ಸಿಖ್ಖರ ಹತ್ಯಾಕಾಂಡದ ಅಪರಾಧಿ: ಯಾರು ಈ ಸಜ್ಜನ್ ಕುಮಾರ್?
ನವದೆಹಲಿ, ಡಿಸೆಂಬರ್ 17: ಇಡೀ ದೇಶಕ್ಕೆ ಸಜ್ಜನ್ ಕುಮಾರ್ ಎಂಬ ಹೆಸರು ಮತ್ತೆ ಪರಿಚಿತವಾಗುತ್ತಿದೆ. 34 ವರ್ಷಗಳ ಬಳಿಕ ತೀರ್ಪು ಹೊರಬಿದ್ದ ನಂತರ ಕಾಂಗ್ರೆಸ್ ಮುಖಂಡ ಮತ್ತೆ ಚಾಲ್ತಿಯಲ್ಲಿದ್ದಾರೆ.
ರಾಜಕಾರಣಕ್ಕೆ ಬಂದ ಸಂದರ್ಭದಿಂದಲೂ ಸಜ್ಜನ್ ಕುಮಾರ್ ಕಾಂಗ್ರೆಸ್ ಪಾಳೆಯದಲ್ಲಿ ಪರಿಚಿತ ಹೆಸರು. ಆದರೆ, ಈ ವ್ಯಕ್ತಿಯ ಕುಖ್ಯಾತಿ ಒಮ್ಮೆಲೆ ಏರಿದ್ದು 1984ರಲ್ಲಿ. ಇಂದಿರಾ ಗಾಂಧಿ ಹತ್ಯೆಯ ಬಳಿಕ ನಡೆದ ಸಿಖ್ಖರ ಹತ್ಯಾಕಾಂಡದಲ್ಲಿ ಮುಂಚೂಣಿಯಲ್ಲಿದ್ದವರೇ ಸಜ್ಜನ್ ಕುಮಾರ್.
1984ರ ಸಿಖ್ ದಂಗೆ:ಕಾಂಗ್ರೆಸ್ಸಿನ ಸಜ್ಜನ್ ಕುಮಾರ್ ಗೆ ಜೀವಾವಧಿ ಶಿಕ್ಷೆ
ಕಾಂಗ್ರೆಸ್ನ ಹಿರಿಯ ರಾಜಕಾರಣಿಯಾದ ಸಜ್ಜನ್ ಕುಮಾರ್ ಅವರಿಗೀಗ 73 ವರ್ಷ. ಸಿಖ್ ನರಮೇಧದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಸಜ್ಜನ್ ಕುಮಾರ್, ಡಿಸೆಂಬರ್ 31ರ ಒಳಗೆ ಶರಣಾಗಬೇಕಿದೆ.
ಸಿಖ್ ದಂಗೆಯ ಕುರಿತು ತಿಳಿದವರಿಗೆ ಸಜ್ಜನ್ ಕುಮಾರ್ ಎಂಬ ವಿರುದ್ಧಾರ್ಥಕ ಹೆಸರಿನ ವ್ಯಕ್ತಿಯ ಬಗ್ಗೆಯೂ ಗೊತ್ತಿರುತ್ತದೆ. ಅವರ ಬಗ್ಗೆ ತಿಳಿಯದ ಈಗಿನ ತಲೆಮಾರಿಗೆ ಸಜ್ಜನ್ ಕುಮಾರ್ ಎಂದರೆ ಯಾರು ಎಂಬ ಕುತೂಹಲವೂ ಮೂಡುತ್ತದೆ...
ದೆಹಲಿಯ ಹೊರ ವಲಯದಲ್ಲಿ ಹುಟ್ಟಿ ಬೆಳೆದ ಸಜ್ಜನ್ ಕುಮಾರ್, ನೆಹರೂ-ಇಂದಿರಾ ಗಾಂಧಿ ಕುಟುಂಬದ ನಿಷ್ಠಾವಂತ. ಕಾಂಗ್ರೆಸ್ನ ದೆಹಲಿ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದ ಅವರು ಜಾಟ್ ಸಮುದಾಯದ ಪ್ರಭಾವಿ ಮುಖಂಡರೂ ಹೌದು.
'ನಮ್ಮ ತಾಯಿಯ ಹತ್ಯೆ ಮಾಡಲಾಗಿದೆ. ಸರ್ದಾರರನ್ನು ಕೊಲ್ಲಿರಿ'!
ದೆಹಲಿ ಹೊರವಲಯ ಕ್ಷೇತ್ರದ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಾಗ ಅವರಿಗೆ 34ರ ವಯಸ್ಸು. ಶೇ 50ಕ್ಕೂ ಹೆಚ್ಚು ಮತಗಳನ್ನು ಅವರು ಪಡೆದುಕೊಂಡಿದ್ದರು.
ಈ ವೇಳೆ ಸ್ವಂತದ ಬೇಕರಿಯೊಂದನ್ನು ಇಟ್ಟುಕೊಂಡಿದ್ದ ಮುನಿಸಿಪಲ್ ಕಾರ್ಪೊರೇಟರ್ ಆಗಿದ್ದರು. 1977ರಲ್ಲಿ ದೆಹಲಿಯ ಕಾರ್ಪೊರೇಟರ್ ಸ್ಥಾನದಲ್ಲಿ ಗೆದ್ದ ಕೆಲವೇ ಕಾಂಗ್ರೆಸ್ಸಿಗರಲ್ಲಿ ಸಜ್ಜನ್ ಕುಮಾರ್ ಒಬ್ಬರು.
ದೆಹಲಿ ಹೊರವಲಯದ ಕ್ಷೇತ್ರದಿಂದ ಲೋಕಸಭೆಗೆ 1991 ಮತ್ತು 2004ರಲ್ಲಿ ಲೋಕಸಭೆಗೆ ಆಯ್ಕೆಯಾಗಿದ್ದರು. 2009ರ ಚುನಾವಣೆ ವೇಳೆ 1984ರ ಸಿಖ್ ದಂಗೆ ಕುರಿತಂತೆ ವ್ಯಾಪಕ ಪ್ರತಿಭಟನೆ ವ್ಯಕ್ತವಾಗಿದ್ದರಿಂದ ಸಜ್ಜನ್ ಕುಮಾರ್ ಮತ್ತು ಜಗದೀಶ್ ಟೈಟ್ಲರ್ ತಮ್ಮ ಸ್ಪರ್ಧೆಯಿಂದ ಹಿಂದಕ್ಕೆ ಸರಿದಿದ್ದರು ಎಂದು ಕಾಂಗ್ರೆಸ್ ಹೇಳಿತ್ತು.
1984ರ ಅಕ್ಟೋಬರ್ 31ರಂದು ಇಂದಿರಾ ಗಾಂಧಿ ಅವರ ಹತ್ಯೆಯ ಮರುದಿನವೇ ದೆಹಲಿಯಲ್ಲಿನ ಒಂದು ಸಿಖ್ ಕುಟುಂಬದ ಐವರು ಸದಸ್ಯರನ್ನು ಬರ್ಬರವಾಗಿ ಕೊಂದು ಹಾಕಲಾಯಿತು.
1984 ಸಿಖ್ ಹತ್ಯಾಕಾಂಡ : ಸೀಮೆಎಣ್ಣೆ ಸುರಿದು ಸರ್ದಾರ್ಜಿಗೆ ಬೆಂಕಿ ಹಚ್ಚಿದ್ದ ದುರುಳರು
ಭಾರತದಾದ್ಯಂತ 3 ಸಾವಿರಕ್ಕೂ ಅಧಿಕ ಸಿಖ್ಖರನ್ನು ಕೊಂದು ಹಾಕಲಾಯಿತು. ಅದರಲ್ಲಿ ಹೆಚ್ಚಿನವರು ದೆಹಲಿಯಲ್ಲಿ ಪ್ರಾಣ ಕಳೆದುಕೊಂಡರು.
ಈ ಹತ್ಯಾಕಾಂಡಗಳಲ್ಲಿ ಸಜ್ಜನ್ ಕುಮಾರ್ ಮುಂಚೂಣಿಯಲ್ಲಿದ್ದದ್ದನ್ನು ಅನೇಕರು ಕಣ್ಣಾರೆ ಕಂಡಿದ್ದರು. ಸಿಖ್ಖರನ್ನು ಕಂಡಲ್ಲಿ ಸಾಯಿಸುವಂತೆ ಗುಂಪುಗಳನ್ನು ಅವರೇ ಪ್ರೇರೇಪಿಸುತ್ತಿದ್ದರು ಎಂದು ಆರೋಪಿಸಲಾಗಿತ್ತು. ಸಜ್ಜನ್ ಕುಮಾರ್ ಸಿಖ್ ವಿರೋಧಿ ದಂಗೆಯನ್ನು ಸಂಘಟಿಸಿದ್ದರು. ಅವರ ಜೊತೆ ಇನ್ನೂ ಐವರು ಭಾಗವಹಿಸಿದ್ದರು ಎಂದು ಸಿಬಿಐ ಆರೋಪಿಸಿತ್ತು.
2013ರ ಆಗಸ್ಟ್ನಲ್ಲಿ ಈ ಪ್ರಕರಣದ ತೀರ್ಪು ನೀಡಿದ್ದ ಕರ್ಕರದೂಮಾ ಜಿಲ್ಲಾ ನ್ಯಾಯಾಲಯ ಸಜ್ಜನ್ ಕುಮಾರ್ ಅವರನ್ನು ಖುಲಾಸೆಗೊಳಿಸಿತ್ತು. ಇದನ್ನು ಸಿಬಿಐ ದೆಹಲಿ ಹೈಕೋರ್ಟ್ನಲ್ಲಿ ಪ್ರಶ್ನಿಸಿತ್ತು.