ಚಿಂದಿ ಆಯುವ ಸಹೋದರರ ಗಾಯನಕ್ಕೆ ಮನಸೋತ ಆನಂದ್ ಮಹೀಂದ್ರಾ: ವೈರಲ್ ವಿಡಿಯೋ
ನವದೆಹಲಿ, ಫೆಬ್ರವರಿ 20: ಎಷ್ಟೋ ಪ್ರತಿಭೆಗಳು ಎಲೆಮರೆಯ ಕಾಯಿಯಂತೆ ಇರುತ್ತವೆ. ಈ ಆಧುನಿಕ ಯುಗದಲ್ಲಿ ಸಾಮಾಜಿಕ ಜಾಲತಾಣಗಳು ಅಂತಹ ಕೆಲವರನ್ನು ಬೆಳಕಿಗೆ ತರುತ್ತವೆ. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಉದ್ಯಮಿ ಆನಂದ್ ಮಹೀಂದ್ರಾ ಅಂತಹ ಇಬ್ಬರು ಕಲಾವಿದರನ್ನು ಪರಿಚಯಿಸಿದ್ದಾರೆ.
ಅತ್ಯಂತ ಮಧುರವಾಗಿ ಹಿಂದಿ ಹಾಡುಗಳನ್ನು ಹಾಡುವ ಹಫೀಜ್ ಮತ್ತು ಹಬೀಬುರ್ ಎಂಬ ಇಬ್ಬರು ಪ್ರತಿಭೆಗಳನ್ನು ಆನಂದ್ ಮಹೀಂದ್ರಾ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಜನರಿಗೂ ಪರಿಚಯ ಮಾಡಿದ್ದಾರೆ. ಈ ವಿಡಿಯೋಗಳನ್ನು ತಮ್ಮ ಸ್ನೇಹಿತ ರೋಹಿತ್ ಖಟ್ಟರ್ ಅವರು ನೀಡಿದ್ದಾಗಿ ಆನಂದ್ ಮಹೀಂದ್ರಾ ಹೇಳಿದ್ದಾರೆ.
ವೈರಲ್ ಆಯಿತು "ಖಿನ್ನತೆ" ಬಗ್ಗೆ ಆನಂದ್ ಮಹೀಂದ್ರಾ ಟ್ವೀಟ್...
ಹಫೀಜ್ ಮತ್ತು ಹಬೀಬುರ್ ಇಬ್ಬರೂ ಚಿಂದಿ ಆಯುವವರು. ದೆಹಲಿಯ ನ್ಯೂ ಫ್ರೆಂಡ್ಸ್ ಕಾಲೊನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆನಂದ್ ಮಹೀಂದ್ರಾ ಅವರು ಹಂಚಿಕೊಂಡಿರುವ ವಿಡಿಯೋಗಳಲ್ಲಿ ಹಫೀಜ್ ಮತ್ತು ಹಬೀಬುರ್ 1969ರ 'ಅನ್ಮೋಲ್ ಮೋತಿ' ಚಿತ್ರದ 'ಏ ಜಾನ್-ಎ-ಚಮನ್' ಮತ್ತು 2010ರ 'ಮೈ ನೇಮ್ ಈಸ್ ಖಾನ್' ಚಿತ್ರದ 'ಸಜ್ದಾ' ಹಾಡುಗಳನ್ನು ಹೇಳಿ ರಂಜಿಸಿದ್ದಾರೆ. ಮುಂದೆ ಓದಿ.
ಮನಸೋತ ಮಹೀಂದ್ರಾ
ಈ ಹಾಡುಗಳನ್ನು ಕೇಳಿ ಆನಂದ್ ಮಹೀಂದ್ರಾ ಮನಸೋತಿದ್ದಾರೆ. ಸ್ನೇಹಿತ ರೋಹಿತ್ ಖಟ್ಟರ್ ಜತೆಗೂಡಿ ಹಫೀಜ್ ಮತ್ತು ಹಬೀಬುರ್ಗೆ ಸಂಗೀತದಲ್ಲಿ ಮತ್ತಷ್ಟು ತರಬೇತಿ ನೀಡುವ ಸಲುವಾಗಿ ಸಹಾಯ ಮಾಡಲು ಮುಂದಾಗಿದ್ದಾರೆ. ಈ ಪ್ರತಿಭಾವಂತ ಸಹೋದರರಿಗೆ ಸಂಗೀತದ ಕಲಿಕೆ ನೀಡಬಹುದಾದ ರಾಜಧಾನಿಯಲ್ಲಿನ ವಿದ್ವಾಂಸರ ಬಗ್ಗೆ ಮಾಹಿತಿ ನೀಡುವಂತೆ ಅಭಿಮಾನಿಗಳು ಹಾಗೂ ಹಿಂಬಾಲಕರಿಗೆ ಮನವಿ ಮಾಡಿದ್ದಾರೆ.
|
ಪ್ರತಿಭೆಗೆ ಮಿತಿಯಿಲ್ಲ
'ನಂಬಲಸಾಧ್ಯ ಭಾರತ. ಸಾಮಾಜಿಕ ಜಾಲತಾಣದಲ್ಲಿ ತನಗೆ ಸಿಕ್ಕ ಈ ಪೋಸ್ಟ್ಗಳನ್ನು ನನ್ನ ಸ್ನೇಹಿತ ರೋಹಿತ್ ಖಟ್ಟರ್ ಹಂಚಿಕೊಂಡಿದ್ದಾನೆ. ಇಬ್ಬರು ಸಹೋದರರು, ಹಫೀಜ್ ಮತ್ತು ಹಬೀಬುರ್ ನ್ಯೂ ಫ್ರೆಂಡ್ಸ್ ಕಾಲೊನಿಯಲ್ಲಿ ಚಿಂದಿ ಆಯುವ ಕಠಿಣ ಪರಿಶ್ರಮಿಗಳು. ನಿಜಕ್ಕೂ ಪ್ರತಿಭೆಯು ಹೊರಹೊಮ್ಮಲು ಯಾವುದೇ ಮಿತಿಯಿಲ್ಲ. ಅವರ ಪ್ರತಿಭೆ ಕಚ್ಚಾ, ಆದರೆ ಖಚಿತವಾದುದು' ಎಂದು ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ.
ಆನಂದ್ ಮಹೀಂದ್ರಾ ಟ್ವಿಟ್ಟರಲ್ಲಿ ಕೊಟ್ಟ ಟಾಸ್ಕಿಗೆ ಭರ್ಜರಿ ಪ್ರತಿಕ್ರಿಯೆ
|
ಸಂಗೀತ ಶಿಕ್ಷಕರ ಮಾಹಿತಿ ನೀಡಿ
ಅವರ ಸಂಗೀತದ ಮುಂದಿನ ತರಬೇತಿಗೆ ಬೆಂಬಲ ನೀಡಲು ನಾನು ಮತ್ತು ರೋಹಿತ್ ಬಯಸಿದ್ದೇವೆ. ಅವರು ದಿನವಿಡೀ ಕೆಲಸ ಮಾಡುವುದರಿಂದ ಸಂಜೆಯ ವೇಳೆ ಅವರಿಗೆ ತರಬೇತಿ ನೀಡಬಲ್ಲ ಸಂಗೀತ ಶಿಕ್ಷಕರು/ಧ್ವನಿ ತರಬೇತುದಾರರ ಬಗ್ಗೆ ದೆಹಲಿಯಲ್ಲಿನ ಯಾರಾದರೂ ಮಾಹಿತಿ ನೀಡಬಹುದೇ? ಎಂದು ಅವರು ಕೋರಿದ್ದಾರೆ.
ನೆಟ್ಟಿಗರ ಶ್ಲಾಘನೆ
ಹಫೀಜ್ ಮತ್ತು ಹಬೀಬುರ್ ಅವರ ಹಾಡುಗಳನ್ನು ಕೇಳಿ ನೆಟ್ಟಿಗರು ಕೂಡ ರೋಮಾಂಚನಗೊಂಡಿದ್ದಾರೆ. ಈ ಇಬ್ಬರೂ ಅದ್ಭುತ ಪ್ರತಿಭೆಗಳು ಎಂದು ಕೊಂಡಾಡಿದ್ದಾರೆ. ನಿಮ್ಮ ಮಾನವೀಯತೆಗೆ ನಾವು ವಂದಿಸುತ್ತೇವೆ. ಸಾಮಾನ್ಯ ವ್ಯಕ್ತಿಯ ಘನತೆಯನ್ನು ನೀವು ಎತ್ತಿ ಹಿಡಿಯುತ್ತಿದ್ದೀರಿ ಎಂದು ಅನೇಕರು ಆನಂದ್ ಮಹೀಂದ್ರಾ ಅವರನ್ನು ಶ್ಲಾಘಿಸಿದ್ದಾರೆ.