ಮದುವೆಗೆ ನಿರಾಕರಿಸಿದ್ದಕ್ಕೆ ಸೇನೆಯ ಅಧಿಕಾರಿಯ ಪತ್ನಿ ಹತ್ಯೆಗೈದ ಮೇಜರ್
ನವದೆಹಲಿ, ಜೂನ್ 25: ಸೇನೆಯ ಮೇಜರ್ ಅಮಿತ್ ದ್ವಿವೇದಿ ಅವರ ಪತ್ನಿ ಶೈಲಜಾ ದ್ವಿವೇದಿ ಅವರ ಹತ್ಯೆಯ ರಹಸ್ಯವನ್ನು ಪೊಲೀಸರು ಭೇದಿಸಿದ್ದಾರೆ.
ತಮ್ಮನ್ನು ಮದುವೆಯಾಗಲು ನಿರಾಕರಿಸಿದ್ದಕ್ಕೆ ಸೇನೆಯ ಮೇಜರ್ ನಿಖಿಲ್ ಹಂದ ಅವರು ಮೇಜರ್ ಪತ್ನಿಯನ್ನು ಹತ್ಯೆ ಮಾಡಿದ್ದರು ಎಂಬ ಅಂಶವನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ.
ಸೇನೆ ಮೇಜರ್ ಪತ್ನಿಯ ಹತ್ಯೆ, ಮತ್ತೋರ್ವ ಮೇಜರ್
ಶೈಲಜಾ ದ್ವಿವೇದಿ ಅವರನ್ನು ಮೋಹಿಸಿದ್ದ ನಿಖಿಲ್ ಹಂದ, ತಮ್ಮನ್ನು ಮದುವೆಯಾಗಲು ನಿರಾಕರಿಸಿದ್ದಕ್ಕೆ ಕೋಪಗೊಂಡಿದ್ದರು. 2015ರಲ್ಲಿ ಅಮಿತ್ ದ್ವಿವೇದಿ ಅವರು ನಾಗಾಲ್ಯಾಂಡ್ನಲ್ಲಿ ಕರ್ತವ್ಯಕ್ಕೆ ಸೇರಿಕೊಂಡಾಗ ಮೇಜರ್ ಹಂದ ಮತ್ತು ಶೈಲಜಾ ಅವರು ಭೇಟಿಯಾಗಿದ್ದರು.
ಬಳಿಕ ಅಮಿತ್ ದ್ವಿವೇದಿ ಅವರು ದೆಹಲಿಗೆ ವರ್ಗಾವಣೆಯಾದ ಬಳಿಕವೂ ಹಂದ ಮತ್ತು ಶೈಲಜಾ ಅವರು ಸಂಪರ್ಕದಲ್ಲಿದ್ದರು. ಇಬ್ಬರೂ ಫೋನ್ನಲ್ಲಿ ನಿರಂತರವಾಗಿ ಮಾತನಾಡುತ್ತಿದ್ದರು. ಹಂದ ಅವರೇ ಹೆಚ್ಚು ಬಾರಿ ಫೋನ್ ಕರೆ ಮಾಡುತ್ತಿದ್ದರು.
ಇಬ್ಬರೂ ವಿಡಿಯೋ ಕಾಲ್ನಲ್ಲಿ ಮಾತನಾಡುತ್ತಿದ್ದಾಗ ಮೇಜರ್ ದ್ವಿವೇದಿ ಅವರಿಗೆ ಸಿಕ್ಕಿಬಿದ್ದಿದ್ದರು. ಆಗ ಶೈಲಜಾ ಮತ್ತು ಹಂದ ಇಬ್ಬರಿಗೂ ಅವರು ಎಚ್ಚರಿಕೆ ನೀಡಿದ್ದರು. ತನ್ನ ಮನೆ ಹಾಗೂ ಪತ್ನಿ ಹತ್ತಿರ ಬಾರದಂತೆ ಹಂದ ಅವರಿಗೆ ಸೂಚಿಸಿದ್ದರು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ವೈರಲ್ ವಿಡಿಯೋ: ಮೈಕೊರೆವ ಗಡಿಯ ಚಳಿಯಲ್ಲಿ ಸೈನಿಕರ ಯೋಗ
ಪ್ರಸ್ತುತ ನಾಗಾಲ್ಯಾಂಡ್ನ ದಿಮಾಪುರ್ ಎಂಬಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಮೇಜರ್ ಹಂದ ಅವರನ್ನು ಭಾನುವಾರ ಉತ್ತರ ಪ್ರದೇಶದ ಮೀರಟ್ನಲ್ಲಿ ಬಂಧಿಸಲಾಗಿತ್ತು.
ವೈದ್ಯಕೀಯ ಚಿಕಿತ್ಸೆಗಾಗಿ ಶೈಲಜಾ ಅವರು ಹೊರಗೆ ಹೋಗಿದ್ದಾಗ ಕೊಲೆಯಾಗಿದ್ದರು. ಸೇನಾ ನೆಲೆಯ ಆಸ್ಪತ್ರೆ ಮುಂಭಾಗದ ಆಸ್ಪತ್ರೆಯ ದೃಶ್ಯಾವಳಿಗಳು ಅವರು ಕಾರ್ ಒಂದರ ಒಳಗೆ ಹೋಗಿ ಕುಳಿತಿದ್ದನ್ನು ಸೆರೆಹಿಡಿದಿದ್ದವು.
ಅರ್ಧ ಗಂಟೆಯ ಬಳಿಕ ಅವರ ಮೃತದೇಹ ಪತ್ತೆಯಾಗಿತ್ತು. ಅವರ ದೇಹದ ಮೇಲೆ ಕಾರು ಹರಿಸಲಾಗಿತ್ತು. ಆದರೆ, ಅದಕ್ಕೂ ಮೊದಲು ಅವರ ಕತ್ತನ್ನು ಸೀಳಲಾಗಿತ್ತು. ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾದ ಕಾರ್ ನಲ್ಲಿ ಒಬ್ಬರೇ ವ್ಯಕ್ತಿ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ದೆಹಲಿಗೆ ಬಂದಿದ್ದ ಮೇಜರ್ ಹಂದ, ತಮ್ಮನ್ನ ಭೇಟಿಯಾಗುವಂತೆ ಶೈಲಜಾ ಅವರಿಗೆ ಕೇಳಿದ್ದರು. ಕಾರ್ನಲ್ಲಿ ಪ್ರಯಾಣಿಸುವ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದೆ.
ತಮ್ಮನ್ನು ಮದುವೆಯಾಗುವಂತೆ ಶೈಲಜಾ ಅವರಿಗೆ ಹಂದ ಅವರು ಒತ್ತಾಯ ಮಾಡಿದ್ದರು. ಆದರೆ, ಅದಕ್ಕೆ ಶೈಲಜಾ ನಿರಾಕರಿಸಿದ್ದರು. ಇದರಿಂದ ಕೋಪಗೊಂಡ ಹಂದ, ಶೈಲಜಾ ಅವರ ಕತ್ತನ್ನು ಚಾಕುವಿನಿಂದ ಸೀಳಿದರು. ಬಳಿಕ ಕಾರಿನಿಂದ ಅವರನ್ನು ಹೊರಕ್ಕೆ ತಳ್ಳಿ, ಅದು ಅಪಘಾತದಂತೆ ಕಾಣಿಸುವ ರೀತಿ ಅವರ ದೇಹದ ಮೇಲೆ ಕಾರು ಹರಿಸಿದ್ದರು.
ಕಾರ್ನಲ್ಲಿ ರಕ್ತದ ಕಲೆಗಳು ಮಾತ್ರವಲ್ಲದೆ ಚಾಕು ಸಹ ಪತ್ತೆಯಾಗಿತ್ತು. ಸ್ವಿಸ್ ಚಾಕುವಿನಲ್ಲಿ ತುಂಬಾ ಹಂದ ಅವರ ಕೈಬೆರಳಚ್ಚು ಮೂಡಿತ್ತು. ಅವರು ಕಾರನ್ನು ಟವೆಕ್ನಿಂದ ಸ್ವಚ್ಛಗೊಳಿಸಲು ಪ್ರಯತ್ನಿಸಿದ್ದರು. ಆದರೆ, ಅದರಲ್ಲಿ ರಕ್ತದ ಕಲೆಗಳು ಉಳಿದುಕೊಂಡಿದ್ದವು. ಬಹುಶಃ ಅವರು ಇದ್ದಕ್ಕಿದ್ದಂತೆ ಶೈಲಜಾ ಅವರ ಕತ್ತನ್ನು ಕೊಯ್ದಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಬಳಿಕ ಮೇಜರ್ ಹಂದ ನಾಪತ್ತೆಯಾಗಿದ್ದರು. ಅವರು ಕುಟುಂಬದವರು ಸೇರಿದಂತೆ ಯಾರೊಂದಿಗೂ ಸಂಪರ್ಕದಲ್ಲಿ ಇರಲಿಲ್ಲ. ಮೈಗ್ರೇನ್ ಕಾರಣದಿಂದ ಅವರು ಸ್ವತಃ ಆಸ್ಪತ್ರೆಗೂ ದಾಖಲಾಗಿದ್ದರು. ಈ ಪ್ರಕರಣದ ಮುಂದಿನ ವಿಚಾರಣೆ ಪ್ರಗತಿಯಲ್ಲಿದೆ ಎಂದು ಅವರು ವಿವರಿಸಿದ್ದಾರೆ.
35 ವರ್ಷದ ಶೈಲಜಾ ಅವರು ಚಿಕಿತ್ಸೆಗೆಂದು ಸೇನೆಯ ವಾಹನದಲ್ಲಿ ಮನೆಯಿಂದ ಹೋಗಿದ್ದರು. ಅವರನ್ನು ಮರಳಿ ಕರೆತರಲು ಅವರ ಕಾರ್ ಚಾಲಕ ಕರೆ ಮಾಡಿದಾಗ ಅವರ ಸಂಪರ್ಕ ಸಿಕ್ಕಿರಲಿಲ್ಲ. ಶೈಲಜಾ ಅವರು ಚಿಕಿತ್ಸೆಗೆ ಬಂದಿಲ್ಲ ಎಂಬುದು ಬಳಿಕ ಗೊತ್ತಾಗಿತ್ತು.
ಈ ಬಗ್ಗೆ ಚಾಲಕ ಮೇಜರ್ ದ್ವಿವೇದಿ ಅವರಿಗೆ ಮಾಹಿತಿ ನೀಡಿದ್ದ. ಮಧ್ಯಾಹ್ನ 1.28ರ ಸುಮಾರಿಗೆ ಬ್ರಾರ್ ಸ್ಕ್ವೇರ್ನಲ್ಲಿ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿತ್ತು.
ಆದರೆ ದೇಹದ ಮೇಲೆ ಕಾರ್ ಹರಿಸಿದ್ದರಿಂದ ಅದರ ಗುರುತು ಪತ್ತೆಯಾಗಿರಲಿಲ್ಲ.
ಸಂಜೆ 4.30ರ ವೇಳೆಗೆ ತಮ್ಮ ಪತ್ನಿ ನಾಪತ್ತೆಯಾಗಿದ್ದಾರೆ ಎಂದು ದ್ವಿವೇದಿ ಅವರು ನರೈನಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆ ಬಳಿಕ ಬ್ರಾರ್ ಸ್ಕ್ವೇರ್ನಲ್ಲಿ ದೊರೆತಿರುವುದು ಶೈಲಜಾ ಅವರ ಮೃತದೇಹ ಎನ್ನುವುದು ಗೊತ್ತಾಗಿತ್ತು.
ಪತ್ನಿ ಮತ್ತು ಹಂದ ಅವರ ಒಡನಾಟದ ಬಗ್ಗೆ ಮಾಹಿತಿ ಹೊಂದಿದ್ದ ದ್ವಿವೇದಿ ಅವರು, ಈ ಸಾವಿನ ಹಿಂದೆ ಹಂದ ಅವರ ಕೈವಾಡ ಇರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಈ ಬಗ್ಗೆ ಚುರುಕಿನ ತನಿಖೆ ಆರಂಭಿಸಿದ ಪೊಲೀಸರಿಗೆ ಹಂದ ಅವರೂ ಸಹ ನಾಪತ್ತೆಯಾಗಿರುವುದು ತಿಳಿದುಬಂದಿತ್ತು. ತೀವ್ರ ಹುಡುಕಾಟದ ಬಳಿಕ ಹಂದ ಅವರು ಮೀರತ್ನಲ್ಲಿ ಸಿಕ್ಕಿಬಿದ್ದಿದ್ದರು.