Video: ನಾಯಿ ಕಚ್ಚಿದವನು ಮತ್ತು ನಾಯಿಗೇ ಕಚ್ಚಿದವನ ಕಥೆ ಒಂದು 'ವಿಡಿಯೋ' ಜೊತೆ!
ದೆಹಲಿ, ಜುಲೈ 04: ಜಗತ್ತಿನಲ್ಲಿ ನಿಯತ್ತಿಗೆ ಹೆಸರಾಗಿರುವ ಪ್ರಾಣಿ ಯಾವುದು ಅಂತಾ ಕೇಳಿದರೆ ಎಲ್ಲರ ಬಾಯಿಗೂ ಮೊದಲು ಬರುವ ಹೆಸರೇ ಶ್ವಾನ. ಮನೆ ಬಾಗಿಲು ಕಾಯುವ ಶ್ವಾನದ ಮೇಲೆ ವ್ಯಕ್ತಿಯೊಬ್ಬ ತೋರಿದ ಪೌರುಷ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಮಾಡಿದೆ.
ಕಳೆದ ಭಾನುವಾರ ವಾಕಿಂಗ್ ಹೊರಟಿದ್ದ ವ್ಯಕ್ತಿಯನ್ನು ಕಂಡು ಬೊಗಳಿತು ಎಂಬ ಮಾತ್ರಕ್ಕೆ ತನ್ನ ಪೌರಷವನ್ನು ಮೂಕಪ್ರಾಣಿಯ ಮೇಲೆ ತೋರಿದ್ದಾರೆ. ಆ ವ್ಯಕ್ತಿಯು ಮಾಡಿರುವ ಘನಕಾರ್ಯವು ಮನೆಯಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು: ನಾಯಿಗಳ ಪ್ರೇಮ ವಿವಾಹ
ನವದೆಹಲಿಯಲ್ಲಿ ಶ್ವಾನದ ಜೊತೆ ವ್ಯಕ್ತಿ ತೋರಿಸಿದ ವೀರಾವೇಶ ಹೇಗಿತ್ತು?, ಶ್ವಾನದ ಮಾಲೀಕ ಮತ್ತು ಕಿರಾತಕ ನಡುವೆ ನಡೆದ ಫೈಟಿಂಗ್ ಸೀನ್ ಕ್ಲೈಮ್ಯಾಕ್ಸ್ ಏನಾಯಿತು? ನಾಯಿ ಕಚ್ಚಿದವನು ಮತ್ತು ನಾಯಿಗೇ ಕಚ್ಚಿದವನ ಕಥೆಯನ್ನು ವಿಡಿಯೋದ ಜೊತೆಗೆ ನೋಡಿ ಮತ್ತು ಓದಿ. ನಿಮ್ಮ ಅಭಿಪ್ರಾಯ ತಿಳಿಸಿ.
|
ತನ್ನ ಕಂಡು ಬೊಗಳಿದ ನಾಯಿಗೆ ಕಚ್ಚಿದ ಭೂಪ!
ನವದೆಹಲಿಯ ಪಶ್ಚಿಮ ವಿಹಾರ ಪ್ರದೇಶದಲ್ಲಿ ಬೆಳಗ್ಗೆ ವಾಕಿಂಗ್ ಹೊರಟ್ಟಿದ್ದ ವ್ಯಕ್ತಿಯನ್ನು ಕಂಡು ಶ್ವಾನವೊಂದು ಬೊಗಳಿದೆ. ಇಷ್ಟಕ್ಕೆ ಕೋಪಗೊಂಡ ವ್ಯಕ್ತಿ ತನ್ನ ವೀರಾವೇಶವನ್ನು ಮೂಕಪ್ರಾಣಿಯ ಮೇಲೆ ತೋರಿಸುವ ಮೂಲಕ ಕ್ರೌರ್ಯ ಮೆರೆದಿದ್ದಾನೆ. ಮೊದಲಿಗೆ ಶ್ವಾನದ ಬಾಲವನ್ನು ಹಿಡಿದು ಎತ್ತಿ ಬಿಸಾಕುವ ಮೂಲಕ ಹಿಂಸೆ ನೀಡಿದ್ದಾನೆ. ಇದರಿಂದ ಕೆರಳಿದ ಶ್ವಾನ ಆತನನ್ನು ಕಚ್ಚುವುದಕ್ಕೆ ಶುರು ಮಾಡಿದೆ. ನಂತರ ನಡೆದಿದ್ದು ಮಾತ್ರ ಕರುಣಾಜನಕ ದೃಶ್ಯ. ಈ ವಿಡಿಯೋ ಸೀನ್ ನಲ್ಲಿ ಕಾಣಿಸಿಕೊಳ್ಳುವ ಆರೋಪಿಯ ಹೆಸರೇ ಧರ್ಮವೀರ ದಾಹಿಯಾ.
ಶ್ವಾನವನ್ನು ತಡೆಯಲಿಲ್ಲ, ಮಾಲೀಕನನ್ನೂ ಬಿಡಲಿಲ್ಲ
ತನ್ನನ್ನು ಕಚ್ಚುವುದಕ್ಕೆ ಬಂದ ಶ್ವಾನದ ಮೇಲೆ ಆರೋಪಿ ಧರ್ಮವೀರ ದಾಹಿಯಾ ಶಕ್ತಿ ಪ್ರದರ್ಶಿಸೋಕೆ ನಿಂತಿದ್ದಾನೆ. ಕಬ್ಬಿಣದ ರಾಡ್ ಹಿಡಿದು ಶ್ವಾನದ ತೆಲೆಗೆ ಸರಿಯಾಗಿ ಹೊಡೆದಿದ್ದಾರೆ. ಈ ವೇಳೆ ಆರೋಪಿಯನ್ನು ತಡೆಯಲು ಬಂದಿದ್ದ ಶ್ವಾನದ ಮಾಲೀಕ ರಕ್ಷಿತ್ ಮೇಲೆಯೂ ಬಲ ಪ್ರಯೋಗಿಸಿದನು. ಕಬ್ಬಿಣದ ರಾಡ್ ನಿಂದ ರಕ್ಷಿತ್ ತಲೆಗೂ ಹೊಡೆದಿದ್ದಾನೆ. ತದನಂತರ ರಕ್ಷಿತ್ ಮತ್ತು ಧರ್ಮವೀರ ದಹಿಯಾ ನಡುವೆ ಒಂದು ಫೈಟಿಂಗ್ ಸೀನ್ ಕೂಡಾ ನಡೆದಿದೆ. ರಕ್ಷಿತ್, ಹೇಮಂತ್ ಮತ್ತು ಯಶೋಧಾ ಎಂಬ ಮಹಿಳೆಯ ಮೇಲೂ ದಹಿಯಾ ಹಲ್ಲೆ ನಡೆಸಿದ್ದಾನೆ. ಈ ಬಡಿದಾಟ ಮತ್ತು ಕಿತ್ತಾಟದ ಎಲ್ಲ ದೃಶ್ಯವೂ ಸಹ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಶ್ವಾನ ಕಚ್ಚಿಸಿಕೊಂಡು ಚಿಕಿತ್ಸೆ ಪಡೆಯುತ್ತಿರುವ ದಹಿಯಾ
ದೆಹಲಿಯ ಪಶ್ಚಿಮ ವಿಹಾರದಲ್ಲಿ ನಡೆದಿರುವ ಘಟನೆಯ ನಂತರದಲ್ಲಿ ಧರ್ಮವೀರ ದಹಿಯಾ ಚಿಕಿತ್ಸೆ ಪಡೆದುಕೊಳ್ಳುವುದಕ್ಕೆ ಹೋಗಿದ್ದಾರೆ. ದೆಹಲಿಯ ಖ್ಯಾಲಾದಲ್ಲಿ ಇರುವ ಪಾರ್ಕ್ ಆಸ್ಪತ್ರೆಯಲ್ಲಿ ಶ್ವಾನ ಕಡಿಸಿಕೊಂಡಿರುವುದಕ್ಕೆ ಸಂಬಂಧಿಸಿದಂತೆ ಚಿಕಿತ್ಸೆಯನ್ನು ಪಡೆದಿಕೊಂಡಿದ್ದಾನೆ. ಆದರೆ ಈತನ ಕೈಯಲ್ಲಿ ಪೆಟ್ಟು ತಿಂದ ಶ್ವಾನ ಎದ್ದು ನಿಲ್ಲಲಾಗದಂತಹ ಸ್ಥಿತಿಗೆ ತಲುಪಿರುವುದ ಶ್ವಾನಕ್ಕಿಂತ ಮನುಷ್ಯ ಎಷ್ಟು ಕ್ರೂರಿ ಎಂಬುದನ್ನು ಸಾರಿ ಹೇಳುವಂತಿದೆ.
ಆರೋಪಿ ಧರ್ಮವೀರ್ ವಿರುದ್ಧ ಕೇಸ್ ದಾಖಲು
ಕಂಡು ಬೊಗಳಿದ ಶ್ವಾನಕ್ಕೆ ರಾಡಿನಿಂದ ಹೊಡೆದ ಆರೋಪಿ ಧರ್ಮವೀರ ದಾಹಿಯಾ ವಿರುದ್ಧ ಶ್ವಾನದ ಮಾಲೀಕ ರಕ್ಷಿತ್ ಪೊಲೀಸರಿಗೆ ದೂರು ನೀಡಿದ್ದಾರೆ. ಪಶ್ಚಿಮ ವಿಹಾರ್ ಪೂರ್ವ ಪೊಲೀಸ್ ಠಾಣೆಯಲ್ಲಿ ಐಪಿಸಿ ಮತ್ತು ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು ಅಸಲಿಗೆ ನಡೆದಿದ್ದು ಏನು ಎಂಬುದರ ಮೇಲೆ ವಿಚಾರಣೆ ಶುರು ಮಾಡಿದ್ದಾರೆ," ದೆಹಲಿ ಪೊಲೀಸರು ತಿಳಿಸಿದ್ದಾರೆ.