ಅರುಣ್ ಜೇಟ್ಲಿ ಆರೋಗ್ಯಸ್ಥಿತಿ ಗಂಭೀರ, ಏಮ್ಸ್ ಗೆ ಮೋದಿ ಭೇಟಿ ಸಾಧ್ಯತೆ
ನವದೆಹಲಿ, ಆಗಸ್ಟ್ 18: ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿದೆ. ಭಾನುವಾರದಂದು ಅವರನ್ನು ಜೀವರಕ್ಷಕ ವ್ಯವಸ್ಥೆಯುಳ್ಳ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ. ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದು, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಅವರ್ ಭೇಟಿ ನೀಡುವ ಸಾಧ್ಯತೆ ಇದೆ.
ಒಂದು ವಾರ ಕಳೆದರೂ ಜೇಟ್ಲಿ ಆರೋಗ್ಯ ಕುರಿತಂತೆ ಏಮ್ಸ್ ತನ್ನ ಪ್ರಕಟಣೆಯನ್ನು ಹೊರಡಿಸಿಲ್ಲ, ಹೀಗಾಗಿ, ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿದೆ.
ಆಗಸ್ಟ್ 9 ರಂದು ತೀವ್ರವಾಗಿ ನಿತ್ರಾಣಗೊಂಡು ಬಳಲುತ್ತಿದ್ದ ಅರುಣ್ ಜೇಟ್ಲಿ ಅವರನ್ನು ಏಮ್ಸ್ ಗೆ ದಾಖಲಿಸಲಾಗಿದೆ. ಅಂದೇ ರಾತ್ರಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಆಸ್ಪತ್ರೆಗೆ ಭೇಟಿ ನೀಡಿ, ಜೇಟ್ಲಿ ಅವರು ಬಹುಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದರು.
ನಂತರ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದರು. ಆಗಸ್ಟ್ 10ರಂದು ಏಮ್ಸ್ ಅಧಿಕೃತ ಮೆಡಿಕಲ್ ಬುಲೆಟಿನ್ ನೀಡಿದ್ದು, ಬಿಟ್ಟರೆ ಇಲ್ಲಿ ತನಕ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ.
ಅರುಣ್ ಜೇಟ್ಲಿ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ, ಏಮ್ಸ್ ನತ್ತ ಕೋವಿಂದ್
ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಅವರು ಭಾನುವಾರದಂದು ಏಮ್ಸ್ ಗೆ ಭೇಟಿ ನೀಡಿ, ಆರೋಗ್ಯ ಸ್ಥಿತಿ ಬಗ್ಗೆ ವಿಚಾರಿಸಿದ್ದಾರೆ. ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ, ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲೀಕ್, ಕೇಂದ್ರ ಸಚಿವ ಹರ್ಷ್ ವರ್ದನ್, ಕಾಂಗ್ರೆಸ್ಸಿಗರಾದ ಅಭಿಶೇಕ್ ಮನು ಸಿಂಘ್ವಿ, ಜ್ಯೋತಿರಾದಿಯಾ ಸಿಂಧ್ಯಾ, ಏರ್ ಛೀಫ್ ಮಾರ್ಷಲ್ ಬೀರೇಂದ್ರ ಸಿಂಗ್ ಧನೋವ್ ಅವರು ಆಸ್ಪತ್ರೆಗೆ ಭೇಟಿ ನೀಡಿದ ಪ್ರಮುಖರು.
66 ವರ್ಷ ವಯಸ್ಸಿನ ಜೇಟ್ಲಿ ಅವರು ಸದ್ಯ ಜೀವ ರಕ್ಷಕ ಸಾಧನದ ಮೂಲಕ ಉಸಿರಾಟ ನಡೆಸುತ್ತಿದ್ದಾರೆ. ತೀವ್ರ ನಿಗಾ ಘಟಕದಲ್ಲಿರುವ ಅರುಣ್ ಜೇಟ್ಲಿ ಅವರಿಗೆ ಎಂಡೋಕ್ರಿನೋಲಾಜಿಸ್ಟ್, ನೆಪ್ರೋಲಾಜಿಸ್ಟ್ ಮತ್ತು ಕಾರ್ಡಿಯಾಲಜಿಸ್ಟ್ ಗಳ ತಂಡದ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ಅರುಣ್ ಜೇಟ್ಲಿ ಜೊತೆ ಜಗಳಕ್ಕಾಗಿ ಕಾಯುತ್ತಿದ್ದೇನೆ: ಶಶಿ ತರೂರ್
ಕಳೆದ ವರ್ಷ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ರಾಜ್ಯಸಭಾ ಸದಸ್ಯ ಅರುಣ್ ಜೇಟ್ಲಿ ಹಲವು ತಿಂಗಳ ಕಾಲ ರಾಜಕೀಯದಿಂದ ದೂರವೇ ಉಳಿದಿದ್ದರು. ಅನಾರೋಗ್ಯದ ಕಾರಣದಿಂದಲೇ ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ ಹಾಗೂ ಮೋದಿ 2.0 ಸರ್ಕಾರದಲ್ಲಿ ಸಚಿವರಾಗಲು ಬಯಸಲಿಲ್ಲ. ವಿತ್ತ ಸಚಿವರಾದ ಪಿಯೂಶ್ ಗೋಯಲ್ ಅವರು ಈ ಬಾರಿ ಕೇಂದ್ರ ಬಜೆಟ್ ಅನ್ನು ಮಂಡಿಸಿದ್ದರು.