ಮಂತ್ರಿಸ್ಥಾನ ತ್ಯಾಗಕ್ಕೆ ಸಿದ್ಧರಾದ ಅರುಣ್ ಜೇಟ್ಲಿಯಿಂದ ಪ್ರಧಾನಿಗೆ ಪತ್ರ
ನವದೆಹಲಿ, ಮೇ 29: ಅನಾರೋಗ್ಯದಿಂದ ಬಳಲುತ್ತಿರುವ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಈ ಬಾರಿ ಕೇಂದ್ರ ಸಚಿವ ಸಂಪುಟದಲ್ಲಿ ಮಂತ್ರಿಸ್ಥಾನದ ಜವಾಬ್ದಾರಿ ಹೊತ್ತುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
"ನನಗಾಗಿ, ನನ್ನ ಚಿಕಿತ್ಸೆಗಾಗಿ ಮತ್ತು ನನ್ನ ಆರೋಗ್ಯಕ್ಕಾಗಿ ನನಗೆ ಸಾಕಷ್ಟು ಸಮಯದ ಅಗತ್ಯವಿರುವುದರಿಂದ ನನಗೆ ಹೊಸ ಸರ್ಕಾರದಲ್ಲಿ ಯಾವುದೇ ರೀತಿಯ ಹೊಣೆಯನ್ನು ನೀಡದಿರಲು ಈ ಮೂಲಕ ಔಪಚಾರಿಕವಾಗಿ ಮನವಿ ಮಾಡಿಕೊಳ್ಳುತ್ತೇನೆ" ಎಂದು ಅರುಣ್ ಜೇಟ್ಲಿ ಪತ್ರದಲ್ಲಿ ಬರೆದಿದ್ದಾರೆ. ಅವರ ಪತ್ರದ ಭಾವಾನುವಾದ ಇಲ್ಲಿದೆ:
I have today written a letter to the Hon’ble Prime Minister, a copy of which I am releasing: pic.twitter.com/8GyVNDcpU7
— Arun Jaitley (@arunjaitley) May 29, 2019
"ಕಳೆದ ಐದು ವರ್ಷಗಳಿಂದ ನಿಮ್ಮ ನಾಯಕತ್ವದ ಸರ್ಕಾರದಲ್ಲಿ ಕಾರ್ಯ ನಿರ್ವಹಿಸುವ ಅವಕಾಶ ಸಿಕ್ಕಿದ್ದು ಒಂದು ಅದ್ಭುತ ಅನುಭವ. ಮೊದಲ ಎನ್ ಡಿಎ ಸರ್ಕಾರದಲ್ಲೂ ನನಗೆ ಅವಕಾಶ ಸಿಕ್ಕಿತ್ತು, ಮಾತ್ರ್ವಲ್ಲ, ಪ್ರತಿಪಕ್ಷದಲ್ಲಿದ್ದಾಗಲೂ ನನಗೆ ಜವಾಬ್ದಾರಿಯುತ ಸ್ಥಾನ ನೀಡಲಾಗಿತ್ತು. ಇದಕ್ಕೂ ಹೆಚ್ಚಿನದನ್ನು ನಾನು ಬಯಸುವುದಿಲ್ಲ.
ಕಳೆದ ಹದಿನೆಂಟು ತಿಂಗಳಿನಿಂದ ನಾನು ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಆದ್ದರಿಂದ ವೈದ್ಯರೂ ನನಗೆ ವಿಶ್ರಾಂತಿ ತೆಗೆದುಕೊಳ್ಳುವಂತೆ ತಿಳಿಸಿದ್ದಾರೆ. ಕೇದಾರನಾಥದಲ್ಲಿ ನೀವು ಪ್ರಚಾರ ನಡೆಸುವ ಸಂದರ್ಭದಲ್ಲಿ ನಾನು ನಿಮಗೆ ಮೌಖಿಕವಾಗಿ ಈ ವಿಷಯ ತಿಳಿಸಿದ್ದೆ. ಈಗ ಲಿಖಿತವಾಗಿ ತಿಳಿಸುತ್ತಿದ್ದೇನೆ. ನಾನು ಹೊಸ ಜವಾಬ್ದಾರಿಯನ್ನು ವಹಿಸಿಕೊಳ್ಳದೆ ಇರುವುದರಿಂದ ನನಗೆ ನನ್ನ ಚಿಕಿತ್ಸೆ ಮತ್ತು ಆರೋಗ್ಯದ ಬಗ್ಗೆ ಗಮನ ಹರಿಸಲು ಸಹಾಯವಾಗುತ್ತದೆ. ನಾಳೆ ಹೊಸ ಸರ್ಕಾರ ರಚನೆಯಾಹಗುತ್ತದೆ. ಬಿಜೆಪಿ ಮತ್ತು ಎನ್ ಡಿಎ ನಿಮ್ಮ ನಾಯಕತ್ವದಲ್ಲಿ ಅಭೂತಪೂರ್ವ ಜಯ ಗಳಿಸಿದೆ.
ನನ್ನ ಚಿಕಿತ್ಸೆ ಮತ್ತು ಆರೋಗ್ಯದ ಬಗ್ಗೆ ಗಮನ ನೀಡಲು ನನಗೆ ಯಾವುದೇ ಹೊಸ ಜವಾಬ್ದಾರಿ ನೀಡಬಾರದು ಎಂದು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.
ನನ್ನ ಬೆಂಬಲ ಯಾವಾಗಲೂ ಪಕ್ಷಕ್ಕಿರುತ್ತದೆ.
ಇಂತಿ ನಿಮ್ಮ ವಿಶ್ವಾಸಿ
ಅರುಣ್ ಜೇಟ್ಲಿ