ಚಾಂದನಿ ಚೌಕ್ನಲ್ಲಿ ಕೋಮು ಸಂಘರ್ಷ: ಮಧ್ಯಪ್ರವೇಶಿಸಿದ ಅಮಿತ್ ಶಾ
ನವದೆಹಲಿ, ಜುಲೈ 3: ದೆಹಲಿಯ ಚಾಂದನಿ ಚೌಕ್ ಪ್ರದೇಶದಲ್ಲಿ ಬೈಕ್ ಪಾರ್ಕಿಂಗ್ನ ಕ್ಷುಲ್ಲಕ ವಿಚಾರಕ್ಕೆ ನಡೆದ ಗಲಾಟೆ ದೇವಸ್ಥಾನಕ್ಕೆ ಹಾನಿಯುಂಟು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಧ್ಯಪ್ರವೇಶ ಮಾಡಿದ್ದಾರೆ.
ಚಾಂದನಿ ಚೌಕ್ ಸಂಘರ್ಷಕ್ಕೆ ಸಂಬಂಧಿಸಿದಂತೆ ಅಮಿತ್ ಶಾ ಅವರು ದೆಹಲಿ ಪೊಲೀಸ್ ಆಯುಕ್ತ ಅಮೂಲ್ಯ ಪಟ್ನಾಯಕ್ ಅವರನ್ನು ಕಚೇರಿಗೆ ಕರೆಸಿಕೊಂಡಿದ್ದರು. ಈ ವೇಳೆ ಆಯುಕ್ತರು ಅಲ್ಲಿನ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ಹೌಜ್ ಖಾಜಿ ಪ್ರದೇಶದಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿದೆ. ನಾಲ್ವರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಪಾರ್ಕಿಂಗ್ ಗಲಾಟೆಯಿಂದ ಕೋಮು ಗಲಾಟೆಯತ್ತ ರಾಷ್ಟ್ರ ರಾಜಧಾನಿ
ಪಾರ್ಕಿಂಗ್ ವಿಚಾರದಲ್ಲಿ ನಡೆದ ಗಲಾಟೆ ಚಾಂದನಿ ಚೌಕ್ನಲ್ಲಿ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿತ್ತು. ಲಾಲ್ ಕುವಾನ್ನಲ್ಲಿರುವ ಪುರಾತನ ದುರ್ಗಾ ಮಾತಾ ಮಂದಿರಕ್ಕೆ ಜೂನ್ 30ರ ರಾತ್ರಿ ಸುಮಾರು 200 ಜನರ ಗುಂಪು ನುಗ್ಗಿ ದಾಂದಲೆ ನಡೆಸಿತ್ತು. ಅಲ್ಲಿದ್ದ ದೇವರ ವಿಗ್ರಹ ಮುಂತಾದವುಗಳನ್ನು ಹಾನಿಗೊಳಿಸಿತ್ತು ಎಂದು ಆರೋಪಿಸಲಾಗಿದೆ.
ಈ ಘಟನೆ ಬಳಿಕ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಪ್ರತಿಭಟನೆಗಳು, ಕಲ್ಲು ತೂರಾಟ ನಡೆದಿದ್ದವು. ಎರಡು ಕೋಮುಗಳ ನಡುವೆ ಸಂಘರ್ಷ ತೀವ್ರಗೊಳ್ಳುವ ಸಾಧ್ಯತೆ ಉಂಟಾಗಿತ್ತು. ಹೀಗಾಗಿ ಪರಿಸ್ಥಿತಿ ಕೈಮೀರಿ ಹೋಗದಂತೆ ತಡೆಯಲು ಸೂಚನೆ ನೀಡುವ ಸಲುವಾಗಿ ದೆಹಲಿ ಪೊಲೀಸ್ ಅಯುಕ್ತರಿಗೆ ಅಮಿತ್ ಶಾ ಕರೆ ಮಾಡಿದ್ದರು.
ಲವ್ ಜಿಹಾದ್ಗಷ್ಟೇ ವಿರೋಧ, ಅಂತರ್ ಧರ್ಮೀಯ ಮದುವೆಗೆ ಅಲ್ಲ: ವಿಎಚ್ಪಿ
ಈಗ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ. ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಪ್ರಕರಣ ಕುರಿತು ತನಿಖೆ ಮುಂದುವರಿಸಲಾಗಿದೆ. ಬಂಧಿತ ನಾಲ್ವರಲ್ಲಿ ಅಪ್ತಾಪ್ತ ವಯಸ್ಕನೊಬ್ಬನೂ ಸೇರಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.