ಸಿಎಎ ವಿರೋಧಿ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಪೊರಕೆಯಲ್ಲಿ ಗುಡಿಸಿದ ಆಪ್
ನವೆದೆಹಲಿ, ಫೆಬ್ರವರಿ.11: ರಾಷ್ಟ್ರ ರಾಜಧಾನಿಯಲ್ಲಿ ಭಾರತೀಯ ಜನತಾ ಪಕ್ಷವನ್ನು ಆಮ್ ಆದ್ಮಿಗಳು ಪೊರಕೆಯಿಂದ ಗುಡಿಸಿ ಹಾಕಿದ್ದಾರೆ. ನವದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧ ಹೋರಾಟವೇ ಭಾರಿ ಬದಲಾವಣೆಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೆಹಲಿಯ ಶಾಹಿನ್ ಬಾಗ್ ಮತ್ತು ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಭಾರತೀಯ ಜನತಾ ಪಕ್ಷವು ಮುಗ್ಗರಿಸಿದೆ.
ನವದೆಹಲಿಯಲ್ಲಿ ಮಫ್ಲರ್ ಮ್ಯಾನ್ ಎದುರು ಮಂಕಾಗಿದ್ದೇಕೆ ಬಿಜೆಪಿ?
ಓಕ್ಲಾ, ಸೀಲಾಂಪುರ್, ಮಾಟಿಯಾ ಮಹಲ್ ಮತ್ತು ಮುಸ್ತಫಾಬಾದ್ ವಿಧಾನಸಭಾ ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಕ್ಷವು ಜಯಭೇರಿ ಬಾರಿಸಿದೆ. ಈ ಎಲ್ಲ ಕ್ಷೇತ್ರಗಳಲ್ಲೂ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧದ ಹೋರಾಟವೇ ಬಿಜೆಪಿ ಮುಖಭಂಗ ಅನುಭವಿಸಿದ್ದು, ಆಪ್ ಗೆಲುವಿಗೆ ಈ ಅಂಶಗಳೇ ಪ್ರಮುಖ ಕಾರಣ ಎನ್ನುವಂತಿದೆ.
ಓಕ್ಲಾ ಕ್ಷೇತ್ರದಲ್ಲಿ ಬಿಜೆಪಿ ಅಡ್ರೆಸ್ ಗೆ ಇಲ್ಲ!
ನವದೆಹಲಿಯ ದಕ್ಷಿಣ ಭಾಗದಲ್ಲಿರುವ ಶಾಹಿನ್ ಬಾಗ್ ನಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದ ಆಪ್ ಶಾಸಕ ಅಮಾನತ್ ಉಲ್ಲಾ ಖಾನ್ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಅಂತರಗಳಿಂದ ಗೆಲುವು ದಾಖಲಿಸಿದ್ದಾರೆ. ಶಾಹಿನ್ ಬಾಗ್ ಪ್ರದೇಶವು ಓಕ್ಲಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರಲಿದ್ದು, ಹಾಲಿ ಶಾಸಕರಾಗಿದ್ದಾಗಲೇ ಅಮಾನತ್ ಉಲ್ಲಾ ಖಾನ್, ಸಿಎಎ ವಿರೋಧಿ ಹೋರಾಟಕ್ಕೆ ಕೈ ಜೋಡಿಸಿದ್ದರು. ಇದರ ಫಲಿತಾಂಶವೇ 80 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಸೀಲಾಂಪುರದಲ್ಲೂ ನಡೆಯದ ಕೇಸರಿ ಖೇಲ್
ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧ ಉಗ್ರ ಹೋರಾಟಕ್ಕೆ ವೇದಿಕೆಯಾಗಿದ್ದ ಸೀಲಾಂಪುರ ಕ್ಷೇತ್ರದಲ್ಲೂ ಬಿಜೆಪಿ ಹೇಳ ಹೆಸರಿಲ್ಲದಂತೆ ಆಗಿದೆ. ಈ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಅಬ್ದುಲ್ ರೆಹಮಾನ್ 36,920 ಮತಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಇನ್ನು, ಪ್ರತಿಸ್ಪರ್ಧಿ ಬಿಜೆಪಿಯ ಕೌಶಾಲ್ ಕುಮಾರ್ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಕೇಸರಿ ಸೋಲಿಗೆ ಮಾಟಿಯಾ ಮಾಲ್ ಹೊರತಲ್ಲ
ಕೇಂದ್ರ ಸರ್ಕಾರವು ಜಾರಿಗೊಳಿಸಿದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆಗೆ ಮತ್ತೊಂದು ಬೃಹತ್ ವೇದಿಕೆಯಾಗಿದ್ದೇ ದೆಹಲಿಯ ಮಾಟಿಯಾ ಮಾಲ್ ವಿಧಾನಸಭಾ ಕ್ಷೇತ್ರ. ಈ ಕ್ಷೇತ್ರದಲ್ಲೂ ಕೂಡಾ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿದೆ. ಆಪ್ ಅಭ್ಯರ್ಥಿ ಶೋಯಿಬ್ ಇಕ್ಬಾಲ್ ಬಿಜೆಪಿ ಅಭ್ಯರ್ಥಿ ರವೀಂದ್ರ ಗುಪ್ತಾ ವಿರುದ್ಧ ಬರೋಬ್ಬರಿ 50 ಸಾವಿರ ಅಂತರಗಳಿಂದ ಗೆಲುವು ದಾಖಲಿಸಿದ್ದಾರೆ.
ಆಪ್ ಗೆ ಜೈಕಾರ ಹಾಕಿದ ಮುಸ್ತಫಾಬಾದ್ ಮತದಾರ
ದೆಹಲಿ ಈಶಾನ್ಯ ಭಾಗದಲ್ಲೂ ಕೂಡಾ ಸಿಎಎ ವಿರುದ್ಧದ ಹೋರಾಟ ಕಾವು ಪಡೆದುಕೊಂಡಿತ್ತು. ಇದನ್ನೇ ಚುನಾವಣಾ ಅಸ್ತ್ರವಾಗಿ ಆಮ್ ಆದ್ಮಿ ಬಳಸಿಕೊಂಡಿದ್ದು ಮುಸ್ತಫಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ವರ್ಕೌಟ್ ಆಗಿದೆ. ಬಿಜೆಪಿ ಹಾಲಿ ಶಾಸಕ ಜಗದೀಶ್ ಪ್ರಧಾನ್ ವಿರುದ್ಧ ಆಪ್ ಅಭ್ಯರ್ಥಿ ಹಜಿ ಯೂನಿಸ್ 20 ಸಾವಿರ ಮತಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದ್ದಾರೆ.