ಉಪವಾಸ ಸತ್ಯಾಗ್ರಹ ಆರಂಭಿಸಿರುವ ಅಣ್ಣಾ ಹಜಾರೆ ಅಸ್ವಸ್ಥ
ನವದೆಹಲಿ, ಫೆಬ್ರವರಿ 02: ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಲೋಕಪಾಲ ಮತ್ತು ಲೋಕಾಯುಕ್ತರನ್ನು ನೇಮಿಸುವಂತೆ ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತ, ಗಾಂಧಿ ವಾದಿ ಅಣ್ಣಾ ಹಜಾರೆ ಅವರು ಜ.30 ರಂದು ಆರಂಭಿಸಿರುವ ಉಪವಾ ಸತ್ಯಾಗ್ರಹ ಮೂರನೇ ದಿನ ತಲುಪಿದೆ.
ಅಣ್ಣಾ ಅವರು ಅಸ್ವಸ್ಥರಾಗಿದ್ದು, ಅವರ ರಕ್ತದೊತ್ತಡ ಮತ್ತು ದೇಹದಲ್ಲಿನ ಸಕ್ಕರೆ ಪ್ರಮಾಣ ಗಮನೀಯ ಇಳಿಕೆ ಕಂಡಿದೆ ಎಂದು ವೈದ್ಯರು ಹೇಳಿದ್ದಾರೆ.
ಇಂದಿನಿಂದ ಮತ್ತೆ ಶುರು ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ
ಮಹಾತ್ಮಾ ಗಾಂಧೀಜಿ ಅವರ ಪುಣ್ಯ ತಿಥಿಯಾದ ಜ.30 ರಿಂದ ಅಣ್ಣಾ ಹಜಾರೆ ಅವರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು.
2014 ಜನವರಿಯಲ್ಲಿ ಸಂಸತ್ನಿಂದ ಅನುಮೋದನೆ ಪಡೆದು ರಾಷ್ಟ್ರಪತಿಯವರಿಂದ ಸಹಿ ಪಡೆದಿದ್ದರೂ ಲೋಕಪಾಲ ಮಸೂದೆಯನ್ನು ಜಾರಿಗೆ ತರುವಲ್ಲಿ ಎನ್ ಡಿಎ ಸರ್ಕಾರ ವಿಫಲವಾಗಿದೆ ಎಂದು ಖಂಡಿಸಿರುವ 81 ವರ್ಷ ವಯಸ್ಸಿನ ಅಣ್ಣಾ, ಅಕ್ಟೋಬರ್ 2 ರಂದೇ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಹೇಳಿದ್ದರು.
ಆದರೆ ಗಾಂಧೀಜಿಯವರ ಹುಟ್ಟಿದ ದಿನ(ಅ.02)ದಂದು ಉಪವಾಸ ಸತ್ಯಾಗ್ರಹ ನಡೆಸಲು ಹೊರಟಿದ್ದ ಅಣ್ಣಾ ಅವರ ಮನವೊಲಿಸಿ, ಉಪವಾಸ ಹಿಂಪಡೆಯುವಲ್ಲಿ ಮಹಾರಾಷ್ಟ್ರದ ಜಲಸಂಪನ್ಮೂಲ ಸಚಿವ ಗಿರೀಶ್ ಮಹಾಜನ್ ಯಶಸ್ವಿಯಾಗಿದ್ದರು. ಆದರೆ ಪಟ್ಟು ಬಿಡದ ಅಣ್ಣಾ ಈಗ ಮತ್ತೊಮ್ಮೆ ಉಪವಾಸಕ್ಕೆ ಹೊರಟಿದ್ದಾರೆ.
ಕೇಂದ್ರ ಸರ್ಕಾರದ್ದು 'ಕಪಟಬುದ್ಧಿ': ಅಣ್ಣಾ ಹಜಾರೆ ಆಕ್ರೋಶ
2011 ರಲ್ಲಿ ಲೋಕಪಾಲ ಮಸೂದೆಗೆ ಒಪ್ಪಿಗೆ ನೀಡುವಂತೆ ಅಣ್ಣಾ ಹಜಾರೆ ಆರಂಭಿಸಿದ್ದ ಉಪವಾಸ ಸತ್ಯಾಗ್ರಹ ಅಂದಿನ ಯುಪಿಎ ಸರ್ಕಾರದ ಮೇಲೆ ಸಾಕಷ್ಟು ಪ್ರಭಾವ ಬೀರಿತ್ತು. ಇಂದಿನಿಂದ ಅಣ್ಣಾ ಆರಂಭಿಸಿರುವ ಉಪವಾಸ ಸತ್ಯಾಗ್ರಹವೂ ಮುಂಬರುವ ಲೋಕಸಭಾ ಚುನಾವಣೆಯ ಸಮಯದಲ್ಲಿ ಈಗಿನ ಎನ್ ಡಿಎ ಸರ್ಕಾರದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದರೆ ಅಚ್ಚರಿಯಿಲ್ಲ.