"ವಿಮಾನ ಯಾನ ಆರಂಭಿಸಿ ಜನರನ್ನು ತೊಂದರೆಗೆ ಸಿಲುಕಿಸಬೇಡಿ"
ನವದೆಹಲಿ, ಜನವರಿ 07: ದೇಶದಲ್ಲಿ ಇದುವರೆಗೂ 73 ಬ್ರಿಟನ್ ರೂಪಾಂತರ ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು, ಜನರ ಹಿತದೃಷ್ಟಿಯಿಂದ ಬ್ರಿಟನ್-ಭಾರತದ ನಡುವಿನ ವಿಮಾನ ಯಾನಕ್ಕೆ ಇನ್ನಷ್ಟು ದಿನ ತಡೆಯೊಡ್ಡುವುದು ಒಳಿತು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೇಂದ್ರಕ್ಕೆ ಮನವಿ ಮಾಡಿದ್ದಾರೆ.
ಬ್ರಿಟನ್ ನಲ್ಲಿ ಕೊರನಾ ರೂಪಾಂತರ ಸೋಂಕು ಪತ್ತೆಯಾಗುತ್ತಿದ್ದಂತೆ ಭಾರತ- ಬ್ರಿಟನ್ ನಡುವಿನ ವಿಮಾನಯಾನವನ್ನು ಜನವರಿ 8ರವರೆಗೂ ಸ್ಥಗಿತಗೊಳಿಸಲಾಗಿತ್ತು. ಈ ನಿಷೇಧವನ್ನು ಇನ್ನಷ್ಟು ದಿನ ಮುಂದುವರೆಸಬೇಕಾಗಿ ಕೇಜ್ರಿವಾಲ್ ಟ್ವಿಟ್ಟರ್ ಮೂಲಕ ಕೇಳಿಕೊಂಡಿದ್ದಾರೆ. ಜನವರಿ 31ರವರೆಗೂ ಬ್ರಿಟನ್-ಭಾರತದ ನಡುವಿನ ವಿಮಾನ ಯಾನವನ್ನು ಆರಂಭಿಸಬಾರದು ಎಂದು ಸಲಹೆ ನೀಡಿದ್ದಾರೆ.
ಭಾರತ, ಬ್ರಿಟನ್ ವಿಮಾನಯಾನ ಜನವರಿ 8 ರಿಂದ ಪುನರಾರಂಭ
"ಬ್ರಿಟನ್ ನಿಂದ ವಿಮಾನ ಯಾನವನ್ನು ಕೇಂದ್ರ ಸರ್ಕಾರ ಮತ್ತೆ ಆರಂಭಿಸುತ್ತಿದೆ. ಬ್ರಿಟನ್ ನಲ್ಲಿ ಈಗ ಪರಿಸ್ಥಿತಿ ಹದಗೆಟ್ಟಿದೆ. ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಿವೆ. ಸಾವಿನ ಪ್ರಕರಣಗಳೂ ಅಧಿಕವಾಗಿವೆ. ಇಂಥ ಸಂದರ್ಭದಲ್ಲಿ ವಿಮಾನಯಾನ ಆರಂಭಿಸುವುದು ಉಚಿತವಲ್ಲ" ಎಂದಿದ್ದಾರೆ. ಭಾರತದಲ್ಲಿ ಕೊರೊನಾ ಸೋಂಕಿನ ಕಠಿಣ ಪರಿಸ್ಥಿತಿಯನ್ನು ಕಷ್ಟಪಟ್ಟು ನಿಯಂತ್ರಣಕ್ಕೆ ತರಲಾಗಿದೆ. ಬ್ರಿಟನ್ ನಲ್ಲಿ ಪರಿಸ್ಥಿತಿ ಸರಿಯಿಲ್ಲ. ಈಗ ವಿಮಾನ ಯಾನ ಆರಂಭಿಸಿ ಜನರನ್ನು ತೊಂದರೆಗೆ ಸಿಲುಕಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಬ್ರಿಟನ್ ನಲ್ಲಿ ಬುಧವಾರ ಕೊರೊನಾ ಸೋಂಕಿನಿಂದಾಗಿ 1,041 ಮಂದಿ ಸಾವನ್ನಪ್ಪಿದ್ದಾರೆ.