ಆಮ್ ಆದ್ಮಿ ಪಕ್ಷದ ಮೇಲೆ ಬಿಜೆಪಿ ವಾಗ್ದಾಳಿ: ಕೇಜ್ರಿವಾಲ್ ಕೂಡ ಜೈಲು ಪಾಲಾಗಿದ್ದಾರೆ ಎಂದ ಬಿಜೆಪಿ ಸಂಸದ
ನವದೆಹಲಿ, ಆಗಸ್ಟ್ 19: ದೆಹಲಿಯ ಹೊಸ ತೆರಿಗೆ ನೀತಿಗೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಅರವಿಂದ್ ಕೇಜ್ರಿವಾಲ್, ದೆಹಲಿ ಉಪಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಅವರ ಭ್ರಷ್ಟಾಚಾರದ ಬಗ್ಗೆ ಸಿಬಿಐಗೆ ಸುಳಿವು ನೀಡಿರಬಹುದು ಎಂದು ಬಿಜೆಪಿ ಆಮ್ ಆದ್ಮಿ ಪಕ್ಷದ ಮೇಲೆ ಗಂಭೀರವಾದ ಆರೋಪ ಮಾಡಿದೆ.
ಅಬಕಾರಿ ನೀತಿ ವಿಷಯದ ತನಿಖೆಯ ಭಾಗವಾಗಿ ಸಿಬಿಐ ಅಧಿಕಾರಿಗಳು ಶುಕ್ರವಾರ ಬೆಳಗ್ಗೆ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಮನೆಯಲ್ಲಿ ಶೋಧ ನಡೆಸಿದರು. ಕೇಂದ್ರದ ಸೂಚನೆಯಂತೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಆಮ್ ಆದ್ಮಿ ಪಕ್ಷ ಆರೋಪ ಮಾಡಿತ್ತು.
ದಿಲ್ಲಿ ಡಿಸಿಎಂ ಮನೀಶ್ ಸಿಸೋಡಿಯಾ ಮೇಲೆ ಸಿಬಿಐ ತನಿಖೆ ಯಾಕೆ? ಏನಿದು ಪ್ರಕರಣ?
ಎಎಪಿ ಆರೋಪವನ್ನು ನಿರಾಕರಿಸಿರುವ ಬಿಜೆಪಿ ಸಂಸದ ಪ್ರವೇಶ್ ವರ್ಮಾ ಅರವಿಂದ್ ಕೇಜ್ರಿವಾಲ್ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ, "ಅರವಿಂದ್ ಕೇಜ್ರಿವಾಲ್ ಅವರೇ ಸಿಬಿಐಗೆ ಸಿಸೋಡಿಯಾ ಕುರಿತಂತೆ ಗೌಪ್ಯವಾಗಿ ಮಾಹಿತಿ ನೀಡಿರುವ ಸಾಧ್ಯತೆ ಇದೆ" ಎಂದು ಹೇಳಿಕೆ ನೀಡಿದ್ದಾರೆ.
ಕೇಜ್ರಿವಾಲ್ ಕೂಡ ಶೀಘ್ರದಲ್ಲೇ ಜೈಲಿಗೆ ಹೋಗಲಿದ್ದಾರೆ
ಸಿಸೋಡಿಯಾ ಮತ್ತು ಮಾಜಿ ಸಚಿವ ಸತ್ಯೇಂದ್ರ ಜೈನ್ ಅವರ ಹೆಚ್ಚುತ್ತಿರುವ ಜನಪ್ರಿಯತೆಯಿಂದ ಕೇಜ್ರಿವಾಲ್ ಹೆದರಿರಬಹುದು ಮತ್ತು ಅವರನ್ನು ತನ್ನ ದಾರಿಯಿಂದ ದೂರಮಾಡಲು ಕೇಜ್ರಿವಾಲ್ ಬಯಸಿದ್ದರು ಎಂದು ಪ್ರವೇಶ್ ವರ್ಮಾ ಆರೋಪಿಸಿದ್ದಾರೆ. ಎಎಪಿ ಸಂಚಾಲಕರನ್ನು ಕೂಡ ಶೀಘ್ರದಲ್ಲೇ ಜೈಲಿಗೆ ಹಾಕಲಾಗುವುದು ಎಂದು ಅವರು ಹೇಳಿದ್ದಾರೆ.
"ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ಇಬ್ಬರೂ ಕೇಜ್ರಿವಾಲ್ ಅನುಮತಿಯಿಲ್ಲದೆ ಶೌಚಾಲಯಕ್ಕೂ ಕೂಡ ಹೋಗುವಂತಿಲ್ಲ ಎನ್ನುವ ಪರಿಸ್ಥಿತಿ ಇದೆ. ಸತ್ಯೇಂದ್ರ ಜೈನ್ ಈಗ ಮೂರು ತಿಂಗಳ ಕಾಲ ಜೈಲಿನಲ್ಲಿದ್ದಾರೆ, ಮನೀಶ್ ಸಿಸೋಡಿಯಾ ವಿರುದ್ಧ ಹಲವು ಭ್ರಷ್ಟಾಚಾರ ಆರೋಪಗಳಿವೆ. ಕೇಜ್ರಿವಾಲ್ ಎಷ್ಟು ದಿನ ಸ್ವತಂತ್ರವಾಗಿ ಉಳಿಯಬಹುದು?" ಎಂದು ಬಿಜೆಪಿ ನಾಯಕ ಪ್ರವೇಶ್ ಶರ್ಮಾ ಪ್ರಶ್ನಿಸಿದ್ದಾರೆ.
Breaking: ಸಿಬಿಐ ಎಫ್ಐಆರ್ನಲ್ಲಿ ಮನೀಶ್ ಸಿಸೋಡಿಯಾ ಹೆಸರು ಮೊದಲು!
7 ವರ್ಷದಿಂದ ದಾಳಿಯಾದರೂ ಏನೂ ಸಿಕ್ಕಿಲ್ಲ
ಮನಿಶ್ ಸಿಸೋಡಿಯಾ ಅವರ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿದ ಹಿನ್ನೆಲೆಯಲ್ಲಿ ದೆಹಲಿ ಸಿಎಂ ಮತ್ತು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಸಿಸೋಡಿಯಾ ಬೆಂಬಲಕ್ಕೆ ನಿಂತಿದ್ದಾರೆ.
"ಇದು ಮೊದಲ ದಾಳಿಯಲ್ಲ, ಕಳೆದ 7 ವರ್ಷಗಳಲ್ಲಿ, ಮನಿಶ್ ಸಿಸೋಡಿಯಾ ಮೇಲೆ ಹಲವಾರು ದಾಳಿಗಳನ್ನು ನಡೆಸಲಾಗಿದೆ. ಅವರ ವಿರುದ್ಧ ಹಲವಾರು ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ. ನನ್ನ ಮೇಲೂ, ಸತ್ಯೇಂದ್ರ ಜೈನ್ ಮೇಲೆ, ಕೈಲಾಶ್ ಗೆಹ್ಲೋಟ್ ಮೇಲೆ ದಾಳಿಗಳನ್ನು ನಡೆಸಲಾಯಿತು, ಆದರೆ ಅವರಿಗೆ ಏನೂ ಸಿಗಲಿಲ್ಲ, ಈಗಲೂ ಕೂಡ ಸಿಬಿಐ ಅಧಿಕಾರಿಗಳಿಗೆ ಏನೂ ಸಿಕ್ಕಿಲ್ಲ" ಎಂದು ಕೇಜ್ರಿವಾಲ್ ಹೇಳಿದರು.
ಸಿಬಿಐ ದಾಳಿಗೆ ಭಯಪಡುವ ಅಗತ್ಯವಿಲ್ಲ
"ಸಿಬಿಐ ತನ್ನ ಕೆಲಸವನ್ನು ಮಾಡುತ್ತಿದೆ, ಭಯಪಡುವ ಅಗತ್ಯವಿಲ್ಲ, ನಾವು ಸಿಬಿಐಗೆ ಅದರ ಕೆಲಸವನ್ನು ಮಾಡಲು ಬಿಡಬೇಕು, ನಮ್ಮನ್ನು ಬೆದರಿಸಲು ಸಿಬಿಐಗೆ ಮೇಲಿನಿಂದ ಆದೇಶ ಬಂದಿದೆ. ಅಡೆತಡೆಗಳು ಬರುತ್ತವೆ ಆದರೆ ಕೆಲಸ ನಿಲ್ಲುವುದಿಲ್ಲ" ಎಂದು ಅರವಿಂದ್ ಕೇಜ್ರಿವಾಲ್ ಹೇಳಿದರು.
ಕಳೆದ ವರ್ಷದ ನವೆಂಬರ್ನಲ್ಲಿ ಬಿಡುಗಡೆಯಾದ ದೆಹಲಿ ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿ ಅಕ್ರಮಗಳ ಆರೋಪದ ಮೇಲೆ ಸಿಬಿಐ ಎಫ್ಐಆರ್ ದಾಖಲಿಸಿದ ನಂತರ ಮನೀಶ್ ಸಿಸೋಡಿಯಾ ಅವರ ಮನೆ, ಐಎಎಸ್ ಅಧಿಕಾರಿ ಮತ್ತು ಮಾಜಿ ಅಬಕಾರಿ ಆಯುಕ್ತ ಅರವ ಗೋಪಿ ಕೃಷ್ಣ ಅವರ ನಿವಾಸ ಮತ್ತು ಇತರ 19 ಸ್ಥಳಗಳಲ್ಲಿ ಶೋಧ ನಡೆಸಲಾಯಿತು.
ಪ್ರಕರಣದಲ್ಲಿ ಮನಿಶ್ ಸಿಸೋಡಿಯಾ ಆರೋಪಿ ನಂ 1
ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐನ ಪ್ರಥಮ ಮಾಹಿತಿ ವರದಿ ಅಥವಾ ಎಫ್ಐಆರ್ನಲ್ಲಿ ಹದಿನೈದು ಆರೋಪಿಗಳಲ್ಲಿ ದೆಹಲಿ ಉಪಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಆರೋಪಿ ನಂಬರ್ 1 ಎಂದು ಹೆಸರಿಸಲಾಗಿದೆ.
ದೆಹಲಿ ಮದ್ಯ ನೀತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಕೇಂದ್ರದ ಆರೋಪದ ಮೇಲೆ ಮನೀಶ್ ಸಿಸೋಡಿಯಾ ಅವರ ನಿವಾಸ ಸೇರಿದಂತೆ 20ಕ್ಕೂ ಹೆಚ್ಚು ಸ್ಥಳಗಳಲ್ಲಿ ಕೇಂದ್ರ ತನಿಖಾ ದಳ ಶುಕ್ರವಾರ ಶೋಧ ನಡೆಸಿದೆ.
ತನಿಖಾ ಸಂಸ್ಥೆಯು ಎಫ್ಐಆರ್ ದಾಖಲಿಸಿದೆ. ನವೆಂಬರ್ನಲ್ಲಿ ದೆಹಲಿ ಅಬಕಾರಿ ನೀತಿಯನ್ನು ಪ್ರಾರಂಭಿಸಿತ್ತು, ಅದರ ಅಡಿಯಲ್ಲಿ ಮದ್ಯದ ಅಂಗಡಿ ಪರವಾನಗಿಗಳನ್ನು ಖಾಸಗಿಯವರಿಗೆ ಹಸ್ತಾಂತರಿಸಲಾಗಿದೆ ಎನ್ನುವ ಆರೋಪಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸುತ್ತಿದೆ.