ನ.24ರ ಕೇಂದ್ರ ಸಂಪುಟ ಸಭೆಯಲ್ಲಿ ಕೃಷಿ ಕಾನೂನು ರದ್ದತಿ ಅನುಮೋದನೆ; ಚಳಿಗಾಲದ ಅಧಿವೇಶನದಲ್ಲಿ ಮಂಡನೆ
ನವದೆಹಲಿ, ನವೆಂಬರ್ 24: ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಭರವಸೆಯನ್ನು ಪ್ರಧಾನಿ ನರೇಂದ್ರ ಮೋದಿ ರೈತರಿಗಾಗಿ ಶೀಘ್ರವಾಗಿ ಈಡೇರಿಸಲು ಮುಂದಾಗಿದ್ದಾರೆ ಎಂಬುದರ ಸಂಕೇತವಾಗಿ, ನವೆಂಬರ್ 24 (ಬುಧವಾರ) ರಂದು ನಡೆಯುವ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕೃಷಿ ಕಾನೂನುಗಳ ರದ್ದತಿ ಮಸೂದೆ, 2021ಕ್ಕೆ ಅನುಮೋದನೆ ನೀಡುವ ಸಾಧ್ಯತೆ ಇದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ನವದೆಹಲಿಯ ಪ್ರಧಾನಿಯವರ ಲೋಕ ಕಲ್ಯಾಣ್ ಮಾರ್ಗ್ ನಿವಾಸದಲ್ಲಿ ಬುಧವಾರ ಸಭೆ ಸೇರಲಿದೆ. ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂದಕ್ಕೆ ತರಲು ಕೇವಲ ಒಂದು ಸಮಗ್ರ "ರದ್ದತಿ ಮಸೂದೆ' ತರಬಹುದು ಎಂದು ಇಂಡಿಯಾ ಟುಡೇಗೆ ವರದಿ ಮಾಡಿದೆ.
ಪ್ರಧಾನಮಂತ್ರಿಗಳ ಕಚೇರಿ (ಪಿಎಂಒ) ಜೊತೆ ಸಮಾಲೋಚನೆ ನಡೆಸಿದ ನಂತರ ಕೇಂದ್ರ ಕೃಷಿ ಸಚಿವಾಲಯವು ಈ ರದ್ದತಿ ಮಸೂದೆಯನ್ನು ಅಂತಿಮಗೊಳಿಸಿದೆ ಎಂದು ಹೇಳಲಾಗಿದೆ.
ಚಳಿಗಾಲದ ಸಂಸತ್ ಅಧಿವೇಶನದ ಸಂದರ್ಭದಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಮೊದಲು ಲೋಕಸಭೆಯಲ್ಲಿ ರದ್ದತಿ ಮಸೂದೆಯನ್ನು ಮಂಡಿಸಬಹುದು ಎಂದು ಮೂಲಗಳು ತಿಳಿಸಿವೆ.
ಕೃಷಿ ಕಾನೂನುಗಳ ರದ್ದತಿ ಮಸೂದೆ-2021 ಕಳೆದ ವರ್ಷ ಕಾನೂನಾಗಿ ಅಂಗೀಕರಿಸಿದ ಮೂರು ಮಸೂದೆಗಳನ್ನು ಹಿಂದಕ್ಕೆ ತರುವ ಗುರಿಯನ್ನು ಹೊಂದಿದೆ. ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಪ್ರವರ್ತನೆ ಮತ್ತು ಅನುಕೂಲ) ಕಾಯಿದೆ- 2020, ರೈತರ (ಸಬಲೀಕರಣ ಮತ್ತು ರಕ್ಷಣೆ) ಒಪ್ಪಂದದ ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯಿದೆ- 2020 ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯಿದೆ- 2020 ಇವು ಕೃಷಿ ಕಾಯ್ದೆಗಳಾಗಿವೆ.
ಕಳೆದ ಶುಕ್ರವಾರ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಅಚ್ಚರಿಯ ಭಾಷಣದಲ್ಲಿ, ಪ್ರಧಾನಿ ನರೇಂದ್ರ ಮೋದಿ ಮೊದಲು ದೇಶದ ಕ್ಷಮೆಯಾಚಿಸಿದರು. ನಂತರ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದರು. ಕೃಷಿ ಕಾನೂನು ವಿರುದ್ಧ ಮುಖ್ಯವಾಗಿ ದೆಹಲಿಯ ಗಡಿಗಳು, ಪಂಜಾಬ್, ಪಶ್ಚಿಮ ಉತ್ತರ ಪ್ರದೇಶ ಮತ್ತು ಹರಿಯಾಣದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಪ್ರಧಾನಿಯವರು, "ಇಂದು ದೇಶವಾಸಿಗಳ ಕ್ಷಮೆಯಾಚಿಸುವಾಗ, ನಾನು ಪ್ರಾಮಾಣಿಕ ಮತ್ತು ಶುದ್ಧ ಹೃದಯದಿಂದ ಹೇಳಲು ಬಯಸುತ್ತೇನೆ. ಬಹುಶಃ ಕೆಲವು ರೈತರಿಗೆ ದೀಪದ ಬೆಳಕಿನಂತೆ ಸತ್ಯವನ್ನು ವಿವರಿಸುವ ನಮ್ಮ ಪ್ರಯತ್ನಗಳಲ್ಲಿ ಏನಾದರೂ ಕೊರತೆ ಇದ್ದಿರಬಹುದು, ಇದರಿಂದಾಗಿ ನಮಗೆ ಸಾಧ್ಯವಾಗಲಿಲ್ಲ ಎಂದು ಹೇಳಿ ಕೃಷಿ ಕಾನೂನು ರದ್ದುಗೊಳಿಸುವ ತೀರ್ಮಾನ ಕೈಗೊಂಡರು,".
Recommended Video