Anti-CAA Protest: ಮಹಿಳಾ ಹೋರಾಟಗಾರರ ಮೇಲೆ ಖಾಕಿ ತೋರಿತಾ ಕ್ರೌರ್ಯ?
ನವದೆಹಲಿ, ಫೆಬ್ರವರಿ.10: ರಾಷ್ಟ್ರ ರಾಜಧಾನಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯು ಮತ್ತೊಮ್ಮೆ ಉಗ್ರ ಸ್ವರೂಪಕ್ಕೆ ತಿರುಗಿದೆ. ಮಹಿಳಾ ಪ್ರತಿಭಟನಾಕಾರರೂ ಸೇರಿದಂತೆ ನೂರಾರು ಪ್ರತಿಭಟನಾಕಾರರ ಮೇಲೆ ಖಾಕಿ ಕ್ರೌರ್ಯ ತೋರಿದೆ ಎಂದ ಆರೋಪ ಕೇಳಿ ಬಂದಿದೆ.
ಯಾವುದೇ ಪೂರ್ವಾನುಮತಿ ಪಡೆಯದೇ ಜಾಮಿಯಾ ನಗರದ ನಿವಾಸಿಗಳು ಹಾಗೂ ಜಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸಂಸತ್ ನತ್ತ ಪ್ರತಿಭಟನಾ ಮೆರವಣಿಗೆ ನಡೆಸಿದ್ದು, ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ.
ಸಾರ್ವಜನಿಕ ರಸ್ತೆ ಬಂದ್ ಮಾಡುವುದ್ದಕ್ಕೆ ಅನುಮತಿ ಕೊಟ್ಟಿದ್ದು ಯಾರು?"
ಜಾಮಿಯಾ ಸಮನ್ವಯ ಸಮಿತಿ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನಾ ಮೆರವಣಿಗೆ ನಡೆಸಲಾಗಿತ್ತು. ಈ ವೇಳೆ ಮಧ್ಯ ಪ್ರವೇಶಿಸಿದ ಪೊಲೀಸರು ಅನುಮತಿ ಇಲ್ಲದೇ ನಡೆಸುತ್ತಿರುವ ಪ್ರತಿಭಟನೆ ತಡೆಯಲು ಮುಂದಾದ್ದು, ಇಬ್ಬರ ನಡುವೆ ಘರ್ಷಣೆಗೆ ಕಾರಣವಾಗಿದೆ.
7ನೇ ಗೇಟ್ ನಿಂದ ಶುರುವಾದ ಪ್ರತಿಭಟನಾ ಮೆರವಣಿಗೆ
ನವದೆಹಲಿ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ 7ನೇ ಗೇಟ್ ನಿಂದ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧ ಪ್ರತಿಭಟನಾ ಮೆರವಣಿಗೆ ಆರಂಭಿಸಲಾಯಿತು. ಕೇಂದ್ರ ಸರ್ಕಾರಕ್ಕೆ ಧಿಕ್ಕಾರ ಕೂಗಿದ ಪ್ರತಿಭಟನಾಕಾರರು "ನಾವು ಯಾವುದೇ ದಾಖಲೆಗಳನ್ನು ನೀಡುವುದಿಲ್ಲ, ಬ್ರಿಟಿಷರಿಗೆ ಬೆದರದ ನಾವು, ಬೇರೆಯವರಿಗೆ ಯಾಕೆ ಹೆದರಬೇಕು" ಎಂಬ ಘೋಷಣೆಗಳನ್ನು ಕೂಗಿದರು.
ಪೊಲೀಸರ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ
ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದು, 40ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಪೊಲೀಸರ ನಡೆ ಪ್ರತಿಭಟನಾಕಾರರನ್ನು ಮತ್ತಷ್ಟು ಕೆರಳುವಂತೆ ಮಾಡಿದೆ.
ಪೌರತ್ವ ಕಾಯ್ದೆಯ ಪ್ರಶ್ನೆಗೆ 'ಉತ್ತರ' ಸಿಗದೇ ಹೊತ್ತಿ ಉರಿದ 'ಪ್ರದೇಶ'!
ಜಾಮಿಯಾ ವಿದ್ಯಾರ್ಥಿನಿಯರ ಮೇಲೆ ಲಾಠಿಚಾರ್ಜ್
ಇನ್ನು, ಪ್ರತಿಭಟನಾನಿರತ ವಿದ್ಯಾರ್ಥಿನಿಯರನ್ನೂ ನೋಡದೇ ಪೊಲೀಸರು ಹಿಗ್ಗಾಮುಗ್ಗಾ ಲಾಠಿ ಬೀಸಿದ್ದಾರೆ. ಇದರಿಂದ 10ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಲ್ಲದೇ, ನಾನು ತೊಟ್ಟ ಬುರ್ಖಾವನ್ನು ತೆಗೆದ ಪೊಲೀಸರು ತನ್ನ ಗುಪ್ತಾಂಗಕ್ಕೆ ಬೂಟಿನಿಂದ ತುಳಿದಿದ್ದಾರೆ ಎಂದು ಗಾಯಗೊಂಡ ವಿದ್ಯಾರ್ಥಿನಿಯು ಗಂಭೀರವಾಗಿ ಆರೋಪಿಸಿದ್ದಾರೆ.
ಖಾಸಗಿ ಆಸ್ಪತ್ರೆಗೆ ಗಾಯಾಳುಗಳು ರವಾನೆ
ನವದೆಹಲಿಯಲ್ಲಿ ಪೊಲೀಸರು ಮತ್ತು ಪ್ರತಿಭಟನಾನಿರತರ ನಡುವೆ ನಡೆದ ಘರ್ಷಣೆಯಲ್ಲಿ ಗಾಯಗೊಂಡವರನ್ನು ಹೊಲಿ ಫ್ಯಾಮಿಲಿ ಆಸ್ಪತ್ರೆ ಹಾಗೂ ಅಲ್ ಶಿಫಾ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.