ದೆಹಲಿ ಗಲಭೆ ನಂತರ ಪಂಜಾಬ್ ಮೂಲದ ನೂರು ರೈತರು ಕಾಣೆ
ನವದೆಹಲಿ, ಜನವರಿ 30: ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ನಡೆದ ಗಲಭೆ ನಂತರ ಪಂಜಾಬ್ ಮೂಲದ ಸುಮಾರು ನೂರು ಪ್ರತಿಭಟನಾನಿರತ ರೈತರು ಕಾಣೆಯಾಗಿದ್ದಾರೆ ಎಂದು ಪಂಜಾಬ್ ಸ್ವಯಂಸೇವಾ ಸಂಸ್ಥೆ ತಿಳಿಸಿದೆ.
ಗಣರಾಜ್ಯೋತ್ಸವದಂದು ರೈತರ ಟ್ರ್ಯಾಕ್ಟರ್ ಜಾಥಾ ಸಂದರ್ಭ ಗಲಭೆ ನಡೆದಿದ್ದು, ಇದರಲ್ಲಿ ಪಂಜಾಬ್ ನ ಸುಮಾರು ನೂರು ಪ್ರತಿಭಟನಾಕಾರರು ಕಾಣೆಯಾಗಿದ್ದಾರೆ ಎಂದು ಪಂಜಾಬ್ ಮಾನವ ಹಕ್ಕುಗಳ ಸಂಸ್ಥೆ ತಿಳಿಸಿದೆ. ಮೋಗಾ ಜಿಲ್ಲೆಯ ತಾತರೀವಾಲ ಜಿಲ್ಲೆಯ ಹನ್ನೆರಡು ರೈತರು ಜನವರಿ 26ರಿಂದ ಪತ್ತೆಯಾಗಿಲ್ಲ ಎಂದು ತಿಳಿಸಿದೆ.
ಸಿಂಘು ಗಡಿಯಲ್ಲಿ ಹಿಂಸಾಚಾರ: ಖಡ್ಗದಿಂದ ದಾಳಿ ನಡೆಸಿದ ಆರೋಪಿ ಸೇರಿ 44 ಮಂದಿ ಬಂಧನ
ಪಂಜಾಬ್ ಮಾನವ ಹಕ್ಕುಗಳ ಸಂಸ್ಥೆ ಹೊರತಾಗಿ ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ, ಖಾಲ್ರ ಮಿಷನ್, ಪಂತಿ ತಾಲ್ಮೆಲ್ ಸಂಘಟನೆ ಸೇರಿದಂತೆ ಹಲವು ಸಂಘಟನೆಗಳು, ದೆಹಲಿ ಗಲಭೆ ಸಂಬಂಧಿ ಬಂಧಿತರಾದವರಿಗೆ ಉಚಿತ ಕಾನೂನು ಸಲಹೆಯ ನೆರವನ್ನೂ ಘೋಷಿಸಿವೆ.
ಕೆಂಪು ಕೋಟೆಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ಪೊಲೀಸರು ಇದುವರೆಗೂ ಹದಿನೆಂಟು ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ. ಪಶ್ಚಿಮ ವಿಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿವೆ. ಈ ಹದಿನೆಂಟು ಮಂದಿಯಲ್ಲಿ ಏಳು ಮಂದಿ ಪಂಜಾಬ್ ನ ಬತಿಂದಾ ಜಿಲ್ಲೆಯ ಬಂಗಿ ನಿಹಾಲ್ ಸಿಂಗ್ ಗ್ರಾಮಕ್ಕೆ ಸೇರಿದವರಾಗಿದ್ದಾರೆ. ಬಂಧಿತರೆಲ್ಲರೂ ಟ್ರ್ಯಾಕ್ಟರ್ ಜಾಥಾದಲ್ಲಿ ಪಾಲ್ಗೊಳ್ಳಲು ಜನವರಿ 23ರಂದು ಮನೆಯಿಂದ ಹೊರಟಿದ್ದರು ಎನ್ನಲಾಗಿದೆ.
ದೆಹಲಿಯ ಅಲಿಪುರ ಹಾಗೂ ನರೇಲಾದಲ್ಲಿಯೂ ರೈತರನ್ನು ಬಂಧಿಸಿರುವುದಾಗಿ ಸಂಘಗಳು ಆರೋಪಿಸಿವೆ. ಆದರೆ ಬಂಧಿತರಾಗಿರುವ ರೈತರ ಮಾಹಿತಿ ದೊರೆಯುತ್ತಿಲ್ಲ ಎಂದು ತಿಳಿಸಿವೆ. ಸದ್ಯಕ್ಕೆ ಕಾಣೆಯಾಗಿರುವ ರೈತರ ಕುರಿತು ರೈತ ಸಂಘಗಳು ಮಾಹಿತಿ ಸಂಗ್ರಹಿಸುತ್ತಿರುವುದಾಗಿ ಭಾರತೀಯ ಕಿಸಾನ್ ಯೂನಿಯನ್ ಮುಖ್ಯಸ್ಥ ಬಲಬೀರ್ ಸಿಂಗ್ ರಾಜೇವಾಲ ತಿಳಿಸಿದ್ದಾರೆ.