ಅತ್ಯಾಚಾರಿಗಳನ್ನು ಗಲ್ಲಿಗೇರಿಸಲು ನಾನು ಸಿದ್ಧ: ರಾಷ್ಟ್ರಪತಿಗೆ ಹೀಗೊಂದು ಪತ್ರ!
ದೆಹಲಿ, ಡಿಸೆಂಬರ್.04: ದೆಹಲಿ ನಿರ್ಭಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಅಪರಾಧಿಗಳಿಗೆ ಸುಪ್ರೀಂಕೋರ್ಟ್ ಆದೇಶಿಸಿದರೂ ಮರಣದಂಡನೆ ವಿಧಿಸಲು ಸಾಧ್ಯವಿಲ್ಲ. ಏಕೆಂದರೆ ಅಪರಾಧಿಗಳನ್ನು ಇಟ್ಟಿರುವ ದೆಹಲಿ ತಿಹಾರ್ ಜೈಲಿನಲ್ಲಿ ಈಗ ಹ್ಯಾಂಗ್ ಮ್ಯಾನ್ ಗಳೇ ಇಲ್ಲ.
ತಿಹಾರ್ ಜೈಲು ಅಧಿಕಾರಿಗಳಿಗೆ ಈ ಬಗ್ಗೆ ಆತಂಕ ಸೃಷ್ಟಿಯಾಗಿದೆ. ಈಗಾಗಲೇ ಅಪರಾಧಿ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ದೆಹಲಿಯ ಲೆಫ್ಟಿನೆಂಟ್ ಗೌರ್ವನರ್ ಹಾಗೂ ಕೇಂದ್ರ ಗೃಹ ಸಚಿವಾಲಯ ತಿರಸ್ಕರಿಸಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಬಳಿ ಕ್ಷಮಾದಾನ ಅರ್ಜಿಯನ್ನು ರವಾನಿಸಲಾಗಿದೆ.
ನಿರ್ಭಯಾ ಅತ್ಯಾಚಾರಿಗೆ ತಿಹಾರ್ ಜೈಲಿನಲ್ಲಿ ಗಲ್ಲುಶಿಕ್ಷೆ ಅಸಾಧ್ಯ!
ರಾಷ್ಟ್ರಪತಿಗಳು ಯಾವುದೇ ಕ್ಷಣದಲ್ಲೂ ಆರೋಪಿ ವಿನಯ್ ಶರ್ಮಾ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಬಹುದು. ಮರಣದಂಡನೆ ಶಿಕ್ಷೆಯನ್ನು ಜಾರಿಗೊಳಿಸುವಂತೆ ಸುಪ್ರೀಂಕೋರ್ಟ್ ಕೂಡಾ ಯಾವುದೇ ಕ್ಷಣದಲ್ಲೂ ಸೂಚನೆ ನೀಡಬಹುದು. ಹಾಗೊಂದು ವೇಳೆ ಸೂಚಿಸಿದರೂ ತಿಹಾರ್ ಜೈಲು ಅಧಿಕಾರಿಗಳಿಂದ ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಲು ಆಗಲಾರದ ಪರಿಸ್ಥಿತಿ ಇದೆ. ಹೀಗಾಗಿ ತನ್ನನ್ನು ತಾತ್ಕಾಲಿಕವಾಗಿ ಹ್ಯಾಂಗ್ ಮ್ಯಾನ್ ಹುದ್ದೆಗೆ ನೇಮಿಸುವಂತೆ ವ್ಯಕ್ತಿಯೊಬ್ಬರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿದ್ದಾರೆ.
ನಾನು ಹ್ಯಾಂಗ್ ಮ್ಯಾನ್ ಆಗಲು ಸಿದ್ಧನೆಂದು ಪತ್ರ
ಹಿಮಾಚಲ ಪ್ರದೇಶ ಶಿಮ್ಲಾ ಮೂಲದ ರವಿಕುಮಾರ್ ಎಂಬುವವರು ಈ ಬಗ್ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿದ್ದಾರೆ. ಸದ್ಯದ ಮಟ್ಟಿಗೆ ದೆಹಲಿ ತಿಹಾರ್ ಜೈಲಿನಲ್ಲಿ ಹ್ಯಾಂಗ್ ಮ್ಯಾನ್ ಗಳೇ ಇಲ್ಲ. ಇದರಿಂದ ಅಪರಾಧಿಗಳಿಗೆ ಕೋರ್ಟ್ ಸೂಚಿಸಿದರೂ ಗಲ್ಲುಶಿಕ್ಷೆ ವಿಧಿಸಲು ಸಾಧ್ಯವಿಲ್ಲ. ಈ ಕೊರತೆಯನ್ನು ನೀಗಿಸಲು ನಾನು ಸಿದ್ಧನಿದ್ದೇನೆ. ನನ್ನನ್ನು ತಿಹಾರ್ ಜೈಲಿನ ತಾತ್ಕಾಲಿಕ ಹ್ಯಾಂಗ್ ಮ್ಯಾನ್ ಆಗಿ ನೇಮಿಸುವಂತೆ ರವಿಕುಮಾರ್, ರಾಷ್ಟ್ರಪತಿಯವರಿಗೆ ಪತ್ರ ಬರೆದಿದ್ದಾರೆ.
ಅಪರಾಧಿಗಳಿಗೆ ಆದಷ್ಟು ಬೇಗ ಶಿಕ್ಷೆಯಾದರೆ ಸಾಕು!
ದೆಹಲಿ ನಿರ್ಭಯಾ ಅತ್ಯಾಚಾರ ಪ್ರಕರಣ ನಡೆದ ಏಳು ವರ್ಷಗಳೇ ಗತಿಸಿ ಹೋಗಿದೆ. ಇಷ್ಟು ದಿನ ಕಳೆದರೂ ಅಪರಾಧಿಗಳಿಗೆ ಇಂದಿಗೂ ಶಿಕ್ಷೆ ಆಗಿಲ್ಲ. ಸುಪ್ರೀಂಕೋರ್ಟ್ ಮರಣದಂಡನೆ ವಿಧಿಸಿದರೂ ಗಲ್ಲಿಗೇರಿಸಲು ಸಾಧ್ಯವಾಗಿಲ್ಲ. ಆದಷ್ಟು ಬೇಗ ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆಯಾಗಬೇಕು. ನೊಂದ ಹೆಣ್ಣುಮಗಳ ಆತ್ಮಕ್ಕೆ ಶಾಂತಿ ಸಿಗಬೇಕು ಎಂದು ರವಿಕುಮಾರ್ ತಮ್ಮ ಪತ್ರದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
ತಿಹಾರ್ ಜೈಲು ಅಧಿಕಾರಿಗಳೇ ಬಿಚ್ಚಿಟ್ಟಿದ್ದರು ಕಟುಸತ್ಯ
ಏಷ್ಯಾದ ಅತಿದೊಡ್ಡ ಕೇಂದ್ರ ಕಾರಾಗೃಹವಾಗಿರುವ ತಿಹಾರ್ ಜೈಲಿನಲ್ಲಿ ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಲು ಆಗುವುದಿಲ್ಲ. ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಅಪರಾಧಿಯನ್ನು ಗಲ್ಲಿಗೆ ಏರಿಸಲು ಅಗತ್ಯವಾಗಿ ಬೇಕಾಗಿರುವ ಹ್ಯಾಂಗ್ ಮ್ಯಾನ್ ಗಳೇ ಜೈಲಿನಲ್ಲಿ ಇಲ್ಲ. ಹ್ಯಾಂಗ್ ಮ್ಯಾನ್ ಗಳಿಲ್ಲದೇ ಗಲ್ಲುಶಿಕ್ಷೆ ವಿಧಿಸುವುದು ಅಸಾಧ್ಯೆ ಎಂದು ತಿಹಾರ್ ಜೈಲಿನ ಹಿರಿಯ ಅಧಿಕಾರಿಗಳೇ ಹೇಳಿದ್ದರು.
ರಾಮನಾಥ್ ಕೋವಿಂದ್ ಆದೇಶದ ಮೇಲೆ ಕಣ್ಣು
ಇನ್ನು, ಸುಪ್ರೀಂಕೋರ್ಟ್ ವಿಧಿಸಿರುವ ಮರಣದಂಡನೆ ಆದೇಶದಿಂದ ಮುಕ್ತಿ ನೀಡಬೇಕು. ತನಗೆ ಕ್ಷಮದಾನ ನೀಡಬೇಕೆಂದು ಆರೋಪಿ ವಿನಯ್ ಶರ್ಮಾ ಅರ್ಜಿ ಸಲ್ಲಿಸಿದ್ದನು. ದೆಹಲಿಯ ಲೆಫ್ಟಿನೆಂಟ್ ಗೌರ್ವನರ್ ಹಾಗೂ ಕೇಂದ್ರ ಗೃಹ ಸಚಿವಾಲಯ ಈ ಅರ್ಜಿಯನ್ನು ತಿರಸ್ಕರಿಸಿದ್ದು, ರಾಷ್ಟ್ರಪತಿಗಳಿಗೆ ಕಳುಹಿಸಿಕೊಡಲಾಗಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕ್ಷಮಾದಾನ ಅರ್ಜಿಯ ಕುರಿತು ಯಾವ ನಿರ್ಧಾರ ತೆಗದೆುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಲಾಗುತ್ತಿದೆ. ಒಂದು ವೇಳೆ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿಗಳು ತಿರಸ್ಕರಿಸಿದರೆ ಅಪರಾಧಿ ವಿನಯ್ ಶರ್ಮಾಗೆ ಗಲ್ಲುಶಿಕ್ಷೆ ವಿಧಿಸಬೇಕಾಗುತ್ತದೆ.
ದೆಹಲಿ ನಿರ್ಭಯಾ ಅತ್ಯಾಚಾರ ಪ್ರಕರಣದ ಹಿನ್ನೆಲೆ
2012ರ ಡಿಸೆಂಬರ್ ನಲ್ಲಿ ದೆಹಲಿಯ ವಸಂತ್ ವಿಹಾರ್ ಬಳಿ ಸಂಚರಿಸುತ್ತಿದ್ದ ಬಸ್ ನಲ್ಲೇ ನಿರ್ಭಯಾ ಮೇಲೆ ಅತ್ಯಾಚಾರ ನಡೆಸಲಾಗಿತ್ತು. ಈ ಸಂಬಂಧ ವಿನಯ್ ಶರ್ಮಾ, ಮುಖೇಶ್, ಪವನ್ ಅಕ್ಷಯ್, ರಾಮ್ ಸಿಂಗ್ ಹಾಗೂ ಒಬ್ಬ ಅಪ್ರಾಪ್ತ ಆರೋಪಿ ಸೇರಿ ಆರು ಮಂದಿಯನ್ನು ಬಂಧಿಸಲಾಗಿತ್ತು.