JNU ಹಿಂಸಾಚಾರಕ್ಕೆ ಕಾರಣರಾದವರ ಬಗ್ಗೆ ಮಹೀಂದ್ರಾ ಆಕ್ರೋಶ
ನವದೆಹಲಿ, ಜನವರಿ 06: ದೆಹಲಿಯ ಜವಾಹರ ಲಾಲ್ ನೆಹರೂ ವಿವಿಯಲ್ಲಿ ಮಾಸ್ಕ್ ಧಾರಿ ಗೂಂಡಾಗಳಿಂದ ನಡೆದ ಹಲ್ಲೆ ಪ್ರಕರಣವನ್ನು ಉದ್ಯಮಿ ಆನಂದ್ ಮಹೀಂದ್ರಾ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಭಾನುವಾರ ರಾತ್ರಿ ನಡೆದ ಹಲ್ಲೆಯಲ್ಲಿ ಸುಮಾರು 25ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರ ಪೈಕಿ ವಿದ್ಯಾರ್ಥಿಗಳಲ್ಲದೆ, ಶಿಕ್ಷಕರು ಕೂಡಾ ಇದ್ದಾರೆ. ಈ ನಡುವೆ ವಿದ್ಯಾರ್ಥಿ ಸಂಘಟನೆಗಳ ಪರಸ್ಪರ ಕೆಸರೆರಚಾಟ, ಕೂಗಾಟ, ತಳ್ಳಾಟ, ಘೋಷಣೆ, ಪ್ರತಿಭಟನೆ ಮುಂದುವರೆದಿದೆ.
ಆದರೆ, ಭಾನುವಾರದ ಹಿಂಸಾಚಾರಕ್ಕೆ ಕಾರಣರಾದವರನ್ನು ಪತ್ತೆ ಹಚ್ಚಿ, ತೀವ್ರವಾಗಿ ಶಿಕ್ಷೆಗೊಳಪಡಿಸಬೇಕು ಎಂದು ಮಹೀಂದ್ರಾ ಆಗ್ರಹಿಸಿದ್ದಾರೆ.
"ಇಲ್ಲಿ ನಿಮ್ಮ ರಾಜಕೀಯ ಬೇಕಿಲ್ಲ, ನಿಮ್ಮ ಸಿದ್ಧಾಂತ ಬೇಕಿಲ್ಲ, ನಿಮ್ಮ ನಂಬಿಕೆ ಬೇಕಿಲ್ಲ, ನೀವು ಭಾರತೀಯರಾದರೆ, ನೀವು ಗೂಂಡಾಗಳ ಕಾನೂನು ಭಂಗ, ಶಸ್ತ್ರಧಾರಿಗಳ ಕೃತ್ಯವನ್ನು ಸಹಿಸಲು ಹೇಗೆ ಸಾಧ್ಯ, ಜೆಎನ್ ಯು ಒಳನುಗ್ಗಿದವರನ್ನು ಹುಡುಕಿ, ಶಿಕ್ಷಿಸಬೇಕು" ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.
It doesn't matter what your politics are. It doesn't matter what your ideology is. It doesn't matter what your faith is. If you're an Indian, you cannot tolerate armed, lawless goons. Those who invaded JNU tonight must be traced & hunted down swiftly & given no quarter...
— anand mahindra (@anandmahindra) January 5, 2020
ಜೆಎನ್ ಯು ಹಿಂಸಾಚಾರದಲ್ಲಿ ಗಾಯಗೊಂಡ 18 ಮಂದಿಗೆ ಏಮ್ಸ್ ನಲ್ಲಿ trauma ಕೇಂದ್ರದಲ್ಲಿ ಸದ್ಯಕ್ಕೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕ್ಯಾಂಪಸಿನಲ್ಲಿದ್ದ ವಿದ್ಯಾರ್ಥಿಗಳು, ಶಿಕ್ಷಕರು, ಟಿವಿ ವರದಿಗಾರರ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ ನಡೆದಿದೆ. ದೆಹಲಿಯ ಈ ಕೇಂದ್ರ ವಿಶ್ವವಿದ್ಯಾಲಯದಲ್ಲಿನ ಆತಂಕ ವಾತವರಣ, ಹಲ್ಲೆ ಹಿಂದೆ ಎಬಿವಿಪಿ ವಿದ್ಯಾರ್ಥಿ ಸಂಘಟನೆ ಇದೆ ಎಂದು ಜೆಎನ್ ಯು ವಿದ್ಯಾರ್ಥಿ ಸಂಘಟನೆ ಹೇಳಿಕೆ ನೀಡಿದೆ. ಆದರೆ, ಈ ಗಲಾಟೆ ಶುರುವಾಗಿದ್ದು ಎಡಪಕ್ಷಗಳ ಬೆಂಬಲಿತ ವಿದ್ಯಾರ್ಥಿ ಸಂಘಟನೆಗಳಿಂದ ಎಂದು ಎಬಿವಿಪಿ ಹೇಳಿದೆ.
ಜೆಎನ್ ಯುನಲ್ಲಿ ನಡೆದ ಹಿಂಸಾಚಾರವನ್ನು ಖಂಡಿಸಿ, ದೆಹಲಿ ಪೊಲೀಸ್ ಕೇಂದ್ರ ಕಚೇರಿ ಎದುರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದು,ಹಲ್ಲೆ ನಡೆಸಿದ ಗೂಂಡಾಗಳ ಬಂಧನಕ್ಕೆ ಆಗ್ರಹಿಸಿದ್ದಾರೆ.