ಚಂದ್ರಬಾಬು ನಾಯ್ಡು ಯುರೋಪ್ಗೆ, ನಾಲ್ವರು ಟಿಡಿಪಿ ಎಂಪಿಗಳು ಬಿಜೆಪಿ ತೆಕ್ಕೆಗೆ!
ನವದೆಹಲಿ, ಜೂನ್ 20: ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳಲ್ಲಿನ ಆಘಾತಕಾರಿ ಸೋಲಿನ ಬಳಿಕ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ, ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಒಂದರ ಮೇಲೊಂದು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ.
ಸರಣಿ ಹಿನ್ನಡೆಗಳಿಂದ ಆಘಾತಕ್ಕೆ ಒಳಗಾಗಿರುವ ಚಂದ್ರಬಾಬು ನಾಯ್ಡು, ಮಾನಸಿಕ ನೆಮ್ಮದಿಗಾಗಿ ಕುಟುಂಬದವರೊಂದಿಗೆ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ. ಆದರೆ, ಇತ್ತ ಅವರ ಟಿಡಿಪಿ ಪಕ್ಷದ ಮುಖಂಡರು ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದು, ಟಿಡಿಪಿಗೆ ಬೆನ್ನು ತೋರಿಸಿದ್ದಾರೆ.
ಆಂಧ್ರಪ್ರದೇಶವನ್ನು ರಾಜ್ಯಸಭೆಯಲ್ಲಿ ಪ್ರತಿನಿಧಿಸುತ್ತಿರುವ ಟಿಡಿಪಿ ಸಂಸದರಲ್ಲಿ ಅನೇಕರು 'ಕಮಲ'ದ ಕೈ ಹಿಡಿಯಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ. ರಾಜ್ಯಸಭೆಯಲ್ಲಿ ಟಿಡಿಪಿಯ ಆರು ಸಂಸದರಿದ್ದು, ಅವರಲ್ಲಿ ನಾಲ್ವರು ಈಗಾಗಲೇ ಬಿಜೆಪಿ ಸೇರುವುದಾಗಿ ಘೋಷಿಸಿದ್ದಾರೆ. ಇನ್ನೂ ಒಬ್ಬ ಸಂಸದ ಬಿಜೆಪಿ ಪಾಳೆಯಕ್ಕೆ ಜಿಗಿಯಲು ಸಿದ್ಧರಿದ್ದಾರೆ ಎನ್ನಲಾಗಿದೆ.
ಚಂದ್ರಬಾಬು ನಾಯ್ಡುಗೆ ತೀವ್ರ ಹಿನ್ನಡೆ, ಬಿಜೆಪಿಯತ್ತ ಟಿಡಿಪಿ ಶಾಸಕರು!
ಟಿಡಿಪಿ ರಾಜ್ಯಸಭಾ ಸದಸ್ಯರಾದ ಟಿಜಿ ವೆಂಕಟೇಶ್, ವೈಎಸ್ ಚೌದರಿ, ಜಿಎಂ ರಾವ್ ಮತ್ತು ಸಿಎಂ ರಮೇಶ್ ತಾವು ಬಿಜೆಪಿ ಸೇರುತ್ತಿರುವುದಾಗಿ ಗುರುವಾರ ಪ್ರಕಟಿಸಿದ್ದರು. ಉಪರಾಷ್ಟ್ರಪತಿ, ರಾಜ್ಯಸಭೆಯ ಅಧ್ಯಕ್ಷ ವೆಂಕಯ್ಯ ನಾಯ್ಡು ಅವರನ್ನು ಭೇಟಿ ಮಾಡಿದ್ದ ಈ ಮೂವರು, ಅವರಿಗೆ ತಮ್ಮ ನಿರ್ಧಾರ ತಿಳಿಸಿದ್ದರು.
ಬಿಜೆಪಿಗೆ ಬೇಕು ಸಂಸದರ ಬಲ
ಲೋಕಸಭೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಸಂಖ್ಯಾ ಬಲ ಹೊಂದಿದ್ದರೂ, ರಾಜ್ಯಸಭೆಯಲ್ಲಿ ವಿರೋಧಪಕ್ಷದಲ್ಲಿ ಗುರುತಿಸಿಕೊಂಡ ಸದಸ್ಯರ ಸಂಖ್ಯೆಯೇ ಹೆಚ್ಚಿರುವುದರಿಂದ ಕೇಂದ್ರ ಸರ್ಕಾರಕ್ಕೆ ಪ್ರಮುಖ ಮಸೂದೆಗಳನ್ನು ಮೇಲ್ಮನೆಯಲ್ಲಿ ಅಂಗೀಕಾರ ಮಾಡಿಸುವುದಕ್ಕೆ ಅಡ್ಡಿಯಾಗುತ್ತಿದೆ. ಹೀಗಾಗಿ ಅದು ರಾಜ್ಯಸಭೆಯಲ್ಲಿ ತನ್ನ ಬಲವನ್ನು ಹೆಚ್ಚಿಸಿಕೊಳ್ಳುವುದರತ್ತ ಗಮನ ಹರಿಸಿದೆ.
ವಿಜಯವಾಡ ವಿಮಾನ ನಿಲ್ದಾಣದಲ್ಲಿ ಚಂದ್ರಬಾಬು ನಾಯ್ಡು ಜೊತೆ ನಡೆದಿದ್ದೇನು?
ರಾಜೀನಾಮೆ ಸಲ್ಲಿಸಿದ್ದ ಟಿಡಿಪಿ ಸಂಸದರು
ಶುಕ್ರವಾರ ನವದೆಹಲಿಯಲ್ಲಿ ವೆಂಕಯ್ಯ ನಾಯ್ಡು ಅವರನ್ನು ಭೇಟಿ ಮಾಡಿದ ಟಿಜಿ ವೆಂಕಟೇಶ್, ವೈಎಸ್ ಚೌದರಿ, ಜಿಎಂ ರಾವ್ ಮತ್ತು ಸಿಎಂ ರಮೇಶ್, ತಮ್ಮ ರಾಜೀನಾಮೆ ಪತ್ರವನ್ನು ಅವರಿಗೆ ಸಲ್ಲಿಸಿ, ಬಿಜೆಪಿ ಸೇರ್ಪಡೆಯಾದರು.
'ಹೌದು ನಾವು ಟಿಡಿಪಿ ತ್ಯಜಿಸುತ್ತಿದ್ದೇವೆ. ನಾವು ಬಿಜೆಪಿ ಸೇರಲಿದ್ದೇವೆ. ನಾನು ಎಬಿವಿಪಿ ಹಾಗೂ ಬಿಜೆಪಿಯ ಯುವ ಮೋರ್ಚಾದ ಮಾಜಿ ಸದಸ್ಯನಾಗಿದ್ದೆ' ಎಂದು ವೆಂಕಟೇಶ್ ತಿಳಿಸಿದ್ದಾರೆ.
ಬಿಜೆಪಿಯೊಂದಿಗೆ ವಿಲೀನ
ರಾಜ್ಯಸಭೆಯ ತೆಲುಗು ದೇಶಂನ ಶಾಸಕಾಂಗ ಪಕ್ಷವು ಗುರುವಾರ ಸಭೆ ನಡೆಸಿ ಟಿಡಿಪಿಯನ್ನು ಬಿಜೆಪಿಯೊಂದಿಗೆ ವಿಲೀನ ಮಾಡುವ ಸಂಬಂಧ ನಿರ್ಣಯ ತೆಗೆದುಕೊಂಡಿದೆ. ಶಾಸಕಾಂಗ ಪಕ್ಷದ ನಾಯಕ ವೈಎಸ್ ಚೌದರಿ ಮತ್ತು ಉಪ ನಾಯಕ ಸಿಎಂ ರಮೇಶ್ ಅವರ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಹಾಗೂ ಅಭಿವೃದ್ಧಿ ನೀತಿಗಳನ್ನು ಮೆಚ್ಚಿ ಹಾಗೂ ಪ್ರಭಾವಿತರಾಗಿ ತಕ್ಷಣದಿಂದಲೇ ಬಿಜೆಪಿಯೊಂದಿಗೆ ಪಕ್ಷವನ್ನು ವಿಲೀನಗೊಳಿಸಲು ನಿರ್ಧರಿಸಿರುವುದಾಗಿ ನಿರ್ಣಯ ಹೊರಡಿಸಲಾಗಿದೆ.
ತೆಲುಗುದೇಶಂ ಪಕ್ಷ ಇಲ್ಲದ ಹಾಗೇ ಮಾಡುತ್ತೇನೆ, ಹುಷಾರ್: ಸಿಎಂ ಜಗನ್
ಟಿಡಿಪಿ ಮುಖಂಡರ ಗುಪ್ತ ಸಭೆ
ವರದಿಗಳ ಪ್ರಕಾರ ಟಿಡಿಪಿಯ ನಾಲ್ವರು ಸಂಸದರು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿ ಪಕ್ಷ ಸೇರಿಕೊಳ್ಳುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಇದಲ್ಲದೆ, ಟಿಡಿಪಿಯ ಹಿರಿಯ ಮುಖಂಡರು ಮತ್ತು ಮಾಜಿ ಶಾಸಕರು ಕಾಕಿನಾಡದ ಹೋಟೆಲ್ ಒಂದರಲ್ಲಿ ತಮ್ಮ ಭವಿಷ್ಯದ ಕುರಿತು ಗುಪ್ತ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ. ಈ ಸಭೆಯು ಅವರು ಪಕ್ಷ ತೊರೆಯಲಿದ್ದಾರೆ ಎಂಬ ಬಗ್ಗೆ ಅನೇಕ ಊಹಾಪೋಹಗಳನ್ನು ಹುಟ್ಟುಹಾಕಿದೆ.
ಮಾಜಿ ಶಾಸಕ ತೋಟ ತ್ರಿಮೂರ್ತಲು ಅವರ ನಾಯಕತ್ವದಲ್ಲಿ ಕಾಪು ಸಮುದಾಯಕ್ಕೆ ಸೇರಿದ ಟಿಡಿಪಿ ಮುಖಂಡರು ಗುರುವಾರ ಹೋಟೆಲ್ನಲ್ಲಿ ಸಭೆ ನಡೆಸಿ ಮುಂದಿನ ನಡೆಯ ಬಗ್ಗೆ ಚರ್ಚಿಸಿದ್ದಾರೆ. ಆಂಧ್ರಪ್ರದೇಶ ಮತ್ತು ತೆಲಂಗಾಣದ ವಿವಿಧ ಪಕ್ಷಗಳ ಅನೇಕ ಮುಖಂಡರು ಪಕ್ಷ ಸೇರಲು ಉತ್ಸುಕರಾಗಿದ್ದಾರೆ ಎಂದು ಬಿಜೆಪಿ ನಾಯಕರು ಹೇಳಿಕೆ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಯುರೋಪ್ ಪ್ರವಾಸದಲ್ಲಿ ನಾಯ್ಡು
ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಬುಧವಾರ ಯುರೋಪ್ ಪ್ರವಾಸಕ್ಕೆ ತೆರಳಿದ್ದರು. ಪತ್ನಿ ಭುವನೇಶ್ವರಿ, ಮಗ ನಾರಾ ಲೋಕೇಶ್, ಸೊಸೆ ಬ್ರಹ್ಮಣಿ ಹಾಗೂ ಮೊಮ್ಮಗ ದೇವಾಂಶ್ ಜತೆ ಅವರು ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ. ಜೂನ್ 24ರಂದು ಅವರು ಆಂಧ್ರಪ್ರದೇಶಕ್ಕೆ ಮರಳಲಿದ್ದಾರೆ.