ತನ್ನನ್ನು ಹಿಂದೂ ವಿರೋಧಿ ಎಂದ ಬಿಜೆಪಿಗೆ ದಂಗು ಬಡಿಸುವ ಉತ್ತರಕೊಟ್ಟ ಕೇಜ್ರಿವಾಲ್
ನವದೆಹಲಿ, ಫೆ 4: ತನ್ನನ್ನು ದೇಶದ್ರೋಹಿ, ಹಿಂದೂ ವಿರೋಧಿ ಎಂದ ಬಿಜೆಪಿ ಮುಖಂಡರಿಗೆ, ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭರ್ಜರಿಯಾಗಿ ತಿರುಗೇಟು ನೀಡಿದ್ದಾರೆ.
ಖಾಸಗಿ ಸುದ್ದಿಸಂಸ್ಥೆಯ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಕೇಜ್ರಿವಾಲ್, "ನಾನು ಹಿಂದಿನಿಂದಲೂ ಆಂಜನೇಯನ ಭಕ್ತ. ನನ್ನನ್ನು ಅವರು ಹಿಂದೂ ವಿರೋಧಿ, ದೇಶದ್ರೋಹಿ ಎಂದು ಹೇಳುತ್ತಾರೆ. ಅವರಲ್ಲಿ ಮಾತನಾಡಲು ಬೇರೆ ವಿಷಯವಿಲ್ಲ" ಎಂದು ಕಿಡಿಕಾರಿದ್ದಾರೆ.
'ಕೇಜ್ರಿವಾಲ್ ಒಬ್ಬ ಭಯೋತ್ಪಾದಕ, ಅದಕ್ಕೆ ಸಾಕಷ್ಟು ಪುರಾವೆಗಳಿವೆ'
"ನೀವು ಆಂಜನೇಯನ ಭಕ್ತರೇ, ಹಾಗಿದ್ದಲ್ಲಿ ಹನುಮಾನ್ ಚಾಲೀಸ್ ನಿಮಗೆ ಗೊತ್ತಿದೆಯಾ" ಎನ್ನುವ ನಿರೂಪಕನ ಪ್ರಶ್ನೆಗೆ, "ಹೌದು, ಗೊತ್ತಿದೆ. ದಿನಾಲೂ ಇದನ್ನು ಪಠಿಸುತ್ತೇನೆ. ಇದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ" ಎಂದು ಕೇಜ್ರಿವಾಲ್ ನುಡಿದಿದ್ದಾರೆ.
ಹಾಗಿದ್ದರೆ, ಹನುಮಾನ್ ಚಾಲೀಸ್ ಒಮ್ಮೆ ಪಠಿಸಿ ಎಂದಾಗ, "ನನ್ನ ಕಂಠ ಅಷ್ಟು ಸರಿಯಿಲ್ಲ, ಆದರೂ ಹಾಡುತ್ತೇನೆ" ಎಂದು ಕೇಜ್ರಿವಾಲ್ ಶ್ಲೋಕವನ್ನು ತುಂಬಿದ ಕಾರ್ಯಕ್ರಮದಲ್ಲಿ ಪಠಿಸಿ, ಚಪ್ಪಾಳೆಗಿಟ್ಟಿಸಿಕೊಂಡಿದ್ದಾರೆ.
"ಇಷ್ಟೇ ಅಲ್ಲದೇ ಇದಕ್ಕಾಗಿ ಪ್ರತ್ಯೇಕ ಕಾರ್ಯಕ್ರಮವನ್ನು ಆಯೋಜಿಸಿ, ನಾನು ಬಂದು ಇದರ ಅರ್ಥವನ್ನು ವಿವರಿಸುತ್ತೇನೆ. ಇದು, ನನ್ನನ್ನು ಹಿಂದೂ ವಿರೋಧಿ ಎಂದವರಿಗೆ ತಲುಪಲಿ" ಎಂದು ಕೇಜ್ರಿವಾಲ್, ಬಿಜೆಪಿಗೆ ಟಾಂಗ್ ನೀಡಿದ್ದಾರೆ.
"ಕೇಜ್ರಿವಾಲ್ ಈಗ ದುಃಖದ ಮುಖ ಮಾಡಿಕೊಂಡು, 'ನಾನು ಭಯೋತ್ಪಾದಕನೇ?' ಎಂದು ಕೇಳುತ್ತಿದ್ದಾರೆ. ನೀವೊಬ್ಬ ಭಯೋತ್ಪಾದಕ. ಅದನ್ನು ಸಾಬೀತುಪಡಿಸಲು ಸಾಕಷ್ಟು ಪುರಾವೆಗಳಿವೆ. ನಾನೊಬ್ಬ ಅರಾಜಕತಾವಾದಿ ಎಂದು ನಿಮ್ಮನ್ನು ನೀವೇ ಕರೆದುಕೊಂಡಿದ್ದಿರಿ. ಅರಾಜಕತಾವಾದಿಗೂ ಮತ್ತು ಭಯೋತ್ಪಾದಕನಿಗೂ ಅಂತಹದ್ದೇನೂ ವ್ಯತ್ಯಾಸವಿಲ್ಲ. ನೀವೊಬ್ಬ ಹಿಂದೂ ವಿರೋಧಿ" ಎಂದು ಬಿಜೆಪಿ ಮುಖಂಡರು ಹೇಳಿದ್ದರು' ಎಂದು ಅವರು ಟೀಕಿಸಿದ್ದರು. (ಚಿತ್ರ:ಪಿಟಿಐ)