ಸುಳ್ಳಿನ ಹರಡುವಿಕೆ, ಭ್ರಮೆ ಸೃಷ್ಟಿವುದೇ ಮೋದಿ ಮಾರ್ಗ ಎಂದ ಕಾಂಗ್ರೆಸ್
ನವದೆಹಲಿ, ನವೆಂಬರ್.17: ಜಮ್ಮು-ಕಾಶ್ಮೀರದಲ್ಲಿ ರಚಿಸಲಾದ ಪೀಪಲ್ಸ್ ಆಲಿಯನ್ಸ್ ಫಾರ್ ಗುಪ್ಕರ್ ಡಿಕ್ಲರೇಷನ್ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಗೆ ಕಾಂಗ್ರೆಸ್ ಕೆಂಡಾಮಂಡಲವಾಗಿದೆ. ಸುಳ್ಳನ್ನು ಹರಡುವುದು ಮತ್ತು ಭ್ರಮೆಯನ್ನು ಸೃಷ್ಟಿಸುವುದೇ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮುಖ್ಯ ಮಾರ್ಗವಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಕೇಂದ್ರ ಗೃಹ ಸಚಿವರಾಗಿರುವ ಅಮಿತ್ ಶಾ, ದೇಶದ ಭದ್ರತೆಯನ್ನು ಕಾಪಾಡುವ ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಅಂಥ ಉನ್ನತ ಸ್ಥಾನದಲ್ಲಿ ಇದ್ದುಕೊಂಡು ಜಮ್ಮು-ಕಾಶ್ಮೀರ ಮತ್ತು ಲಡಾಖ್ ವಿಚಾರದಲ್ಲಿ ಸುಳ್ಳು ಸುಳ್ಳು ಹೇಳಿಕೆಗಳ ಮೂಲಕ ಜನರನ್ನು ದಾರಿ ತಪ್ಪಿಸುವುದು. ತಪ್ಪು ಮಾಹಿತಿಗಳನ್ನು ಹರಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಾಂಗ್ರೆಸ್ ವಕ್ತಾರ ರಂದೀಪ್ ಸರ್ಜೇವಾಲಾ ಕಿಡಿ ಕಾರಿದ್ದಾರೆ.
ಗುಪ್ಕರ್ ಗ್ಯಾಂಗ್: ಬಿಜೆಪಿಯದ್ದು ಒಡೆದು ಆಳುವ ನೀತಿ ಎಂದ ಮುಫ್ತಿ
"ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆ ಯುಗವನ್ನು ಪುನರ್ ಸ್ಥಾಪಿಸುವುದಕ್ಕೆ ಕಾಂಗ್ರೆಸ್ ಉದ್ದೇಶಿಸಿದಂತೆ ತೋರುತ್ತಿದೆ. 370 ಕಾಯ್ದೆಯನ್ನು ವಿರೋಧಿಸುವ ಮೂಲಕ ದಲಿತರು, ಮಹಿಳೆಯರು ಮತ್ತು ಹಿಂದುಳಿದ ವರ್ಗದವರ ಹಕ್ಕನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ. ಅದಕ್ಕಾಗಿ ಕಾಂಗ್ರೆಸ್ ನ್ನು ಎಲ್ಲ ಕಡೆಗಳಲ್ಲಿ ಜನರು ತಿರಸ್ಕರಿಸುತ್ತಿದ್ದಾರೆ" ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದರು.
ಕೇಂದ್ರ ಸಚಿವ ಅಮಿತ್ ಶಾ ಆರೋಪವೇನು:
ಜಮ್ಮು-ಕಾಶ್ಮೀರದಲ್ಲಿ ನೂತನವಾಗಿ "ಪೀಪಲ್ಸ್ ಆಲಿಯನ್ಸ್ ಫಾರ್ ಗುಪ್ಕರ್ ಡಿಕ್ಲರೇಷನ್" (PAGD)ಮೈತ್ರಿಕೂಟ ರಚಿಸಲಾಗಿತ್ತು. ಈ ಮೈತ್ರಿಕೂಟವನ್ನು 'ಗುಪ್ಕರ್ ಗ್ಯಾಂಗ್' ಎಂದು ಕರೆಯುವ ಮೂಲಕ ಅಪಹಾಸ್ಯ ಮಾಡಿದ್ದ ಕೇಂದ್ರ ಸಚಿವ ಅಮಿತ್ ಶಾ, ಈ ಮೈತ್ರಿ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಸರಣಿ ಟ್ವೀಟ್ಗಳಲ್ಲಿ ದೂಷಿಸಿದ್ದರು. ಜಮ್ಮು ಮತ್ತು ಕಾಶ್ಮೀರ ಯಾವಾಗಲೂ ಭಾರತದ ಅವಿಭಾಜ್ಯ ಅಂಗವಾಗಲಿದೆ ಎಂದು ಟ್ವೀಟ್ ನಲ್ಲಿ ಉಲ್ಲೇಖಿಸಿದ್ದರು.
ಬಿಜೆಪಿಯಿಂದ ಒಡೆದು ಆಳುವ ನೀತಿ ಪಾಲನೆ:
ಭಾರತದಲ್ಲಿನ ನಿರುದ್ಯೋಗ ಮತ್ತು ಹಣದುಬ್ಬರದ ಬಗ್ಗೆ ಪ್ರಶ್ನೆ ಮಾಡುವ ಪ್ರತಿಪಕ್ಷಗಳನ್ನು ತಮ್ಮ ವಿರೋಧಿಗಳು ಎನ್ನುವಂತೆ ಬಿಂಬಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಪೀಪಲ್ಸ್ ಡೆಮಾಕ್ರೆಟಿಕ್ ಪಕ್ಷದ ಮುಖಂಡರಾದ ಮೆಹಬೂಬಾ ಮುಫ್ತಿ ಆರೋಪಿಸಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಗುಪ್ಕರ್ ಗ್ಯಾಂಗ್ ಕಟ್ಟಲಾಗುತ್ತಿದೆ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಆರೋಪಕ್ಕೆ ಮೆಹಬೂಬ ಮುಫ್ತಿ ಪ್ರತಿಕ್ರಿಯೆ ನೀಡಿದ್ದಾರೆ. ದೇಶದಲ್ಲಿ ಬಿಜೆಪಿಯು ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದೆ. ಸರ್ಕಾರವನ್ನು ಪ್ರತಿ ಮಾಡುವ ಪ್ರತಿಪಕ್ಷಗಳನ್ನು ಶತ್ರುಗಳಂತೆ ಬಿಂಬಿಸಲು ಹೊರಟಿದೆ ಎಂದು ಕಿಡಿ ಕಾರಿದ್ದಾರೆ. ಮೊದಲು ಲವ್ ಜಿಹಾದ್, ತುಕಡೆ ತುಕಡೆ ತಂತ್ರ ಇದೀಗ ಗುಪ್ಕರ್ ಗ್ಯಾಂಗ್ ಬಗ್ಗೆ ಬಿಜೆಪಿಗರು ಮಾತನಾಡುತ್ತಿದ್ದಾರೆ. ಆದರೆ ದೇಶದಲ್ಲಿನ ನಿರುದ್ಯೋಗ ಮತ್ತು ಹಣದುಬ್ಬರದ ಬಗ್ಗೆ ಅವರಿಗೆ ಮಾತನಾಡುತ್ತಿಲ್ಲವೇಕೆ ಎಂದು ಪ್ರಶ್ನೆ ಮಾಡಿದ್ದಾರೆ.