ಭಾರತದ ಈ ರಾಜ್ಯಗಳಿಗೆ ಭಾರತೀಯರೇ ಹೋಗುವ ಹಾಗಿಲ್ಲ!
ದೆಹಲಿ, ಡಿಸೆಂಬರ್.05: ರಾಷ್ಟ್ರೀಯ ನಾಗರಿಕ ಕಾಯ್ದೆ ಜಾರಿಗೊಳಿಸಲು ಹೊರಟಿರುವ ಕೇಂದ್ರ ಸರ್ಕಾರ ಇದೀಗ ಈಶಾನ್ಯ ರಾಜ್ಯಗಳಿಗೆ ವಿನಾಯಿತಿಯ ಆಫರ್ ಕೊಡಲು ಹೊರಟಿದೆ. ದೇಶದಲ್ಲೇ ಇರುವ ಮೂರು ರಾಜ್ಯಗಳಿಗಾಗಿ ಹೊಸ ಕಾನೂನು ಜಾರಿಗೊಳಿಸಲಾಗಿದೆ. ಈ ಕಾನೂನಿನ ಬಗ್ಗೆ ಭಾರತದದ ಸಂವಿಧಾನದಲ್ಲೇ ಉಲ್ಲೇಖಿಸಲಾಗಿದೆ.
ಸಂವಿಧಾನದಲ್ಲಿ ಉಲ್ಲೇಖಿಸಿರುವ ಕಾನೂನು ಅಳವಡಿಸಿಕೊಂಡರಷ್ಟೇ ಸಾಕು. ರಾಷ್ಟ್ರೀಯ ನಾಗರಿಕ ಕಾಯ್ದೆ ಜಾರಿಗೊಳಿಸುವ ಹಾದಿ ಸುಗಮವಾಗಲಿದೆ. ರಾಜ್ಯಗಳ ಪಾಲಿಗೂ ಈ ಹೊಸ ಕಾನೂನು ಅನುಕೂಲವಾಗಲಿದೆ. ಜೊತೆಗೆ ಈಶಾನ್ಯ ರಾಜ್ಯಗಳಿಗೆ ವಲಸೆ ಬಂದಿರುವ ಜನರಿಗೆ ಪೌರತ್ವ ನೀಡಿದರೂ, ರಾಜ್ಯದ ಸಾರ್ವಭೌಮತ್ವಕ್ಕೆ ಯಾವುದೇ ಧಕ್ಕೆ ಆಗುವುದಿಲ್ಲ ಎನ್ನಲಾಗಿದೆ.
ಸಲೀಸ್ ಆಗುತ್ತಾ ಭಾರತದ ಪೌರತ್ವ ಪಡೆಯುವ ಹಾದಿ?
ಹೌದು, ಕೇಂದ್ರ ಸರ್ಕಾರ ಇದೀಗ ಆಂತರಿಕ ಗಡಿ ಅನುಮತಿ ಬಗ್ಗೆ ಪ್ರಸ್ತಾಪಿಸಿದೆ. ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಹಾಗೂ ಮಿಜೋರಾಂ ರಾಜ್ಯಗಳಲ್ಲಿ ಈ ಕಾನೂನು ಜಾರಿಯಲ್ಲಿದೆ. ಇದರಿಂದ ರಾಜ್ಯಗಳಿಗೂ ಅನುಕೂಲವಾಗಲಿದೆ. ಈ ಮೂರು ರಾಜ್ಯಗಳಿಗೆ ನಾಗರಿಕ ಕಾಯ್ದೆಯಿಂದ ವಿನಾಯಿತಿ ನೀಡಲಾಗಿದ್ದು, ಇದರ ಜೊತೆಗೆ ಅಸ್ಸಾಂ, ತ್ರಿಪುರಾ, ಮೇಘಾಲಯ ರಾಜ್ಯಗಳನ್ನೂ ಸೇರಿಸಲಾಗಿದೆ.
ಈಶಾನ್ಯ ಭಾಗ ಮೂರು ರಾಜ್ಯಗಳಿಗೂ ವಿನಾಯಿತಿ
ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿರುವ ರಾಷ್ಟ್ರೀಯ ನಾಗರಿಕ ಕಾಯ್ದೆಯಲ್ಲಿ ಈಶಾನ್ಯ ರಾಜ್ಯಗಳಿಗೆ ವಿನಾಯಿತಿ ನೀಡಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಮತ್ತು ಮಿಜೋರಾಂ ರಾಜ್ಯಗಳಿಗೆ ನಾಗರಿಕ ಕಾಯ್ದೆಯಿಂದ ವಿನಾಯತಿ ನೀಡಲಾಗಿದೆ. ಸಂವಿಧಾನದ 6ನೇ ಪರಿಚ್ಛೇದದ ಅಡಿಯಲ್ಲಿ ಅಸ್ಸಾಂ, ಮೇಘಾಲಯ ಹಾಗೂ ತ್ರಿಪುರಾ ರಾಜ್ಯಗಳಿಗೂ ವಿನಾಯಿತಿ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ.
ಮೇಘಾಲಯ, ಅಸ್ಸಾಂ, ತ್ರಿಪುರಾಕ್ಕೂ ಗಡಿ ಅನುಮತಿ
ದೇಶದಲ್ಲಿ ನಾಗರಿಕ ಕಾಯ್ದೆ ಜಾರಿಗೊಳಿಸಿದರೂ ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಮತ್ತು ಮಿಜೋರಾಂ ರಾಜ್ಯಗಳ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ಏಕೆಂದರೆ ಈ ರಾಜ್ಯಗಳಲ್ಲಿ ಬಂಗಾಳ ಪೂರ್ವ ಗಡಿನಾಡ ನಿಯಂತ್ರಣ, 1873ರ ಪ್ರಕಾರ ಆಂತರಿಕ ಗಡಿರೇಖೆಯನ್ನು ಹೊಂದಿವೆ. ಈ ಗಡಿ ರೇಖೆಯನ್ನು ದಾಟಿಕೊಂಡು ಹೋಗುವುದು ಅಷ್ಟು ಸುಲಭದ ಮಾತು ಅಲ್ಲವೇ ಅಲ್ಲ.
ಕೇಂದ್ರ ಸರ್ಕಾರಕ್ಕೂ ಈ ಸಿಎಂಗೂ ಎಣ್ಣೆ-ಸೀಗೆಕಾಯಿ ಸಂಬಂಧ!
ಆಂತರಿಕ ಗಡಿ ಅನುಮತಿಯಿಂದ ಏನು ಪ್ರಯೋಜನ?
ಭಾರತದಲ್ಲಿ ಆಂತರಿಕ ಗಡಿ ಅನುಮತಿ ಬ್ರಿಟಿಷರ ಕಾಲದಿಂದಲೇ ಜಾರಿಯಲ್ಲಿದೆ. ನಂತರದಲ್ಲಿ ಅದನ್ನು ಭಾರತ ಸಂವಿಧಾನದ 6ನೇ ಪರಿಚ್ಛೇದದಲ್ಲಿ ಉಲ್ಲೇಖಿಸಲಾಗಿದೆ. ಈ ಆಂತರಿಕ ಗಡಿ ಅನುಮತಿ ಆಯಾ ರಾಜ್ಯಕ್ಕೆ ಸಂಬಂಧಿಸಿದ ವಿಷಯವಾಗಿದೆ. ಈ ಗಡಿಯನ್ನು ಹೊಂದಿರುವ ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಮತ್ತು ಮಿಜೋರಾಂ ರಾಜ್ಯಕ್ಕೆ ಪ್ರವೇಶಿಸಬೇಕಿದ್ದಲ್ಲಿ ಅಲ್ಲಿನ ಸರ್ಕಾರಗಳ ಅನುಮತಿ ಬೇಕು. ಸರ್ಕಾರದ ಅನುಮತಿ ಇಲ್ಲದೇ ಈ ರಾಜ್ಯವನ್ನು ಯಾರೊಬ್ಬರೂ ಪ್ರವೇಶಿಸುವಂತಿಲ್ಲ ಹಾಗೂ ಅಲ್ಲಿ ವಾಸಿಸುವಂತೆಯೂ ಇಲ್ಲ. ಇದು ಕೇವಲ ವಲಸಿಗರಿಗೆ ಮಾತ್ರವಲ್ಲ, ಸ್ವತಃ ಭಾರತೀಯರಿಗೂ ಈ ನಿಯಮ ಅನ್ವಯವಾಗುತ್ತದೆ. ಬಂಗಾಳ ಪೂರ್ವ ಗಡಿನಾಡು ನಿಯಂತ್ರಣ 1873 ಕಾಯ್ದೆಯಲ್ಲಿ ಈ ಕುರಿತು ಉಲ್ಲೇಖಿಸಲಾಗಿದೆ.
ಸಂಸತ್ ನಲ್ಲಿ ಗದ್ದಲ ಎಬ್ಬಿಸುತ್ತದೆಯೇ ನಾಗರಿಕ ಕಾಯ್ದೆ?
ರಾಜ್ಯಸಭೆಯಲ್ಲಿ ತೀವ್ರ ಚರ್ಚೆ ಹಾಗೂ ಗದ್ದಲಕ್ಕೆ ಕಾರಣವಾಗಿದ್ದ ರಾಷ್ಟ್ರೀಯ ನಾಗರಿಕ ಕಾಯ್ದೆ ಹಾಗೂ ಇದರಿಂದ ಮೂರು ರಾಜ್ಯಗಳಿಗೆ ವಿನಾಯಿತಿ ನೀಡುವ ಬಗ್ಗೆ ಡಿಸೆಂಬರ್.09ರಂದು ಲೋಕಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆಗಳಿವೆ. ಆಂತರಿಕ ಗಡಿ ಅನುಮತಿ ವ್ಯಾಪ್ತಿಗೆ ಈಶಾನ್ಯ ರಾಜ್ಯಗಳನ್ನು ಸೇರ್ಪಡೆಗೊಳಿಸುವ ಬಗ್ಗೆಯೂ ಚರ್ಚೆಯಾಗುವ ಸಾಧ್ಯತೆಗಳಿವೆ.
ಸರ್ಕಾರದ ಮುಖ್ಯ ಉದ್ದೇಶವೇ ಭಾರತೀಯರ ರಕ್ಷಣೆ
ಅಸ್ಸಾಂ, ತ್ರಿಪುರಾ, ಮೇಘಾಲಯ ರಾಜ್ಯಗಳನ್ನು ಕೂಡಾ ಆಂತರಿಕ ಗಡಿ ಅನುಮತಿ ವ್ಯಾಪ್ತಿಗೆ ಸೇರಿಸಲಾಗುತ್ತದೆ. ಹೀಗಾಗಿ ರಾಷ್ಟ್ರೀಯ ನಾಗರಿಕ ಕಾಯ್ದೆಯಿಂದ ಈ ರಾಜ್ಯಗಳಿಗೂ ವಿನಾಯಿತಿ ಸಿಗಲಿದೆ. ಸರ್ಕಾರದ ಮೂಲ ಉದ್ದೇಶ ಈಗಾಗಲೇ ರಾಜ್ಯಗಳಲ್ಲಿ ನೆಲೆಸಿರುವವರ ರಕ್ಷಣೆ ಮಾಡುವುದಾಗಿದೆ ಎಂದು ಕೇಂದ್ರ ಸರ್ಕಾರ ವಾದಿಸುತ್ತಿದೆ.
ಕೊಟ್ಟ ಮಾತು ಉಳಿಸಿಕೊಳ್ಳಲು ಜಾರಿಯಾಗುತ್ತಿದೆಯಾ ಕಾಯ್ದೆ?
ಹೌದು, ರಾಷ್ಟ್ರೀಯ ನಾಗರಿಕ ಕಾಯ್ದೆ ಜಾರಿಗೊಳಿಸಲು ಕೇಂದ್ರ ಸರ್ಕಾರ ಒಂದು ರೀತಿಯಲ್ಲಿ ಹಠಕ್ಕೆ ಬಿದ್ದಿದೆ. ಇದರ ಹಿಂದ ಮಹತ್ವದ ಕಾರಣವೂ ಇರಬಹುದು. ಏಕೆಂದರೆ ಈ ಹಿಂದೆ 2014 ಹಾಗೂ 2019ರ ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ಈ ಬಗ್ಗೆ ಹೇಳಿಕೊಂಡಿತ್ತು. ಹೀಗಾಗಿ ಪ್ರಣಾಳಿಕೆಯಲ್ಲಿ ಹೇಳಿದ್ದ ಅಂಶವನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆಯಾ ಎಂಬ ಅನುಮಾನಗಳು ಕೂಡಾ ಹುಟ್ಟಿಕೊಳ್ಳುತ್ತಿವೆ.
ಕೇಂದ್ರ ಸರ್ಕಾರ ಮಾಡಿರುವ ತಿದ್ದುಪಡಿ ಏನು?
1955ರ ನಾಗರಿಕ ಕಾಯ್ದೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದೆ. ನೆರೆ ರಾಷ್ಟ್ರಗಳಲ್ಲಿ ಕಿರುಕುಳಕ್ಕೆ ಬಳಲಿ ಬೆಂಡಾದವರಿಗೆ ಭಾರತದಲ್ಲಿ ನೆಲೆ ಕಲ್ಪಿಸುವ ಅವಕಾಶವನ್ನು ಈ ತಿದ್ದುಪಡಿ ಮಾಡಿಕೊಟ್ಟಿದೆ. ಅಂದರೆ, ಪಾಕಿಸ್ತಾನ್, ಬಾಂಗ್ಲಾದೇಶ, ಅಫ್ಘಾನಿಸ್ತಾನ್ ನಲ್ಲಿ ವಿವಿಧ ಸಮುದಾಯದ ಜನರು ಜನಾಂಗೀಯ ಕಿರುಕುಳಕ್ಕೆ ತುತ್ತಾಗಿದ್ದಾರೆ. ಈ ಪೈಕಿ ಕೆಲವರು ಈಗಾಗಲೇ ಭಾರತದಲ್ಲಿ ಬಂದು ನೆಲೆಸಿದ್ದಾರೆ. ಅಂಥವರಿಗೆ ಈ ತಿದ್ದುಪಡಿಯಿಂದ ಸಹಾಯವಾಗಲಿದೆ ಎಂಬುದು ಕೇಂದ್ರ ಸರ್ಕಾರದ ವಾದ.
ನಾಗರಿಕ ಹಕ್ಕು ನೀಡಲು ಕೇಂದ್ರದ ಮಾನದಂಡ
ಭಾರತದ ನೆರೆಯಲ್ಲಿರುವ ಪಾಕಿಸ್ತಾನ್, ಬಾಂಗ್ಲಾದೇಶ, ಅಫ್ಘಾನಿಸ್ತಾನ್ ನಲ್ಲಿರುವ ಹಿಂದೂಗಳು, ಬೌದ್ಧರು, ಸಿಖ್ಖರು, ಜೈನರು, ಕ್ರಿಶ್ಚಿಯನ್ನರು, ಪಾರ್ಸಿಗಳು ಭಾರತಕ್ಕೆ ವಲಸೆ ಬಂದಿದ್ದರೆ ಅವರಿಗೆ ಭಾರತದ ನಾಗರಿಕ ಹಕ್ಕು ನೀಡುವುದಕ್ಕೆ ಈ ತಿದ್ದುಪಡಿ ಅವಕಾಶ ಕಲ್ಪಿಸಿಕೊಡುತ್ತದೆ. ಆದರೆ, ಅದಕ್ಕೆ ಒಂದು ಷರತ್ತು ವಿಧಿಸಲಾಗಿದೆ. ಕಳೆದ 2014ರ ಡಿಸೆಂಬರ್.31ರೊಳಗೆ ಭಾರತಕ್ಕೆ ವಲಸೆ ಬಂದಿರುವ ಜನರಿಗೆ ಮಾತ್ರ ಈ ತಿದ್ದುಪಡಿ ಅನ್ವಯವಾಗುತ್ತದೆ. ಅಂದರೆ ಜನಾಂಗೀಯ ಕಿರುಕುಳದಿಂದ ನೊಂದು ಭಾರತಕ್ಕೆ ವಲಸೆ ಬಂದಿರುವ ನೆರೆ ರಾಷ್ಟ್ರದ ಮಂದಿ, ಭಾರತದಲ್ಲಿ ಕನಿಷ್ಠ 7 ವರ್ಷ ವಾಸವಿರಬೇಕು. ಜೊತೆಗೆ ಪಾಕಿಸ್ತಾನ್, ಬಾಂಗ್ಲಾದೇಶ, ಅಫ್ಘಾನಿಸ್ತಾನ್ ನಲ್ಲಿ ಪೌರತ್ವ ಹೊಂದಿರುವ ಬಗ್ಗೆ ದಾಖಲೆಗಳನ್ನು ಹೊಂದಿರಬೇಕು.
ನಾಗರಿಕ ಕಾಯ್ದೆ ಜಾರಿಗೆ ವಿಪಕ್ಷಗಳ ವಿರೋಧ ಯಾಕೆ?
ಕೇಂದ್ರ ಸರ್ಕಾರದ ರಾಷ್ಟ್ರೀಯ ನಾಗರಿಕ ಕಾಯ್ದೆಯಲ್ಲಿ ಬಾಂಗ್ಲಾದೇಶ, ಅಫ್ಘಾನಿಸ್ತಾನ್ ಹಾಗೂ ಪಾಕಿಸ್ತಾನದಿಂದ ಬಂದ ವಲಸಿಗರನ್ನು ಜಾತಿ ಮತ್ತು ಧರ್ಮದ ಆಧಾರದ ಮೇಲೆ ವಿಭಾಗಿಸಲು ಹೊರಟಿದೆ ಎಂಬುದು ವಿರೋಧಪಕ್ಷಗಳ ವಾದವಾಗಿದೆ. ಅಷ್ಟೇ ಅಲ್ಲದೇ, ಬಿಜೆಪಿ ಮುಸ್ಲಿಂ ವಿರೋಧಿ ನೀತಿ ಪ್ರದರ್ಶಿಸುತ್ತಿದೆ. ಏಕೆಂದರೆ, ಮುಸ್ಲಿಂ ಹೊರತಾಗಿ ಎಲ್ಲ ಧರ್ಮದ ವಲಸಿಗರಿಗೆ ನಾಗರಿಕ ಹಕ್ಕು ನೀಡುವ ಬಗ್ಗೆ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಲಾಗಿದೆ.