ಅರ್ನಬ್ ಗೋಸ್ವಾಮಿಗೆ ಸುಪ್ರೀಂಕೋರ್ಟ್ ಜಾಮೀನು: ಕೋರ್ಟ್ ಹೇಳಿದ್ದೇನು?
ನವದೆಹಲಿ, ನವೆಂಬರ್ 11: ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಅವರಿಗೆ ಸುಪ್ರೀಂಕೋರ್ಟ್ ಬುಧವಾರ ಜಾಮೀನು ಮಂಜೂರು ಮಾಡಿದೆ.
2018ರಲ್ಲಿ ನಡೆದಿದ್ದ ಒಳಾಂಗಣ ವಿನ್ಯಾಸಕಾರ ಅನ್ವಯ್ ನಾಯ್ಕ್ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಅರ್ನಬ್ ಅವರನ್ನು ಎಂಟು ದಿನಗಳ ಹಿಂದೆ ಬಂಧಿಸಲಾಗಿತ್ತು. ಅವರಿಗೆ ಜಾಮೀನು ನೀಡಲು ನಿರಾಕರಿಸಿದ್ದ ಬಾಂಬೆ ಹೈಕೋರ್ಟ್, ಪ್ರಕರಣದ ತನಿಖೆ ನಡೆಯುತ್ತಿರುವ ಸೆಷನ್ಸ್ ಕೋರ್ಟ್ನಲ್ಲಿಯೇ ಜಾಮೀನಿಗೆ ಅರ್ಜಿ ಸಲ್ಲಿಸುವಂತೆ ಹೇಳಿತ್ತು. ಆದರೆ ಅರ್ನಬ್ ಅವರ ವಕೀಲ ಹರೀಶ್ ಸಾಳ್ವೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ನಾವು ಅರ್ನಬ್ ಚಾನೆಲ್ ನೋಡುವುದಿಲ್ಲ, ಆದರೆ.. :ಸುಪ್ರೀಂ ಹೇಳಿದ್ದೇನು?
ಬುಧವಾರ ಅರ್ನಬ್ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಅರ್ನಬ್ ಅವರಿಗೆ ಜಾಮೀನು ಮಂಜೂರು ಮಾಡಿದೆ. ಇದೇ ಸಂದರ್ಭದಲ್ಲಿ ಸುಪ್ರೀಂಕೋರ್ಟ್, ಮಹಾರಾಷ್ಟ್ರ ಸರ್ಕಾರ ಮತ್ತು ಪೊಲೀಸರ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತು.
50,000 ರೂ ವೈಯಕ್ತಿಕ ಬಾಂಡ್ ಆಧಾರದಲ್ಲಿ ಅರ್ನಬ್ ಅವರಿಗೆ ಜಾಮೀನು ನೀಡಲಾಗಿದೆ. ಅವರೊಂದಿಗೆ ಇತರೆ ಇಬ್ಬರು ಆರೋಪಿಗಳಿಗೂ ಜಾಮೀನು ಮಂಜೂರು ಮಾಡಲಾಗಿದೆ. ಅರ್ನಬ್ ಮತ್ತು ಇತರರು ಪ್ರಕರಣದ ತನಿಖೆಗೆ ಸಹಕರಿಸಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ. ಮುಂದೆ ಓದಿ.
ಕೂಡಲೇ ಬಿಡುಗಡೆಗೆ ಆದೇಶ
ನವೆಂಬರ್ 4ರಂದು ಅರ್ನಬ್ ಹಾಗೂ ಇನ್ನಿಬ್ಬರು ಆರೋಪಿಗಳಾದ ಫೆರೋಜ್ ಶೇಕ್ ಮತ್ತು ನಿತೀಶ್ ಸರ್ದಾ ಅವರನ್ನು ಬಂಧಿಸಲಾಗಿತ್ತು. ಬಾಂಬೆ ಹೈಕೋರ್ಟ್ ಜಾಮೀನು ಮಂಜೂರು ಮಾಡದೆ ಇರುವುದು ಸರಿಯಲ್ಲ ಎಂದ ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಇಂದಿರಾ ಬ್ಯಾನರ್ಜಿ ಅವರನ್ನು ಒಳಗೊಂಡ ನ್ಯಾಯಪೀಠ ಅಭಿಪ್ರಾಯಪಟ್ಟಿತು. ತನ್ನ ಆದೇಶವನ್ನು ತಕ್ಷಣದಿಂದಲೇ ಜಾರಿಗೆ ತರುವಂತೆ ಪೊಲೀಸ್ ಆಯುಕ್ತರಿಗೆ ನ್ಯಾಯಪೀಠ ಸೂಚನೆ ನೀಡಿತು.
ಮುಖ್ಯಮಂತ್ರಿಯನ್ನು ಬಂಧಿಸುತ್ತೀರಾ?
'ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣಗಳಲ್ಲಿ ಅಪರಾಧದ ನೇರ ಮತ್ತು ಪರೋಕ್ಷ ಕೃತ್ಯದ ಅಂಶಗಳಿರಬೇಕು. ಮಹಾರಾಷ್ಟ್ರದಲ್ಲಿ ಒಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡು ಅದನ್ನು ಸರ್ಕಾರದ ಮೇಲೆ ಹೊರಿಸಿದರೆ ಮುಖ್ಯಮಂತ್ರಿಯನ್ನು ಬಂಧಿಸಲಾಗುತ್ತದೆಯೇ? ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣಗಳಲ್ಲಿ ಅದನ್ನು ಸಾಬೀತುಪಡಿಸಲು ಸೂಕ್ತ ಪರೀಕ್ಷೆಗಳನ್ನು ನಡೆಸಬೇಕು' ಎಂದು ವಕೀಲ ಹರೀಶ್ ಸಾಳ್ವೆ ವಾದಿಸಿದ್ದರು.
ಏಳು ವರ್ಷದಿಂದ ಆರ್ಥಿಕ ನಷ್ಟ
ಅರ್ನಬ್ ಅವರು ತಮ್ಮ ಕಚೇರಿ ಕಾರ್ಯಕ್ಕೆ ಬಳಸಿಕೊಂಡ ಎಲ್ಲ ಸಂಸ್ಥೆಗಳಿಗೂ ಹಣ ಪಾವತಿ ಮಾಡಿರುವುದಕ್ಕೆ ದಾಖಲೆಗಳಿವೆ. ಅನ್ವಯ್ ಅವರ ಕಾಂಕೋರ್ಡ್ ಡಿಸೈನ್ ಸಂಸ್ಥೆ ಕಳೆದ ಏಳು ವರ್ಷಗಳಿಂದ ಆರ್ಥಿಕ ಸಂಕಷ್ಟದಲ್ಲಿತ್ತು. ಅನ್ವಯ್ ಅವರ ಆತ್ಮಹತ್ಯೆ ಚೀಟಿ ಪ್ರಕಾರ ಕಾಂಕೋರ್ಡ್ ಸಂಸ್ಥೆಗೆ 5 ಕೋಟಿಗೂ ಅಧಿಕ ಹಣ ಪಾವತಿಸಿದ್ದು, 83 ಲಕ್ಷ ಮಾತ್ರ ಬಾಕಿ ಇತ್ತು. ಆರ್ಥಿಕ ಸಂಕಷ್ಟದಿಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅನ್ವಯ್ ಪತ್ನಿ ಅಕ್ಷತಾ ನಾಯ್ಕ್ ಹೇಳಿದ್ದಾರೆ. ಹಾಗಾದರೆ ಅದು ಹೇಗೆ ತಾನೆ ಆತ್ಮಹತ್ಯೆಗೆ ಪ್ರಚೋದನೆಯಾಗುತ್ತದೆ? ಎಂದು ಅವರು ಪ್ರಶ್ನಿಸಿದ್ದರು.
ಇದು ನ್ಯಾಯದ ಅಣಕವಲ್ಲವೇ?
ಬಾಂಬೆ ಹೈಕೋರ್ಟ್ ಬರೆದ 56 ಪುಟಗಳ ವಿಸ್ತೃತ ಆದೇಶದಲ್ಲಿ ಎಲ್ಲಿಯೂ ಈ ಪ್ರಕರಣದಲ್ಲಿ ಮೇಲ್ನೋಟಕ್ಕೆ ಆತ್ಮಹತ್ಯೆಗೆ ಪ್ರಚೋದನೆ ಅಪರಾಧ ಸಾಬೀತಾಗುವಂತಿದೆಯೇ ಎಂಬುದನ್ನು ಹೇಳಿಲ್ಲ. ಇಂತಹ ಪ್ರಕರಣಗಳಲ್ಲಿ ಬಾಕಿ ಹಣ ಪಾವತಿಸದೆ ಇರುವುದು ಆತ್ಮಹತ್ಯೆಗೆ ಪ್ರಚೋದನೆಯಾಗುತ್ತದೆಯೇ? ಇದಕ್ಕೆ ಜಾಮೀನು ನಿರಾಕರಿಸಿವುದು ನ್ಯಾಯದ ಅಣಕವಲ್ಲವೇ? ಆತ್ಮಹತ್ಯೆಗೆ ಸಕ್ರಿಯ ಚಿತಾವಣೆ ನಡೆದಿದೆಯೇ? ಇದು ವಶದಲ್ಲಿಟ್ಟುಕೊಂಡು ವಿಚಾರಣೆ ನಡೆಸುವ ಪ್ರಕರಣವೇ? ಎಂದು ನ್ಯಾಯಮೂರ್ತಿ ಚಂದ್ರಚೂಡ್ ಅವರು ಬಾಂಬೆ ಹೈಕೋರ್ಟ್ ಮತ್ತು ಮಹಾರಾಷ್ಟ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ವೈಯಕ್ತಿಕ ಸ್ವಾತಂತ್ರ್ಯ ಎತ್ತಿಹಿಡಿಯಿರಿ
ಜಾಮೀನು ನಿರಾಕರಿಸಿರುವುದು ವೈಯಕ್ತಿಕ ಸ್ವಾತಂತ್ರ್ಯವನ್ನು ನಿರಾಕರಿಸಿದಂತೆ. ವೈಯಕ್ತಿಕ ಸ್ವಾತಂತ್ರ್ಯವನ್ನು ಎತ್ತಿಹಿಡಿಯಲು ನಿಮ್ಮ ನ್ಯಾಯವ್ಯಾಪ್ತಿಯನ್ನು ದಯವಿಟ್ಟು ಬಳಸಿಕೊಳ್ಳಿ ಎಂದು ನಾವು ಇಂದು ಹೈಕೋರ್ಟ್ಗಳಿಗೆ ಸಂದೇಶ ರವಾನಿಸಬೇಕಾಗಿದೆ ಎಂದರು.
ಅದು ಹೇಗೆ ಪ್ರಚೋದನೆಯಾಗುತ್ತದೆ?
ಸೆಕ್ಷನ್ 306ರಲ್ಲಿ ಪ್ರಚೋದನೆ ಎನ್ನುವುದು ವಾಸ್ತವವಾಗಿ ಕಾಣಿಸಬೇಕಾಗುತ್ತದೆ. ಒಬ್ಬರು ಮತ್ತೊಬ್ಬರಿಗೆ ಹಣ ಕೊಡಬೇಕಿದ್ದು, ಅವರು ಆತ್ಮಹತ್ಯೆ ಮಾಡಿಕೊಂಡರೆ ಅದು ಪ್ರಚೋದನೆಯಾಗುತ್ತದೆಯೇ? ಎಂದು ಎಫ್ಐಆರ್ ಪರಿಶೀಲಿಸಿದ ಚಂದ್ರಚೂಡ್, ಅನ್ವಯ್ ನಾಯ್ಕ್ ಮಾನಸಿಕ ಒತ್ತಡವನ್ನೂ ಅನುಭವಿಸುತ್ತಿದ್ದರು ಎಂದು ಹೇಳಿದರು.