'ಮೋದಿಗೆ ಜೈ' ಅಂದ್ರಾ? ಅರೆರೆ.. ಏನಾಯ್ತು ಕೇಜ್ರಿವಾಲ್ ಗೆ?
ದೆಹಲಿ, ಆಗಸ್ಟ್ 23: "ಮುಳುಗುತ್ತಿರುವ ಅರ್ಥವ್ಯವಸ್ಥೆಯನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸರಿದಾರಿಗೆ ತರುತ್ತದೆ ಎಂಬ ಪೂರ್ಣ ನಂಬಿಕೆ ನನಗಿದೆ" ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಒಂದು ಕಾಲ(2014)ದಲ್ಲಿ ನರೇಂದ್ರ ಮೋದಿ ಅವರ ವಿರುದ್ದ ವಾರಣಾಸಿ ಕ್ಷೇತ್ರದಲ್ಲಿ ಚುನಾವಣೆಗೆ ನಿಂತಿದ್ದ, ಮೋದಿ ಅವರನ್ನು ಸದಾ ಬಾಯ್ತುಂಬ ಬೈಯ್ಯುತ್ತಿದ್ದ ಎಎಪಿ ಮುಖಂಡ ಅರವಿಂದ್ ಕೇಜ್ರಿವಾಲ್ ಇದೀಗ ಮೋದಿ ಸರ್ಕಾರದ ಮೇಲೆ ಸಂಪೂರ್ಣ ನಂಬಿಕೆ ಇದೆ ಎಂದಿರುವುದು ಅಚ್ಚರಿಗೆ ಕಾರಣವಾಗಿದೆ.
ಪ್ರಧಾನಿ ಮೋದಿ ವಿರುದ್ಧ ವ್ಯಕ್ತಿಗತ ನಿಂದನೆ ಬಿಡಿ: ಕಾಂಗ್ರೆಸ್ ಮುಖಂಡ ಸಿಂಘ್ವಿ
ಗುರುವಾರವಷ್ಟೇ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಮತ್ತು ಅಭಿಷೇಕ್ ಮನು ಸಿಂಗ್ವಿ ಮೋದಿ ಸರ್ಕಾರದ ಬಗ್ಗೆ ಧನಾತ್ಮಕ ಮಾತುಗಳನ್ನಾಡಿ ಅಚ್ಚರಿ ಮೂಡಿಸಿದ್ದರು. ಇದೀಗ ಕೇಜ್ರಿವಾಲ್ ಸರದಿ.
"ನನಗೆ ಮೋದಿ ಸರ್ಕಾರದ ಮೇಲೆ ಸಂಪೂರ್ಣ ನಂಬಿಕೆ ಇದೆ. ಕೇಮದ್ರ ಸರ್ಕಾರ ಆರ್ಥಿಕ ಹಿಂಜರಿತವನ್ನು ಸರಿದೂಗಿಸಲು ಅಗತ್ಯ ಕ್ರಮ ಕೈಗೊಳ್ಳಲಿದೆ. ಇಡೀ ದೇಶವೂ ನಿಂತು ಆರ್ಥಿಕತೆಯನ್ನು ಸರಿದಾರಿಗೆ ತರಬೇಕಿದೆ. ದೆಹಲಿ ಸರ್ಕಾರ ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಬೆಂಬಲವಾಗಿ ನಿಲ್ಲಲಿದೆ. ನನಗೆ ಉದ್ಯೋಗ ಕಳೆದುಕೊಳ್ಳುತ್ತಿರುವವರ ಬಗ್ಗೆ ಸಾಕಷ್ಟು ಆತಂಕವಿದೆ" ಎಂದು ಕೇಜ್ರಿವಾಲ್ ಹೇಳಿದರು.
"ಇದು ನಿಜಕ್ಕೂ ಆತಂಕದ ವಿಷಯ. ಆಟೋಮೋಟಿವ್, ಟೆಕ್ಸ್ಟೈಲ್, ರಿಯಲ್ ಎಸ್ಟೇಟ್ ಎಲ್ಲ ವ್ಯವಹಾರಗಳೂ ನೆಲಕಚ್ಚುತ್ತಿವೆ" ಎಂದು ಕೇಜ್ರಿವಾಲ್ ಹೇಳಿದರು.
ಅಚ್ಚರಿಯ ಸುದ್ದಿ: ಮೋದಿ ಪರ ನಿಂತ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್!
ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀದಿದ್ದ ಸಂವಿಧಾನದ 370 ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ್ದನ್ನೂ ಕೇಜ್ರಿವಾಲ್ ಸ್ವಾಗತಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.