ರಾಹುಲ್ ಗಾಂಧಿಗೆ ಕಿವಿ ಮಾತು ಹೇಳಿದ ಸೈನಿಕನ ತಂದೆ, ಅಮಿತ್ ಶಾ ವಾಗ್ದಾಳಿ
ದೆಹಲಿ, ಜೂನ್ 20: ಲಡಾಖ್ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಚೀನಾ ಮತ್ತು ಭಾರತ ಸೈನಿಕರ ನಡುವೆ ಘರ್ಷಣೆ ಸಂಭವಿಸಿದ ಕ್ಷಣದಿಂದಲೂ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸುತ್ತಲೆ ಇದ್ದಾರೆ.
Recommended Video
ಚೀನಾ ವಿಚಾರದಲ್ಲಿ ಪ್ರಧಾನಿ ಮೋದಿ ಶರಣಾಗಿದ್ದಾರೆ, ಭಾರತದ ಕೇಂದ್ರಾಡಳಿತ ಪ್ರದೇಶವನ್ನು ಚೀನಾ ಸೇನೆಗೆ ಒಪ್ಪಿಸಿದ್ದಾರೆ ಎಂದು ರಾಹುಲ್ ವಾಗ್ದಾಳಿ ನಡೆಸಿದ್ದರು. ಇದೀಗ, ಗಾಲ್ವಾನ್ ಘರ್ಷಣೆಯಲ್ಲಿ ಗಾಯಗೊಂಡ ಯೋಧರೊಬ್ಬರ ತಂದೆ ರಾಹುಲ್ ಗಾಂಧಿಗೆ ಕಿವಿಮಾತು ಹೇಳಿದ್ದಾರೆ.
'ಚೀನಾ ಆಕ್ರಮಣಕ್ಕೆ ಲಡಾಖ್ ಬಿಟ್ಟುಕೊಟ್ರಾ ಮೋದಿ?' ರಾಹುಲ್ ಗಾಂಧಿ ಪ್ರಶ್ನೆ
ಈ ವಿಡಿಯೋ ಹಂಚಿಕೊಂಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ನಾಯಕನ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಅಷ್ಟಕ್ಕೂ, ಆ ವಿಡಿಯೋದಲ್ಲಿ ಏನಿದೆ? ಅಮಿತ್ ಶಾ ಏನಂದ್ರು? ಮುಂದೆ ಓದಿ....
|
ನಮ್ಮ ಸೇನೆ ಪ್ರಬಲವಾಗಿದೆ
ಲಡಾಖ್ನ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ನಡೆದ ಘರ್ಷಣೆಯಲ್ಲಿ ಗಾಯಗೊಂಡಿದ್ದ ಭಾರತೀಯ ಯೋಧರೊಬ್ಬರ ತಂದೆ ವಿಡಿಯೋ ಮೂಲಕ ಮಾತನಾಡಿದ್ದು ''ಭಾರತೀಯ ಸೇನೆ ಪ್ರಬಲ ಸೈನ್ಯವಾಗಿದ್ದು, ಚೀನಾವನ್ನು ಸೋಲಿಸಬಲ್ಲದು. ರಾಹುಲ್ ಗಾಂಧಿ ಇದರಲ್ಲಿ ರಾಜಕೀಯ ಮಾಡುವುದು ಬೇಡ. ನನ್ನ ಮಗ ಸೈನ್ಯದಲ್ಲಿ ಹೋರಾಡಿದನು. ಆ ಹೋರಾಟವನ್ನು ಮುಂದುವರಿಸುತ್ತಾನೆ'' ಎಂದು ಹೇಳಿದ್ದಾರೆ.
ರಾಜಕೀಯ ಮಾಡುವುದನ್ನು ನಿಲ್ಲಿಸಿ
''ಧೈರ್ಯಶಾಲಿ ಸೈನಿಕನ ತಂದೆಯ ಈ ಸಂದೇಶ ಸ್ಪಷ್ಟವಾಗಿ ರಾಹುಲ್ ಗಾಂಧಿಗೆ ಮುಟ್ಟಬೇಕಿದೆ. ಇಡೀ ರಾಷ್ಟ್ರ ಒಗ್ಗೂಡಿರುವ ಸಂದರ್ಭದಲ್ಲಿ ರಾಹುಲ್ ಗಾಂಧಿ ರಾಜಕೀಯ ಮಾಡುವುದನ್ನ ಬಿಟ್ಟು, ರಾಷ್ಟ್ರದ ಹಿತಾಸಕ್ತಿಗೆ ಬೆಂಬಲವಾಗಿ ನಿಲ್ಲಬೇಕು'' ಎಂದು ಗೃಹ ಸಚಿವ ಅಮಿತ್ ಶಾ ವಿಡಿಯೋ ಶೇರ್ ಮಾಡಿದ್ದಾರೆ.
ಮೋದಿ ಹೇಳಿಕೆ ಪ್ರಶ್ನಿಸಿದ್ದ ರಾಹುಲ್
''ಭಾರತದ ಗಡಿಯೊಳಗೆ ಚೀನಾ ಪ್ರವೇಶ ಮಾಡಿಲ್ಲ, ನಮ್ಮ ಜಾಗವನ್ನು ಒಂದಿಂಚೂ ಕೊಡುವುದಿಲ್ಲ' ಎಂದು ಮೋದಿ ಸರ್ವಪಕ್ಷ ಸಭೆಯಲ್ಲಿ ಹೇಳಿದ್ದರು. ಈ ಹೇಳಿಕೆಯನ್ನು ಖಂಡಿಸಿದ ರಾಹುಲ್ ಗಾಂಧಿ, ''ಚೀನಾ ಭಾರತದ ಭೂ ಪ್ರದೇಶಕ್ಕೆ ಬಂದಿಲ್ಲ ಎನ್ನುವುದಾರೇ 20 ಸೈನಿಕರು ಹೇಗೆ ಸತ್ತರು? ಯಾರು ಕೊಂದಿದ್ದು"? ಎಂದು ಟೀಕಿಸಿದ್ದರು.
ಚೀನಾ ಪೂರ್ವ ನಿಯೋಜಿತ ಕೃತ್ಯ
ಚೀನಾ ಮತ್ತು ಭಾರತ ಘರ್ಷಣೆ ಹಿನ್ನೆಲೆ ಪ್ರತಿಕ್ರಿಯಿಸಿದ್ದ ರಾಹುಲ್ ಗಾಂಧಿ ''ಗಾಲ್ವಾನ್ ಕಣಿವೆ ದಾಳಿ ಚೀನಾದ ಪೂರ್ವ ನಿಯೋಜಿತ ಕೃತ್ಯ. ಭಾರತ ಸರ್ಕಾರ ಗಾಢವಾದ ನಿದ್ದೆ ಮಾಡುತ್ತಿದೆ. ಈ ಸಮಸ್ಯೆಯ ಬಗ್ಗೆ ನಿರ್ಲಕ್ಷ್ಯ ತೋರಿತ್ತು. ಇದರ ಪರಿಣಾಮ ನಮ್ಮ ಯೋಧರು ಬೆಲೆತೆರಬೇಕಾಯಿತು'' ಎಂದು ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಟೀಕಿಸಿದ್ದರು.