ದೆಹಲಿ ರೈತ ಪ್ರತಿಭಟನಾ ಸ್ಥಳದಲ್ಲಿ ನಿಹಾಂಗ್ ಉಪಟಳ: ಮತ್ತೊಬ್ಬನ ಮೇಲೆ ಹಲ್ಲೆ!
ನವದೆಹಲಿ, ಅಕ್ಟೋಬರ್ 22: ದೆಹಲಿ-ಹರಿಯಾಣದ ಸಿಂಘು ಗಡಿಯಲ್ಲಿ ಕೂಲಿ ಕಾರ್ಮಿಕ ಲಖಬೀರ್ ಸಿಂಗ್ ಹತ್ಯೆಯ ಘಟನೆ ಮಾಸುವ ಮುನ್ನವೇ ಅಂಥದ್ದೇ ಮತ್ತೊಂದು ಘಟನೆ ರೈತರ ಪ್ರತಿಭಟನಾ ಸ್ಥಳದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. ವ್ಯಕ್ತಿಯ ಮೇಲೆ ಹಲ್ಲೆ ನಡೆಸಿರುವುದಕ್ಕೆ ಸಂಬಂಧಿಸಿದಂತೆ ನಿಹಾಂಗ್ ಸಮುದಾಯದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಮನೋಜ್ ಪಾಸ್ವಾನ್ ಎಂಬ ವ್ಯಕ್ತಿಯ ಮೇಲೆ ಹಲ್ಲೆ ನಡೆದಿದೆ ಎಂದು ಹೇಳಲಾಗುತ್ತಿದ್ದು, ಸಂತ್ರಸ್ತ ವ್ಯಕ್ತಿಯು ತನ್ನ ಮೇಲೆ ನಡೆದಿರುವ ದಾಳಿಯ ಕುರಿತು ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿಕೊಂಡೇ ವಿವರಿಸಿದ ಎರಡು ವಿಡಿಯೋಗಳು ಸಾಮಾಜಿಕ ಜಲತಾಣಗಳಲ್ಲಿ ವೈರಲ್ ಆಗುತ್ತಿವೆ.
ದೆಹಲಿಯ ಸಿಂಘು ಗಡಿಯಲ್ಲಿ ಲಖಬೀರ್ ಸಿಂಗ್ ಹತ್ಯೆಗೆ ಪ್ರಮುಖ ಕಾರಣಗಳು?
"ಪಾಸ್ವಾನ್ ಕೋಳಿ ಫಾರಂನಿಂದ ಕೋಳಿಯನ್ನು ಸಾಗಿಸುತ್ತಿದ್ದ ಸಂದರ್ಭದಲ್ಲಿ ಸಿಂಘು ಗಡಿಯ ಪ್ರತಿಭಟನಾ ಸ್ಥಳದಲ್ಲಿ ಒಬ್ಬ ವ್ಯಕ್ತಿ ಅವರನ್ನು ತಡೆದು ಉಚಿತವಾಗಿ ಕೋಳಿಯನ್ನು ಕೊಡುವಂತೆ ಒತ್ತಾಯಿಸಿದರು. ಅದಕ್ಕೆ ಒಪ್ಪಿಕೊಳ್ಳದಿದ್ದಾಗ ಕೊಡಲಿಯಂತೆ ಕಾಣುವ ಆಯುಧದಿಂದ ಹೊಡೆದಿದ್ದಾನೆ," ಎಂದು ಪಾಸ್ವಾನ್ ಹೇಳಿಕೊಂಡಿದ್ದಾರೆ.
"ಒಂದು ಕೋಳಿ ಕಡಿಮೆಯಾದರೂ ಉದ್ಯೋಗವೇ ಹೋಗುವುದು":
"ಒಂದು ಕೋಳಿಯನ್ನು ಸಹ ಕೊಡಲು ಸಾಧ್ಯವಿಲ್ಲ ಎಂದು ನಾನು ಅವನಿಗೆ ಹೇಳಿದೆ. ಏಕೆಂದರೆ ಅಂಗಡಿಯವರು ಮತ್ತು ತೋಟದ ಮಾಲೀಕರಿಗೆ ನಾನು ಜವಾಬ್ದಾರಿ ಆಗಿದ್ದೇನೆ. ನಾನು ಒಬ್ಬ ಕಾರ್ಮಿಕನಾಗಿದ್ದುಕೊಂಡು ಒಂದು ಕೋಳಿಯನ್ನೂ ಸಹ ಸಹ ಕಡಿಮೆ ತೆಗೆದುಕೊಂಡು ಹೋಗುವಂತಿಲ್ಲ. ಒಂದು ವೇಳೆ ಒಂದು ಕೋಳಿ ಕಡಿಮೆ ಇದ್ದರೂ ಸಹ ನನ್ನ ಉದ್ಯೋಗವೇ ಹೋಗುತ್ತದೆ," ಎಂದು ಪಾಸ್ವಾನ್ ಇನ್ನೊಂದು ವಿಡಿಯೋದಲ್ಲಿ ವಿವರಿಸಿದ್ದಾರೆ.
ಸರಕುಗಳ ಪಟ್ಟಿ ತೋರಿಸಿದರೂ ಬಿಡಲಿಲ್ಲ:
ಹಲ್ಲೆ ನಡೆಸಿದ ವ್ಯಕ್ತಿಗೆ ಹತ್ತಿರದ ಕೋಳಿ ಫಾರಂಗೆ ಹೋಗಿ ಅಲ್ಲಿ ನೇರವಾಗಿ ಕೋಳಿಯನ್ನು ಖರೀದಿಸಬಹುದು ಎಂದು ಪಾಸ್ವಾನ್ ಹೇಳಿದ್ದರು. "ನಾನು ಆತನಿಗೆ ಸಾಮಾನು ಖರೀದಿಗೆ ಸಂಬಂಧಿಸಿದ ಚೀಟಿಯನ್ನು ಸಾಕ್ಷ್ಯವಾಗಿ ತೋರಿಸಿದೆ. ಆದರೆ ನಾನು ಅದನ್ನು ತೆಗೆದಾಗ ಅವನು ನನ್ನ ಜೇಬಿನಲ್ಲಿ ಬೀಡಿ, ಒಂದು ತೆಳುವಾದ ಕೈಯಿಂದ ಸುತ್ತಿಕೊಂಡ ಸಿಗರೇಟ್ ಇರುವುದನ್ನು ಅವನು ಗಮನಿಸಿದನು. ತದನಂತರದಲ್ಲಿ ಅವನು ನನ್ನ ಮೇಲೆ ಹಲ್ಲೆ ಮಾಡಿದನು" ಎಂದು ಅವರು ಹೇಳಿದ್ದಾರೆ. ಈ ವೇಳೆ ಪಾಸ್ವಾನ್ ಅವರ ಕಾಲಿಗೆ ಪೆಟ್ಟಾಗಿದ್ದು, ಆತನಿಗೆ ಸಹಾಯ ಮಾಡಲು ಮಧ್ಯಪ್ರವೇಶಿಸಿದ ಮತ್ತೊಬ್ಬ ವ್ಯಕ್ತಿಯ ಮೇಲೂ ಹಲ್ಲೆ ನಡೆಸಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ನಿಹಾಂಗ್ ಸಮುದಾಯದಿಂದ ಎರಡನೇ ಹಲ್ಲೆ:
ನವದೆಹಲಿಯ ರೈತರ ಪ್ರತಿಭಟನಾ ಸ್ಥಳದಲ್ಲಿ ನಿಹಾಂಗ್ ಸಮುದಾಯದವರು ನಡೆಸಿದ ಎರಡನೇ ಹಲ್ಲೆಯ ಘಟನೆ ಇದಾಗಿದೆ. ದೆಹಲಿಯ ಹೊರಗಿನ ಸಿಂಘು ಗಡಿಯಲ್ಲಿ ಲಖಬೀರ್ ಸಿಂಗ್ ಎಂಬ 35 ವರ್ಷದ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಮೃತ ವ್ಯಕ್ತಿಯ ದೇಹವು ಪ್ರತಿಭಟನಾ ನಿರತ ರೈತರ ಮುಖ್ಯ ವೇದಿಕೆ ಬಳಿ ಬ್ಯಾರಿಕೇಡ್ನಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೈಗಳನ್ನು ಕತ್ತರಿಸಲಾಗಿದೆ. ಚೂಪಾದ ಆಯುಧದಿಂದ ವ್ಯಕ್ತಿಯ ದೇಹದ ಮೇಲೆ ದಾಳಿ ಮಾಡಿದ ಗುರುತುಗಳು ಪತ್ತೆಯಾಗಿದ್ದವು.
ದೆಹಲಿಯ ಮೂರು ಗಡಿಗಳಲ್ಲಿ ರೈತರ ಪ್ರತಿಭಟನೆ:
ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕಳೆದ 2020ರ ನವೆಂಬರ್.26ರಿಂದ ನವದೆಹಲಿಯ ಸಿಂಘು ಗಡಿ, ಟಿಕ್ರಿ ಗಡಿ ಮತ್ತು ಘಾಜಿಪುರ್ ಗಡಿ ಪ್ರದೇಶಗಳಲ್ಲಿ ರೈತರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪಂಜಾಬ್, ಹರಿಯಾಣ, ಮತ್ತು ಉತ್ತರ ಪ್ರದೇಶದ ಸಾವಿರಾರು ರೈತರು ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ.