ಪಿಂಚಣಿ ಹಣ: ಅರುಣ್ ಜೇಟ್ಲಿ ಪತ್ನಿ ಸಂಗೀತಾ ಜೇಟ್ಲಿ ಮಹತ್ವದ ನಿರ್ಧಾರ
ನವದೆಹಲಿ, ಅಕ್ಟೋಬರ್ 2: ಆಗಸ್ಟ್ 24ರಂದು ನಿಧನರಾದ ಕೇಂದ್ರದ ಮಾಜಿ ಸಚಿವ ಅರುಣ್ ಜೇಟ್ಲಿ ಅವರಿಗೆ ಬರಬೇಕಾಗಿರುವ ಬಾಕಿ ಪಿಂಚಣಿ ಹಣವನ್ನು ಪಡೆಯಲು ನಿರಾಕರಿಸಿರುವ ಅವರ ಪತ್ನಿ ಸಂಗೀತಾ ಜೇಟ್ಲಿ, ಅದನ್ನು ರಾಜ್ಯಸಭೆಯಲ್ಲಿ ಕೆಲಸ ಮಾಡುವ ಹಣದ ಅಗತ್ಯವಿರುವ ಸಿಬ್ಬಂದಿಗೆ ನೀಡುವಂತೆ ಕೋರಿದ್ದಾರೆ.
ಈ ಸಂಬಂಧ ರಾಜ್ಯಸಭೆ ಅಧ್ಯಕ್ಷ ಎಂ. ವೆಂಕಯ್ಯ ನಾಯ್ಡು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಸಂಗೀತಾ ಜೇಟ್ಲಿ, ಅರುಣ್ ಜೇಟ್ಲಿ ಅವರ ಪರೋಪಕಾರದ ಮನೋಭಾವವನ್ನು ಉಲ್ಲೇಖಿಸಿ ಬಾಕಿ ಇರುವ ಪಿಂಚಣಿ ಮೊತ್ತವನ್ನು ರಾಜ್ಯಸಭೆಯ IV ವರ್ಗದ ಸಿಬ್ಬಂದಿಗೆ ನೀಡುವಂತೆ ಮನವಿ ಮಾಡಿದ್ದಾರೆ.
ಸೋನಿಯಾರ ರಾಯ್ ಬರೇಲಿಗೆ ಅರುಣ್ ಜೇಟ್ಲಿ ಕೊನೆ 'ಉಡುಗೊರೆ'
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ಮೊದಲ ಅವಧಿಯಲ್ಲಿ ಹಣಕಾಸು ಸಚಿವರಾಗಿದ್ದ ಅರುಣ್ ಜೇಟ್ಲಿ ಅವರು ಸುದೀರ್ಘ ಕಾಲದ ಅನಾರೋಗ್ಯದ ಸಮಸ್ಯೆಯ ಬಳಿಕ ಆಗಸ್ಟ್ 24ರಂದು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಆಗಸ್ಟ್ 9ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೇಟ್ಲಿ ಅವರು ತಮ್ಮ ಜೀವಮಾನದುದ್ದಕ್ಕೂ ಈ ರೀತಿ ಪರೋಪಕಾರದ ಕೆಲಸಗಳನ್ನು ಮಾಡಿದ್ದಾರೆ.
ಸಂಗೀತಾ ಜೇಟ್ಲಿ ಪತ್ರದಲ್ಲೇನಿದೆ?
'ಮೃತ ಸಂಸದರ ಪತ್ನಿಗೆ ಸಲ್ಲಿಸಬೇಕಿರುವ ಪಿಂಚಣಿಯ ಕುರಿತಾಗಿ ಇರುವ ಪವಿತ್ರ ಭಾವನೆಯನ್ನು ಕೀಳಾಗಿ ಕಾಣುವ ಯಾವುದೇ ಉದ್ದೇಶವಿಲ್ಲದೆ ಅರುಣ್ ಜೇಟ್ಲಿ ಅವರು ಸ್ವತಃ ಪ್ರತಿಪಾದಿಸಿದಂತೆ ಈ ಪಿಂಚಣಿಯ ಹಣವನ್ನು ಅರುಣ್ ಜೇಟ್ಲಿ ಅವರು ಸುಮಾರು ಎರಡು ದಶಕ ಸೇವೆ ಸಲ್ಲಿಸಿದ ಸಂಸ್ಥೆಯಾದ ರಾಜ್ಯಸಭೆಯ IV ದರ್ಜೆಯ ಅತ್ಯಂತ ಅಗತ್ಯವಿರುವ ಉದ್ಯೋಗಿಗಳ ಕಲ್ಯಾಣಕ್ಕೆ ಬಳಸಿಕೊಳ್ಳುವಂತೆ ಗೌರವಾನ್ವಿತ ಸಂಸತನ್ನು ಕೋರುತ್ತೇನೆ. ಅರುಣ್ ಅವರೂ ಇದನ್ನೇ ಬಯಸುತ್ತಿದ್ದರು ಎನ್ನುವುದು ನನಗೆ ಖಾತರಿಯಿದೆ' ಎಂದು ಸಂಗೀತಾ ಹೇಳಿದ್ದಾರೆ.
ಸಂಸದರ ಪಿಂಚಣಿ ಮೊತ್ತ
ಸಂಸತ್ ಕಾಯ್ದೆಯ ವೇತನ ಮತ್ತು ಭತ್ಯೆಯ ನಿಯಮದ ಪ್ರಕಾರ ಮಾಜಿ ಸಂಸದರೊಬ್ಬರಿಗೆ ಮಾಸಿಕ ಕನಿಷ್ಠ 20,000 ರೂ. ಪಿಂಚಣಿ ಮತ್ತು ಎರಡು ಸದನಗಳ ಪೈಕಿ ಒಂದರಲ್ಲಿ ಸದಸ್ಯರಾಗಿ ಐದು ವರ್ಷಕ್ಕೂ ಹೆಚ್ಚು ಸಮಯ ಕಳೆದಿದ್ದರೆ ಪ್ರತಿ ವರ್ಷ 1,500 ರೂ. ಮಾಸಿಕ ಹೆಚ್ಚುವರಿ ಪಿಂಚಣಿ ನೀಡಬೇಕಾಗುತ್ತದೆ.
ಬಿಜೆಪಿ ಹಿರಿಯ ನಾಯಕರ ಸಾವಿಗೆ ಕಾರಣ ಬಹಿರಂಗ ಪಡಿಸಿದ ಸಾಧ್ವಿ ಪ್ರಜ್ಞಾ!
ವಾರ್ಷಿಕ ಸುಮಾರು 3 ಲಕ್ಷ ರೂ.
ಅರುಣ್ ಜೇಟ್ಲಿ ಅವರು 1999ರಿಂದ ರಾಜ್ಯಸಭೆಯ ಸದಸ್ಯರಾಗಿದ್ದರಿಂದ ಅವರಿಗೆ ಹೆಚ್ಚುವರಿ 22,500 ರೂ ಮಾಸಿಕ ಹೆಚ್ಚುವರಿ ಪಿಂಚಣಿ ಸಿಗಬೇಕಾಗುತ್ತದೆ. ಹಾಗೆಯೇ ಅವರಿಗೆ ಪ್ರತಿ ತಿಂಗಳು ಸಿಗುವ ಒಟ್ಟು ಪಿಂಚಣಿ ಮೊತ್ತವು ಸುಮಾರು 50,000 ರೂ. ಆಗುತ್ತದೆ.
ಸದಸ್ಯರಾಗಿದ್ದಾಗ ಅಥವಾ ಮಾಜಿ ಸಂಸದರಾಗಿದ್ದಾಗ ಮೃತಪಟ್ಟವರ ಪತ್ನಿ ಅಥವಾ ಕುಟುಂಬದ ಅವಲಂಬಿತರಿಗೆ ಶೇ 50ರಷ್ಟು ಪಿಂಚಣಿ ಹಣ ಸಿಗುತ್ತದೆ. ಹೀಗಾಗಿ ಅರುಣ್ ಜೇಟ್ಲಿ ಅವರ ಕುಟುಂಬಕ್ಕೆ ಅಂದಾಜು 25 ಸಾವಿರ ಮಾಸಿಕ ಅಥವಾ ವರ್ಷಕ್ಕೆ 3 ಲಕ್ಷ ರೂ. ಪಿಂಚಣಿ ಹಣ ಸಿಗಬೇಕು. ಈ ಹಣವನ್ನು ಸಂಗೀತಾ ಜೇಟ್ಲಿ ರಾಜ್ಯಸಭೆಯ ನೌಕರರ ಅಭಿವೃದ್ಧಿಗೆ ಬಳಸಿಕೊಳ್ಳಲು ಸಲಹೆ ನೀಡಿದ್ದಾರೆ.
ಸಿಬ್ಬಂದಿಗೆ ಮಕ್ಕಳಿಗೆ ಶಿಕ್ಷಣ
ಅರುಣ್ ಜೇಟ್ಲಿ ಅವರು ದಾನಧರ್ಮದ ಕಾರ್ಯಗಳಲ್ಲಿ ಹೆಸರುವಾಸಿಯಾಗಿದ್ದರು. ತಮ್ಮ ಎಲ್ಲ ಸಿಬ್ಬಂದಿಯ ಮಕ್ಕಳ ಶಿಕ್ಷಣಕ್ಕೆ ತಾವೇ ಹಣ ನೀಡುತ್ತಿದ್ದರು. ಏಮ್ಸ್ನಲ್ಲಿ 2018ರ ಮೇ ತಿಂಗಳಿನಲ್ಲಿ ಮೂತ್ರಪಂಡ ಕಸಿ ಶಸ್ತ್ರಚಿಕಿತ್ಸೆ ನಡೆದ ಬಳಿಕ ಅವರ ಕುಟುಂಬವು ಆಸ್ಪತ್ರೆಗೆ ಬರುವ ರೋಗಿಗಳಿಗೆ ಸೌಲಭ್ಯಗಳು ಸಿಗಬೇಕು ಎಂಬ ಸಲುವಾಗಿ ವಾಟರ್ ಕೂಲರ್ ಮತ್ತು ಡಿಸ್ಪೆನ್ಸಿಂಗ್ ಯುನಿಟ್ಗಳನ್ನು ಕೊಡುಗೆಯಾಗಿ ನೀಡಿದ್ದರು.