. ಎಎಪಿಗೆ ಭರ್ಜರಿ ಗೆಲುವು ಲಭಿಸಿದೆ.
ಕೇಜ್ರಿವಾಲ್ ಅವರ ಟ್ರ್ಯಾಕ್ ರೆಕಾರ್ಡ್
ಆರ್ ಟಿಐ ಕಾಯ್ದೆ ಸದ್ಬಳಕೆ, ಜನ್ ಲೋಕಪಾಲ್ ಮಸೂದೆಗಾಗಿ ಆಗ್ರಹ, ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರ ಭ್ರಷ್ಟಾಚಾರ ವಿರೋಧಿ ಹೋರಾಟದ ಮೂಲಕ ಮುಂಚೂಣಿಗೆ ಬಂದ ಗಾಜಿಯಾಬಾದ್ ಮೂಲದ ಕೇಜ್ರಿವಾಲ್ ಅವರು ಐಐಟಿ ಖರಗ್ ಪುರ್ ನಲ್ಲಿ ಇಂಜಿನಿಯರ್ ಪದವಿ ಪಡೆದು ಇಂಡಿಯನ್ ರೆವಿನ್ಯೂ ಸರ್ವೀಸ್ ನಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದವರು. 2012ರ ನವೆಂಬರ್ 26ರಂದು ಆಮ್ ಆದ್ಮಿ ಪಕ್ಷ ಸ್ಥಾಪಿಸಿದ್ದು, 2013ರಲ್ಲಿ ಹಿರಿಯ ರಾಜಕಾರಣಿ, ದೆಹಲಿಯನ್ನು ದೀರ್ಘಕಾಲ ಆಳಿದ ಸಿಎಂ ಶೀಲಾ ದೀಕ್ಷಿತ್ ರನ್ನು ಸೋಲಿಸಿದ್ದು ಕೇಜ್ರಿವಾಲ್ ಅವರ ಟ್ರ್ಯಾಕ್ ರೆಕಾರ್ಡ್.
ಫೆಬ್ರವರಿ 14 ಪ್ರೇಮಿಗಳ ದಿನದ ನಂಟು ಹೇಗೆ?
2012ರಲ್ಲಿ ಸ್ಥಾಪನೆಯಾದ ಪ್ರಾದೇಶಿಕ ಪಕ್ಷ ಎಎಪಿ 2013ರಲ್ಲಿ ಮೊದಲ ಚುನಾವಣೆ ಎದುರಿಸಿತು. ಅಂದು 70 ಸ್ಥಾನಗಳ ಪೈಕಿ ಬಿಜೆಪಿ 30 ಸ್ಥಾನ, ಎಎಪಿ 28 ಹಾಗೂ ಕಾಂಗ್ರೆಸ್ 8 ಸ್ಥಾನ ಗಳಿಸಿ ಅತಂತ್ರ ವಿಧಾನಸಭೆ ನಿರ್ಮಾಣವಾಗಿತ್ತು. ಕಾಂಗ್ರೆಸ್ ಜೊತೆ ಕೈಜೋಡಿಸಿದ ಎಎಪಿ ಮೊದಲ ಯತ್ನದಲ್ಲೇ ಅಧಿಕಾರಕ್ಕೇರಿತು. ಡಿಸೆಂಬರ್ ತಿಂಗಳಲ್ಲಿ ಕೇಜ್ರಿವಾಲ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರು.
ಆದರೆ, ಕೆಲ ಸಮಯದಲ್ಲೇ ಎಎಪಿ ಹಾಗೂ ಕಾಂಗ್ರೆಸ್ ನಡುವೆ ಮೈತ್ರಿ ಮುರಿದು ಬಿದ್ದಿತು. ಅನಿವಾರ್ಯವಾಗಿ ಕೇಜ್ರಿವಾಲ್ ಅಲ್ಪಾವಧಿ ಸಿಎಂ ಪಟ್ಟ ಕಟ್ಟಿಕೊಳ್ಳಬೇಕಾಯಿತು. 48 ದಿನಗಳ ಆಡಳಿತದ ನಂತರ ಫೆಬ್ರವರಿ 14, 2014ರಂದು ಕೇಜ್ರಿವಾಲ್ ರಾಜೀನಾಮೆ ಸಲ್ಲಿಸಿದರು.
ಪ್ರಮಾಣ ವಚನ ಸ್ವೀಕರಿಸಿದ್ದು ಫೆಬ್ರವರಿ 14ರಂದು
ಒಂದು ವರ್ಷಗಳ ಬಳಿಕ ಮತ್ತೊಮ್ಮೆ ಚುನಾವಣೆ ಘೋಷಿಸಲಾಯಿತು. ಕೇಜ್ರಿವಾಲ್ ನೇತೃತ್ವದಲ್ಲಿ ಎಎಪಿ ಮತ್ತೆ ಅಧಿಕಾರಕ್ಕೇರಿತು. 67 ಸ್ಥಾನಗಳನ್ನು ಗೆದ್ದು ಬೀಗಿದ ಎಎಪಿ ಎದುರು ಬಿಜೆಪಿ 3 ಸ್ಥಾನಕ್ಕೆ ಕುಸಿಯಿತು.
2015ರಲ್ಲಿ ರಾಮ್ ಲೀಲಾ ಮೈದಾನದಲ್ಲಿ ಕೇಜ್ರಿವಾಲ್ ಪ್ರಮಾಣ ವಚನ ಸ್ವೀಕರಿಸಿದ್ದು ಫೆಬ್ರವರಿ 14ರಂದು ಎಂಬುದು ವಿಶೇಷ. ಫೆಬ್ರವರಿ 14, 2018ರಂದು ಮೂರುವರ್ಷಗಳ ಅಧಿಕಾರ ಅವಧಿ ಕಂಡ ಕೇಜ್ರಿವಾಲ್ ಈಗ ಮತ್ತೊಮ್ಮೆ ಫೆಬ್ರವರಿ 14ದಿನದಂದೇ ಎಎಪಿ 3.0ಕ್ಕೆ ಚಾಲನೆ ನೀಡುವ ಸಾಧ್ಯತೆಯಿದೆ.
ಕೇಜ್ರಿವಾಲ್ ಗೆಲುವಿಗೆ ಕಾರಣವೇನು?
2015ರಲ್ಲಿ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ 70 ಸ್ಥಾನಗಳ ಪೈಕಿ 67 ಸ್ಥಾನಗಳನ್ನು ಆಮ್ ಆದ್ಮಿ ಪಕ್ಷ ಗೆದ್ದುಕೊಂಡಿತ್ತು. ಬಿಜೆಪಿ ಮೂರು ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಆದರೆ 2017ರಲ್ಲಿ ಮುನ್ಸಿಪಾಲ್ ಕಾರ್ಪೊರೇಷನ್ ಚುನಾವಣೆ, 2019ರ ಲೋಕಸಭೆ ಚುನಾವಣೆಯಲ್ಲಿ ಎಲ್ಲಾ ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಮತ್ತೆ ಲಯಕ್ಕೆ ಮರಳಿತ್ತು. ಆದರೆ, ಲೋಕಸಭೆ ಚುನಾವಣೆಯಲ್ಲಿ ಮಾಡಿದ ಕಮಾಲ್ ವಿಧಾನಸಭೆಯಲ್ಲಿ ತೋರುವಲ್ಲಿ ಬಿಜೆಪಿ ವಿಫಲವಾಗಿದೆ.
ಪ್ರಚಾರ ವೈಖರಿ: ಸಿಎಎ, ಎನ್ ಆರ್ ಸಿ, ಎನ್ ಪಿ ಆರ್ ಬಗ್ಗೆ ಭಾಷಣಗಳಲ್ಲಿ ಹೆಚ್ಚು ಕೇಳಿ ಬಂದಿದೆ. ಆದರೆ, ಆಮ್ ಆದ್ಮಿ ಪಕ್ಷ ಸ್ಥಳೀಯ್ ಸಮಸ್ಯೆಗಳು ಅನುಷ್ಠಾನಗೊಳಿಸಬಹುದಾದ ರಿಯಾಲಿಟಿ ಯೋಜನೆಗಳತ್ತ ಹೆಚ್ಚಿನ ಗಮನ ನೀಡಿದ್ದು ಕಾರಣವಿರಬಹುದು ಎಂದು ಬೆಟ್ಟಿಂಗ್ ಮಾರುಕಟ್ಟೆ ಪಂಟರ್ ಗಳು ಹೇಳಿದ್ದಾರೆ. ಉಚಿತ ಪ್ರಯಾಣ, ವಿದ್ಯುತ್, ಕುಡಿಯುವ ನೀರು ಪೂರೈಕೆ ಮುಂತಾದ ಜನಪ್ರಿಯ ಯೋಜನೆಗಳು ಇಂದಿಗೂ ಮತದಾರರನ್ನು ಸೆಳೆಯಬಲ್ಲ ಅಂಶಗಳಾಗಿವೆ.