ಆದೇಶ ಬಂದರೆ ಪಾಕ್ ಆಕ್ರಮಿತ ಕಾಶ್ಮೀರ ವಶಪಡಿಸಿಕೊಳ್ಳಲು ಸಿದ್ಧ: ಜನರಲ್ ನರವಾಣೆ
ನವದೆಹಲಿ, ಜನವರಿ 11: ಸರ್ಕಾರದಿಂದ ಆದೇಶ ಬಂದರೆ ಪಾಕ್ ಆಕ್ರಮಿತ ಕಾಶ್ಮೀರ ವನ್ನು ವಶಪಡಿಸಿಕೊಳ್ಳಲು ಸೇನೆ ಸಿದ್ಧವಾಗಿದೆ ಎಂದು ಹೊಸ ಸೇನಾ ಜನರಲ್ ಮುಕುಂದ್ ನರವಾಣೆ ಹೇಳಿದ್ದಾರೆ.
ಮೊದಲ ಸುದ್ದಿಗೋಷ್ಠಿ ಉದ್ಧೇಶಿಸಿ ಮಾತನಾಡಿದ ಸೇನಾ ಜನರಲ್ ಮುಕುಂದ್ ನರವಾಣೆ, 'ಸಂಸತ್ತು ಒಪ್ಪಿ ಆ ಭೂಭಾಗ (ಪಾಕ್ ಆಕ್ರಮಿತ ಕಾಶ್ಮೀರ) ನಮ್ಮ (ಭಾರತ)ದ ಭಾಗ ಆಗಬೇಕು ಎಂದು ಬಯಸಿದರೆ ವಶಪಡಿಸಿಕೊಳ್ಳಲು ಸೇನೆ ಸಿದ್ಧವಿದೆ' ಎಂದಿದ್ದಾರೆ.
ಆರ್ಟಿಕಲ್ 370 ಬಗ್ಗೆ ಚರ್ಚೆ ನಡೆಯುತ್ತಿದ್ದ ವೇಳೆ ಸಂಸತ್ತಿನಲ್ಲಿ ಮಾತನಾಡಿದ್ದ ಗೃಹ ಸಚಿವ ಅಮಿತ್ ಶಾ, ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಅಕ್ಸಾಯ್ ಚೀನಾ ಜಮ್ಮು ಕಾಶ್ಮೀರದ ಭಾಗ ಎಂದಿದ್ದರು. ಅಷ್ಟೆ ಭದ್ರತಾ ಸಚಿವ ರಾಜನಾಥ್ ಸಿಂಗ್ ಸಹ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, 'ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಿದರೆ ಅದು ಕೇವಲ ಪಿಓಕೆ ಬಗ್ಗೆ ಮಾತ್ರ' ಎಂದಿದ್ದರು.
ಸೇನಾ ಜನರಲ್ ಆಗಿದ್ದ ಬಿಪಿನ್ ರಾವತ್ ಅವರ ಸ್ಥಾನಕ್ಕೆ ಮುಕುಂದ್ ನರವಾಣೆ ನೇಮಕವಾಗಿದ್ದಾರೆ. ಶ್ರೀನಗರ ಮತ್ತು ಲೇಹ್ ಭಾಗಗಳಲ್ಲಿ 30 ಸೈನಿಕ ಪಡೆಗಳು ಯುದ್ಧ ತರಬೇತಿಯಲ್ಲಿ ನಿರತವಾಗಿವೆ ಎಂದೂ ಸಹ ನರವಾಣೆ ಹೇಳಿದ್ದಾರೆ.
ಈ ಹಿಂದಿನ ಜನರಲ್ ಬಿಪಿನ್ ರಾವತ್ ಸಹ ಪಿಓಕೆ ಬಗ್ಗೆ ಮಾತನಾಡುತ್ತಾ, 'ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಆಡಳಿತ ಪಾಕಿಸ್ತಾನದ ಕೈಯಲ್ಲಿಲ್ಲ ಬದಲಿಗೆ ಭಯೋತ್ಪಾದಕರ ಕೈಯಲ್ಲಿದೆ. ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಗಿಲ್ಬಿಟ್ ಬಲ್ತಿಸ್ತಾನವು ಜಮ್ಮು ಕಾಶ್ಮೀರದ ಭಾಗವೇ ಎಂದು ಹೇಳಿದ್ದರು.