ಶಾಲೆಗೆ ಮೆಲಾನಿಯಾ ಟ್ರಂಪ್ ಭೇಟಿ: ಕೇಜ್ರಿವಾಲ್ ಹೆಸರನ್ನೇ ತೆಗೆದುಹಾಕಿದ ಕೇಂದ್ರ ಸರ್ಕಾರ
ನವದೆಹಲಿ, ಫೆಬ್ರವರಿ 22: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪತ್ನಿ ಮೆಲಾನಿಯಾ ಟ್ರಂಪ್ ಭೇಟಿ ನೀಡುವ ದೆಹಲಿ ಸರ್ಕಾರಿ ಶಾಲೆಯ 'ಹ್ಯಾಪಿನೆಸ್ ಕ್ಲಾಸ್' ಕಾರ್ಯಕ್ರಮದಿಂದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನೇ ಹೊರಗಿಡಲಾಗಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.
Recommended Video
ಮುಂದಿನ ವಾರ ಭಾರತಕ್ಕೆ ಡೊನಾಲ್ಡ್ ಟ್ರಂಪ್ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ಅವರ ಪತ್ನಿ ಮೆಲಾನಿಯಾ ಟ್ರಂಪ್, ದೆಹಲಿ ಸರ್ಕಾರಿ ಶಾಲೆಯೊಂದರಲ್ಲಿ 'ಹ್ಯಾಪಿನೆಸ್ ಕ್ಲಾಸ್' ವೀಕ್ಷಿಸಲು ಆಗಮಿಸಲಿದ್ದಾರೆ. ಆದರೆ ಕೇಂದ್ರ ಸರ್ಕಾರ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಗಣ್ಯರ ಪಟ್ಟಿಯಿಂದ ಕೇಜ್ರಿವಾಲ್ ಮತ್ತು ಸಿಸೋಡಿಯಾ ಅವರ ಹೆಸರನ್ನು ತೆಗೆದುಹಾಕಿರುವುದು ವಿವಾದ ಸೃಷ್ಟಿಸಿದೆ.
ಟ್ರಂಪ್ ಭೇಟಿ: ಮೂರು ಗಂಟೆ ಭದ್ರತೆಗೆ 80 ಕೋಟಿ ಖರ್ಚು
ಮೆಲಾನಿಯಾ ಟ್ರಂಪ್ ಅವರು ದೆಹಲಿ ಸರ್ಕಾರಿ ಶಾಲೆಯೊಂದಲ್ಲಿನ ವಿಶೇಷ ತರಗತಿಯನ್ನು ವೀಕ್ಷಿಸಿ ವಿದ್ಯಾರ್ಥಿಗಳ ಜತೆಗೆ ಮಾತುಕತೆ ನಡೆಸಲಿದ್ದಾರೆ. ದೆಹಲಿ ಸರ್ಕಾರಿ ಶಾಲೆಗಳ ಸ್ವರೂಪವನ್ನೇ ಬದಲಿಸಿದ ಕೀರ್ತಿ ಆಮ್ ಆದ್ಮಿ ಪಕ್ಷದ ಸರ್ಕಾರದ್ದು. ಆದರೆ ಅತಿ ಗಣ್ಯರ ಕಾರ್ಯಕ್ರಮದ ಪಟ್ಟಿಯಿಂದ ದೆಹಲಿಯ ಇಬ್ಬರು ಪ್ರಮುಖ ಮುಖಂಡರ ಹೆಸರನ್ನೇ ಕೈಬಿಡಲಾಗಿದೆ ಎಂದು ಎಎಪಿ ಆರೋಪಿಸಿದೆ.
ಸರ್ಕಾರಿ ಶಾಲೆಗೆ ಮೆಲಾನಿಯಾ ಅತಿಥಿ
ಈ ಹಿಂದಿನ ಯೋಜನೆ ಪ್ರಕಾರ ಮುಖ್ಯಮಂತ್ರಿ ಕೇಜ್ರಿವಾಲ್ ಮತ್ತು ಉಪ ಮುಖ್ಯಮಂತ್ರಿ ಸಿಸೋಡಿಯಾ ಅವರು ದಕ್ಷಿಣ ದೆಹಲಿಯ ಸರ್ಕಾರಿ ಶಾಲೆಗೆ ಬರುವ ಮೆಲಾನಿಯಾ ಟ್ರಂಪ್ ಅವರನ್ನು ಸ್ವಾಗತಿಸುವ ವೇಳಾಪಟ್ಟಿ ನಿಗದಿಪಡಿಸಲಾಗಿತ್ತು. ಡೊನಾಲ್ಡ್ ಟ್ರಂಪ್ ಅವರ ಭಾರತ ಭೇಟಿಯ ಎರಡನೆಯ ದಿನವಾದ ಮಂಗಳವಾರ ಮೆಲಾನಿಯಾ ಅವರು ಸರ್ಕಾರಿ ಶಾಲೆಗೆ ವಿಶೇಷ ಅತಿಥಿಯಾಗಿ ಆಗಮಿಸಲಿದ್ದಾರೆ. ಒಂದು ಗಂಟೆಗೂ ಹೆಚ್ಚು ಕಾಲ ಅವರು ಅಲ್ಲಿ ಮಕ್ಕಳೊಂದಿಗೆ ಸಮಯ ಕಳೆಯಲಿದ್ದಾರೆ.
'ಸಂತೋಷದ ಪಠ್ಯಕ್ರಮ' ಅಳವಡಿಕೆ
ಶಾಲಾ ಮಕ್ಕಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದ ಪ್ರಯತ್ನವಾಗಿ ಎರಡು ವರ್ಷಗಳ ಹಿಂದೆ ಮನೀಶ್ ಸಿಸೋಡಿಯಾ, 'ಸಂತೋಷದ ಪಠ್ಯಕ್ರಮ'ವನ್ನು ಪರಿಚಯಿಸಿದ್ದರು. ಇದರಲ್ಲಿ 40 ನಿಮಿಷಗಳ ಅವಧಿಯಲ್ಲಿ ಧ್ಯಾನ, ವಿಶ್ರಾಂತಿ ಮತ್ತು ಹೊರಾಂಗಣ ಚಟುವಟಿಕೆಗಳು ಸಹ ಸೇರಿದ್ದವು.
'ನಮಸ್ತೆ ಟ್ರಂಪ್': ಅಮೆರಿಕಾ ಅಧ್ಯಕ್ಷರಿಗೆ ಖುಷಿ, ಭರವಸೆಗಳು ಹುಸಿ
ರಾಯಭಾರ ಕಚೇರಿ ಮನವಿ
'ನಮಗೆ ಅಮೆರಿಕ ರಾಯಭಾರ ಕಚೇರಿಯಿಂದ ಮನವಿ ಬಂದಿತ್ತು. ಅವರು ಬರಲು ಬಯಸಿದ್ದರೆ ನಾವು ಸ್ವಾಗತಿಸುತ್ತೇವೆ ಎಂದು ಹೇಳಿದ್ದೆವು. ಆದರೆ ಶಾಲೆಯ ಬಗ್ಗೆ ನಿಮಗೆ ಮಾಹಿತಿ ನೀಡಲು ಸಾಧ್ಯವಿಲ್ಲ' ಎಂದು ತಮ್ಮ ಕ್ಷೇತ್ರವಾದ ಪಟ್ಪರ್ಗಂಜ್ನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಭೇಟಿ ಮಾಡಿದ ಬಳಿಕ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
ಕಳಪೆಯಾಗಿವೆ ಎಂದಿದ್ದ ಬಿಜೆಪಿ
ದೆಹಲಿ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯು ವಿವಿಧ ಸರ್ಕಾರಿ ಶಾಲೆಗಳು ದುಸ್ಥಿತಿಯಲ್ಲಿವೆ ಎಂದು ತೋರಿಸುವ ವಿಡಿಯೋಗಳನ್ನು ಬಿಡುಗಡೆ ಮಾಡಿತ್ತು. ಕೇಜ್ರಿವಾಲ್ ಸರ್ಕಾರವು ಸರ್ಕಾರಿ ಶಾಲೆಗಳನ್ನು ಕಳಪೆ ಮಟ್ಟದಲ್ಲಿ ನಿರ್ವಹಿಸುತ್ತಿರುವುದನ್ನು ಬಯಲು ಮಾಡಿರುವುದಾಗಿ ಬಿಜೆಪಿ ಹೇಳಿತ್ತು. ಆದರೆ ಈಗ ಕೇಂದ್ರ ಸರ್ಕಾರದ ಮೂಲಕವೇ ದೆಹಲಿ ಸರ್ಕಾರಿ ಶಾಲೆಗೆ ಅತಿ ಗಣ್ಯರ ಭೇಟಿಯನ್ನು ಆಯೋಜಿಸಿರುವುದು ಕುತೂಹಲ ಮೂಡಿಸಿದೆ.