ದೆಹಲಿ ಸರ್ಕಾರದ ಮನೆ ಮನೆಗೆ ದಿನಸಿ ಯೋಜನೆಗೆ ಕೇಂದ್ರ ಅಡ್ಡಗಾಲು
ನವದೆಹಲಿ, ಮಾರ್ಚ್ 19: ದೆಹಲಿಯ ಆಮ್ ಆದ್ಮಿ ಸರ್ಕಾರ ಜಾರಿಗೆ ತರಲು ಉದ್ದೇಶಿಸಿದ್ದ ಮನೆ ಮನೆಗೆ ದಿನಸಿ ಯೋಜನೆಗೆ ಕೇಂದ್ರ ಸರ್ಕಾರ ಅಡ್ಡಗಾಲು ಹಾಕಿದೆ. ಮಾ.25 ರಂದು ಯೋಜನೆಗೆ ಚಾಲನೆ ನೀಡಲು ದೆಹಲಿ ಸರ್ಕಾರ ಸಿದ್ಧತೆ ನಡೆಸಿತ್ತು.
ಮನೆ ಬಾಗಿಲಿಗೇ ದಿನಸಿ ಪದಾರ್ಥಗಳನ್ನು ತಲುಪಿಸುವುದಕ್ಕಾಗಿ ದೆಹಲಿಯ ಆಮ್ ಆದ್ಮಿ ಸರ್ಕಾರ ಜಾರಿಗೆ ತರಲು ಉದ್ದೇಶಿಸಲಾಗಿದ್ದ ಮುಖ್ಯಮಂತ್ರಿ ಘರ್ ಘರ್ ರೇಷನ್ ಯೋಜನೆಗೆ ಕೇಂದ್ರ ಸರ್ಕಾರ ಕೊಕ್ಕೆ ಹಾಕಿದೆ.
ಕೇಂದ್ರ ಒಪ್ಪಿದರೆ 3 ತಿಂಗಳಲ್ಲಿ ದೆಹಲಿಯ ಪ್ರತಿಯೊಬ್ಬರಿಗೂ ಕೊರೊನಾ ಲಸಿಕೆ: ಕೇಜ್ರಿವಾಲ್
ಎಂಎಂಜಿಜಿಆರ್ ವೈ ಯೋಜನೆಯಡಿ, ಗೋಧಿ ಹಿಟ್ಟು, ಅಕ್ಕಿ ಮತ್ತು ಸಕ್ಕರೆಗಳನ್ನು ಸಾರ್ವಜನಿಕ ಪೂರೈಕೆ ವ್ಯವಸ್ಥೆಯಡಿಯಲ್ಲಿ ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸುವುದಕ್ಕಾಗಿ ನವದೆಹಲಿ ಸರ್ಕಾರ ಯೋಜನೆ ರೂಪಿಸಿತ್ತು.
ಇದಕ್ಕೆ ಅನುಮತಿ ಇಲ್ಲ ಎಂದು ದೆಹಲಿಯ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಗೆ ಅಧಿಸೂಚನೆಯನ್ನು ಹೊರಡಿಸಲಾಗಿದೆ. ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದ ಸರ್ಕಾರಕ್ಕೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಆಹಾರ ಧಾನ್ಯಗಳನ್ನು ಹಂಚಿಕೆ ಮಾಡುವುದಕ್ಕೆ ಹೊಸ ನಾಮಕರಣ ಮಾಡುವುದಕ್ಕೆ ಅವಕಾಶವಿಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಿದೆ.
ಎನ್ಎಫ್ಎಸ್ಎ ಆಹಾರಾಧಾನ್ಯಗಳ ಅಂಶಗಳ ಹೊರತಾಗಿ ಪ್ರತ್ಯೇಕವಾದ ಯೋಜನೆಯನ್ನು ಸರ್ಕಾರ ಜಾರಿಗೆ ತಂದರೆ ಅಭ್ಯಂತರವಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.