ಲೋಕಸಭೆಯಲ್ಲಿ ಇಂದು ಪೌರತ್ವ ತಿದ್ದುಪಡಿ ಮಸೂದೆ ಮಂಡನೆ
ನವದೆಹಲಿ, ಡಿಸೆಂಬರ್ 9: ವಿರೋಧಪಕ್ಷಗಳ ತೀವ್ರ ವಿರೋಧ, ಜನರಲ್ಲಿ ಮೂಡಿರುವ ಹಲವು ಆತಂಕಗಳ ನಡುವೆಯೇ ಗೃಹ ಸಚಿವ ಅಮಿತ್ ಶಾ, ಸೋಮವಾರ ಲೋಕಸಭೆಯಲ್ಲಿ ಪೌರತ್ವ (ತಿದ್ದುಪಡಿ) ಮಸೂದೆ ಮಂಡನೆ ಮಾಡಲಿದ್ದಾರೆ.
ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನಗಳಿಂದ ಧಾರ್ಮಿಕ ಕಾರಣಗಳಿಂದ ನಿರಾಶ್ರಿತರಾಗಿ ಭಾರತಕ್ಕೆ ಬಂದಿರುವ ಮುಸ್ಲಿಮೇತರರಿಗೆ ಭಾರತೀಯ ಪೌರತ್ವ ನೀಡುವ ಮಸೂದೆ ಇದಾಗಿದೆ. ಈ ಮಸೂದೆಗೆ ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಈಶಾನ್ಯ ರಾಜ್ಯಗಳನ್ನು ಇದರಿಂದ ಹೊರತಾಗಿಸಿದೆ.
ಅಕ್ರಮ ವಲಸಿಗರನ್ನು ಹೊರಹಾಕಲು ರಾಜ್ಯದಲ್ಲೂ ಎನ್ಆರ್ಸಿ ಜಾರಿ: ಬೊಮ್ಮಾಯಿ
ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಮತ್ತು ಮಿಜೋರಾಂ ಈ ಮಸೂದೆಯಿಂದ ಸಂಪೂರ್ಣವಾಗಿ ವಿನಾಯಿತಿ ಪಡೆದಿವೆ. ಮೇಘಾಲಯ, ಅಸ್ಸಾಂನ ಕೆಲವು ಭಾಗಗಳು ಮತ್ತು ತ್ರಿಪುರಾ ಬಹುತೇಕ ವಿನಾಯಿತಿ ಪಡೆದಿವೆ. ಆದರೆ ಮಣಿಪುರ ಸಂಪೂರ್ಣವಾಗಿ ಈ ಮಸೂದೆ ವ್ಯಾಪ್ತಿಗೆ ಒಳಪಡಲಿದೆ. ಮಣಿಪುರಕ್ಕೆ ಸಂಬಂಧಿಸಿದಂತೆ ಸರ್ಕಾರವು ವಿಶೇಷ ಪ್ರಾತಿನಿಧ್ಯಗಳನ್ನು ಘೋಷಿಸುವ ಸಾಧ್ಯತೆ ಇದೆ.
ಆರು ದಶಕಗಳಷ್ಟು ಹಳೆಯದಾದ ಪೌರತ್ವ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಯನ್ನು ಸೋಮವಾರ ಮಧ್ಯಾಹ್ನ ಲೋಕಸಭೆಯಲ್ಲಿ ಮಂಡಿಸಲಾಗುತ್ತದೆ. ಬಳಿಕ ಅದರ ಬಗ್ಗೆ ಚರ್ಚೆಗಳು ನಡೆಯಲಿವೆ.
ಪೌರತ್ವ ತಿದ್ದುಪಡಿ ಮಸೂದೆ, 2019ರ (ಕ್ಯಾಬ್) ಪ್ರಕಾರ 2014ರ ಡಿ. 31ರ ಒಳಗೆ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನಗಳಿಂದ ಧಾರ್ಮಿಕ ಶೋಷಣೆಗೆ ಒಳಪಟ್ಟು ಭಾರತಕ್ಕೆ ನಿರಾಶ್ರಿತರಾಗಿ ಬಂದ ಹಿಂದೂ, ಕ್ರೈಸ್ತ, ಸಿಖ್, ಬೌದ್ಧ, ಜೈನ ಮತ್ತು ಪಾರ್ಸಿ ಸಮುದಾಯಗಳ ಜನರನ್ನು ಅಕ್ರಮ ವಲಸಿಗರು ಎಂದು ನೋಡದೆ ಅವರಿಗೆ ಭಾರತದ ಪೌರತ್ವ ನೀಡಲಾಗುತ್ತದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ವಲಸಿಗರು ಅನ್ನೋದಾ?
ಈ ಮಸೂದೆಯು ಸಂವಿಧಾನ ವಿರೋಧಿ ಮತ್ತು ಭಾರತದ ಜಾತ್ಯತೀಯ ಆಶಯಗಳು ಹಾಗೂ ಸಂಸ್ಕೃತಿಗೆ ವಿರುದ್ಧವಾಗಿದೆ. ಮುಸ್ಲಿಮರನ್ನು ಈ ಮಸೂದೆಯಿಂದ ಹೊರಗಿಡುವ ಮೂಲಕ ಕೋಮು ವಿಭಜನೆಯ ತಂತ್ರ ನಡೆಸಲಾಗಿದೆ ಎಂದು ವಿರೋಧಪಕ್ಷಗಳು ಆರೋಪಿಸಿದೆ.