ಪಕೋಡಕ್ಕೆ ನಿರ್ಬಂಧ, ಮುಖಸ್ತುತಿ ಮಾಡುವವರಿಗಿಲ್ಲ ಬಡ್ತಿ: ಸೇನೆ ಹೊಸ ನಿಯಮ
ನವದೆಹಲಿ, ಜುಲೈ 12: ಸೇನೆಯ ಆಡಳಿತ, ವಾತಾವರಣವನ್ನು ಮತ್ತಷ್ಟು ಕಟ್ಟುನಿಟ್ಟಾಗಿಸುವ ಉದ್ದೇಶದಿಂದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ 23 ಸೂಚನೆಗಳ ಪಟ್ಟಿಯನ್ನು ಹೊರಡಿಸಿದ್ದು, ಭಾರಿ ಬದಲಾವಣೆಗೆ ಮುಂದಾಗಿದ್ದಾರೆ.
ಇದರಲ್ಲಿ ಸೇನೆಯ ಕ್ವಾರ್ಟರ್ಸ್ಗಳಲ್ಲಿ ಲಭ್ಯವಾಗುವ ಮದ್ಯ ಮತ್ತು ಪ್ರಚಾರಕ್ಕಾಗಿ ಸಾಮಾಜಿಕ ಜಾಲತಾಣಗಳ ಬಳಕೆಯ ವಿಚಾರವೂ ಸೇರಿದೆ.
ಉಗ್ರರೊಂದಿಗೆ ಕಾದಾಟ: ಸೇನಾ ಕಮಾಂಡರ್ ಸಾವು, ಸೈನಿಕ ಗಾಯಾಳು
ಇಲಾಖೆಯ ಕ್ಯಾಂಟೀನ್ ಮಳಿಗೆಯಲ್ಲಿ ನೀಡುವ ಮದ್ಯದ ರೇಷನ್ ಕುರಿತು ಸೇವೆಯಲ್ಲಿರುವ ಅಧಿಕಾರಿಗಳು ಮತ್ತು ಹಿರಿಯರು ಕಳವಳ ವ್ಯಕ್ತಪಡಿಸಿದ್ದರು.
ಲಿಕ್ಕರ್ ಸ್ಟೋರ್ಗಳಲ್ಲಿನ ಮದ್ಯದ ರೇಷನ್ನಲ್ಲಿ ಕಡಿತ ಸೇರಿದಂತೆ ಹಲವು ಬದಲಾವಣೆಗಳನ್ನು ತರಲು ರಾವತ್ ಸೂಚಿಸಿದ್ದಾರೆ.
ಸೇನಾ ಸಮಾರಂಭದ ಕಾರ್ಯಕ್ರಮಗಳಲ್ಲಿ ಪಕೋಡ, ಪೂರಿ ಮತ್ತು ಸಿಹಿತಿಂಡಿಗಳ ಬದಲು ಆರೋಗ್ಯಕರ ತಿನಿಸುಗಳನ್ನು ಮಾತ್ರ ಪೂರೈಸುವಂತೆಯೂ ನಿರ್ದೇಶಿಸಲಾಗಿದೆ.
ಸೇನೆಗೆ ಸಂಬಂಧಿಸಿದ ಗುತ್ತಿಗೆಗಳಲ್ಲಿ ನಡೆಯುವ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವುದು ತಮ್ಮ ಆದ್ಯತೆ ಎಂದು ಬಿಪಿನ್ ರಾವತ್ ಹೇಳಿದ್ದಾರೆ.
ಬಿಎಸ್ಎಫ್ನಲ್ಲಿ 207 ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಆಹ್ವಾನ
ಅವ್ಯವಹಾರ ನಡೆಸಿದ ಶಂಕೆ ವ್ಯಕ್ತವಾದಲ್ಲಿ ಅವರ ಯಾವುದೇ ಸ್ಥಾನಮಾನ ಅಥವಾ ಶ್ರೇಣಿ ಲೆಕ್ಕಿಸದೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಕೆಲಸ ತಪ್ಪಿಸಿಕೊಂಡು, ಕಾಲಹರಣ ಮಾಡುತ್ತಾ ಹಿರಿಯ ಅಧಿಕಾರಿಗಳ ಮುಖಸ್ತುತಿ ಮಾಡಿಕೊಂಡು ಬಡ್ತಿ ಪಡೆಯಲು ಬಯಸುವ ಅಧಿಕಾರಿಗಳಿಗೂ ಅವರು ತೀಕ್ಷ್ಣ ಎಚ್ಚರಿಕೆ ನೀಡಿದ್ದಾರೆ.
ಅಂತಹ ಅಧಿಕಾರಿಗಳನ್ನು ಗುರುತಿಸಬೇಕು ಮತ್ತು ತಮಗೆ ಕೊಟ್ಟ ಕೆಲಸವನ್ನು ಸಮರ್ಪಕವಾಗಿ ನಿಭಾಯಿಸಿದವರಿಗೆ ಬಡ್ತಿ ಸಿಗಬೇಕು ಎಂದು ರಾವತ್ ಹೇಳಿದ್ದಾರೆ.
ಸೇನೆಯ ಕ್ಯಾಂಟೀನ್ ಮಳಿಗೆಯಲ್ಲಿ ಮಾರಾಟ ಮಾಡಲಾಗುವ ಸಬ್ಸಿಡಿ ದರದ ಮದ್ಯ ಹಾಗೂ ಪದಾರ್ಥಗಳನ್ನು ಲಾಭಕ್ಕೆ ಬಳಸಿಕೊಳ್ಳುವಂತೆ ಆಗಬಾರದು ಎಂದಿದ್ದಾರೆ.