ಬಿಜೆಪಿ ವಿರೋಧಿ ವಿಪಕ್ಷಗಳ ಸಭೆ: ಮಾಯಾವತಿ ಗೈರು, ಕೇಜ್ರಿವಾಲ್ ಹಾಜರು
Recommended Video
ನವದೆಹಲಿ, ಡಿಸೆಂಬರ್ 10: ಕಾಂಗ್ರೆಸ್ಸಿನ ಮಹಾ ಮೈತ್ರಿ ಕೂಟದ ಕನಸಿಗೆ ಭಾರಿ ಪೆಟ್ಟು ಬಿದ್ದಿದೆ. ಲೋಕಸಭೆ ಚುನಾವಣೆಗೆ ರಣಕಹಳೆ ಊದಲು ಕಾಂಗ್ರೆಸ್ ಕರೆದಿರುವ ಸಭೆಗೆ ಬಹುಜನ ಸಮಾಜವಾದಿ ಪಕ್ಷ ಹಾಗೂ ಸಮಾಜವಾದಿ ಪಕ್ಷದ ಮುಖಂಡರು ಗೈರು ಹಾಜರಾಗಿದ್ದಾರೆ.
'ಯಾವ ಪಕ್ಷದೊಡನೆ ಕೂಡಾ ಮೈತ್ರಿ ಇಲ್ಲ, ಏಕಾಂಗಿಯಾಗಿ ಸ್ಪರ್ಧಿಸುತ್ತೇವೆ' ಎಂದು ಘೋಷಿಸಿದ್ದ ಮಯಾವತಿ ತಮ್ಮ ಹೇಳಿಕೆಗೆ ಬದ್ಧರಾಗಿ, ಸಭೆಯಿಂದ ದೂರವುಳಿದಿದ್ದಾರೆ. ಇನ್ನೊಂದೆಡೆ ಇದೇ ಮೊದಲ ಬಾರಿಗೆ ಮಹಾಘಟಬಂಧನದಲ್ಲಿ ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್ ಅವರೂ ಕಾಣಿಸಿಕೊಂಡಿದ್ದಾರೆ.
ಡಿ.10ರಂದು ವಿಪಕ್ಷಗಳ ಸಭೆ, ಕುತೂಹಲ ಮೂಡಿಸಿದೆ ಮಾಯಾ ನಡೆ!
ಮೇ ತಿಂಗಳಿನಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಎಚ್ ಡಿ ಕುಮಾರಸ್ವಾಮಿಯವರು ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಒಮ್ಮೆ ಅನಧಿಕೃತವಾಗಿ 'ಮಹಾಘಟಬಂಧನ'ದ ಶಕ್ತಿ ಪ್ರದರ್ಶನವಾಗಿತ್ತು
ಇದಾದ ಬಳಿಕ ಮಹಾಘಟಬಂಧನಕ್ಕೆ ಮೈತ್ರಿ ಪಕ್ಷಗಳನ್ನು ಸೇರಿಸುವ ಜವಾಬ್ದಾರಿಯನ್ನು ಹೊತ್ತುಕೊಂಡ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರೇ ಇಂದು ಎನ್ಡಿಎ ವಿರುದ್ಧದ ಸಭೆಯ ನೇತೃತ್ವವಹಿಸಿದ್ದಾರೆ.
17ಕ್ಕೂ ಅಧಿಕ ಪಕ್ಷಗಳಿಂದ ಸಭೆಗೆ ಬೆಂಬಲ
ಬಹುಜನ ಸಮಾಜವಾದಿ ಪಕ್ಷ ಹಾಗೂ ಸಮಾಜವಾದಿ ಪಕ್ಷ ಹೊರತುಪಡಿಸಿದರೆ ಆಹ್ವಾನ ನೀಡಿದ 17ಕ್ಕೂ ಅಧಿಕ ಪಕ್ಷಗಳ ಬಹುತೇಕ ಎಲ್ಲಾ ಮುಖಂಡರು ಇಂದಿನ ಸಭೆಗೆ ಹಾಜರಾಗಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ತೃಣಮೂಲ ಕಾಂಗ್ರೆಸ್ಸಿನ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಸಭೆಗೆ ಹಾಜರಾಗುವ ಬಗ್ಗೆ ಅನುಮಾನವಿತ್ತು. ಆದರೆ, ಅವರಿಬ್ಬರೂ ಸಭೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಡಿ.10ರಂದು ಮಧ್ಯಾಹ್ನ 3.30ರ ವೇಳೆಗೆ ಸಂಸತ್ತಿನ ಆವರಣದ ಕಚೇರಿಯೊಂದರಲ್ಲಿ ಮೋದಿ ಸರ್ಕಾರದ ವಿರೋಧಿಗಳು ರಣತಂತ್ರ ರೂಪಿಸಲು ಸಜ್ಜಾಗುತ್ತಿದ್ದಾರೆ.
ಮಾಯಾವತಿ ಮುನಿಸಿಗೆ ಏನು ಕಾರಣ?
ಕರ್ನಾಟಕ ಮತ್ತು ಛತ್ತೀಸ್ಗಢದಲ್ಲಿ ಬೇರೆ ಪಕ್ಷಗಳೊಂದಿಗೆ ಬಿಎಸ್ಪಿ ಮೈತ್ರಿ ಮಾಡಿಕೊಂಡಿದೆ. ಆದರೆ, ಸದ್ಯ ಮಧ್ಯಪ್ರದೇಶ ಹಾಗೂ ರಾಜಸ್ಥಾನ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದೆ. ಬಿಜೆಪಿಯನ್ನು ಸೋಲಿಸುವುದು ಕಾಂಗ್ರೆಸ್ಸಿನ ಉದ್ದೇಶವಲ್ಲ. ಮೈತ್ರಿಕೂಟದ ಪಕ್ಷಕ್ಕೆ ಹಾನಿಯಾಗುವುದನ್ನು ತಡೆಗಟ್ಟಲು ಯಾವುದೇ ಪ್ರಯತ್ನ ಮಾಡುವುದಿಲ್ಲ ಎಂದು ಮಾಯಾವತಿ ಹೇಳಿದ್ದರು. ಸೀಟು ಹಂಚಿಕೆ ವ್ಯತ್ಯಾಸವೇ ಮಾಯಾವತಿ ಮುನಿಸಿಗೆ ಕಾರಣ ಎನ್ನಬಹುದು.
'ಹಾವುಗಳ' ಸಹವಾಸಕ್ಕಿಂತ ವಿರೋಧ ಪಕ್ಷದಲ್ಲಿ ಕೂರುವುದೇ ವಾಸಿ: ಮಾಯಾವತಿ
ಯಾರು ಯಾರು ಪಾಲ್ಗೊಳ್ಳುತ್ತಿದ್ದಾರೆ?
ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ)ನ ಎಂಕೆ ಸ್ಟಾಲಿನ್, ತೃಣಮೂಲ ಕಾಂಗ್ರೆಸ್ ನ ಮಮತಾ ಬ್ಯಾನರ್ಜಿ, ರಾಷ್ಟ್ರೀಯ್ ಜನತಾ ದಳದ ತೇಜಸ್ವಿ ಯಾದವ್, ತೆಲುಗು ದೇಶಂ ಪಾರ್ಟಿಯ ಚಂದ್ರಬಾಬು ನಾಯ್ಡು, ಎನ್ ಸಿಪಿಯ ಶರದ್ ಪವಾರ್, ಜೆಡಿಎಸ್ ನಿಂದ ಎಚ್ ಡಿ ದೇವೇಗೌಡ, ನ್ಯಾಷನಲ್ ಕಾನ್ಫರೆನ್ಸ್ ಚೇರ್ಮನ್ ಫಾರೂಕ್ ಅಬ್ದುಲ್ಲಾ, ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಯುಪಿಎ ಚೇರ್ಮನ್ ಸೋನಿಯಾ ಗಾಂಧಿ ಮುಂತಾದವರು ಸೇರಿದ್ದಾರೆ.
ಮಾಯಾವತಿಗೆ ಪ್ರಧಾನಿಯಾಗುವ ಆಸೆ
ಲೋಕಸಭೆ ಚುನಾವಣೆ 2019ರಲ್ಲಿ ಮೋದಿ ನೇತೃತ್ವದ ಎನ್ಡಿಎ ಸೋಲಿಸಲು ವಿವಿಧ ರೀತಿಯಲ್ಲಿ ಯತ್ನಿಸುತ್ತಿರುವ ವಿರೋಧಿಗಳು ಈಗ ದಲಿತ ಮಹಿಳಾ ಪ್ರಧಾನಮಂತ್ರಿ ಎಂಬ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ. ಬಹುಜನ ಸಮಾಜ ಪಕ್ಷದಿಂದ ಮಾಯಾವತಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಲಾಗಿದೆ. 2014ರ ಉತ್ತರಪ್ರದೇಶ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನ ಗೆಲ್ಲದಿದ್ದರೂ, ಬಿಎಸ್ಪಿ ಈ ಬಾರಿ ಪುಟಿದೇಳುವ ವಿಶ್ವಾಸದಲ್ಲಿದೆ. ಇತ್ತೀಚೆಗೆ ನಡೆದ ಉಪ ಚುನಾವಣೆಗಳಲ್ಲಿ ಸಮಾಜವಾದಿ ಪಕ್ಷದ ಜತೆ ಕೈಜೋಡಿಸಿ, ಉತ್ತಮ ಫಲಿತಾಂಶ ಪಡೆಯುವಲ್ಲಿ ಪಕ್ಷ ಯಶಸ್ವಿಯಾಗಿದೆ. ಈ ಹಿನ್ನಲೆಯಲ್ಲಿ ಮಾಯಾವತಿ ಅವರು ಪ್ರಧಾನಿ ಅಭ್ಯರ್ಥಿಯಾಗಲು ಸಜ್ಜಾಗಿದ್ದಾರೆ.