ಯಾಸ್ ಚಂಡಮಾರುತ: ಅಸ್ಸಾಂ, ಸಿಕ್ಕಿಂ, ಮೇಘಾಲಯದ ಸಿದ್ಧತೆಯ ಬಗ್ಗೆ ಅಮಿತ್ ಶಾ ಪರಾಮರ್ಶೆ
ನವದೆಹಲಿ, ಮೇ 24: ಕೇಂದ್ರ ಗೃಹಸಚಿವ ಅಮಿತ್ ಶಾ ಸೋಮವಾರ ಯಾಸ್ ಚಂಡಮಾರುತದ ಹಿನ್ನೆಲೆಯಲ್ಲಿ ಅಸ್ಸಾಂ, ಸಿಕ್ಕಿಂ ಹಾಗೂ ಮೇಘಾಲಯ ನಡೆಸಿರುವ ಸಿದ್ಧತೆಗಳ ಬಗ್ಗೆ ಪರಾಮರ್ಶೆಯನ್ನು ನಡೆಸಿದ್ದಾರೆ. ಯಾಸ್ ಚಂಡಮಾರುತ ಎದುರಿಸಲು ರಾಜ್ಯ ಸರ್ಕಾರಗಳು ಕೈಗೊಂಡಿರುವ ಸಿದ್ಧತೆಗಳ ಬಗ್ಗೆ ಕೇಂದ್ರ ಗೃಹ ಸಚಿವರು ಮಾಹಿತಿಯನ್ನು ಪಡೆದುಕೊಂಡಿದ್ದಾರೆ.
ಅಸ್ಸಾಂ ಮುಖ್ಯಮಂತ್ರಿ ಹೇಮಂತ ಬಿಸ್ವ ಶರ್ಮಾ ತುರ್ತು ಸೇವೆಗಳನ್ನು ಕಾರ್ಯರೂಪಕ್ಕೆ ತರಲಾಗಿದೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಹೇಮಂತ ಶರ್ಮ ಬಿಸ್ವಾ ಟ್ವೀಟ್ ಮಾಡಿದ್ದು "ಮೇ 26-27ರಂದು ರಾಜ್ಯದ ಮೇಲೆ ಪ್ರಭಾವ ಬೀರುವ ಸಂಭವವಿದೆ. ಈ ವಿಚಾರವಾಗಿ ಕೇಂದ್ರ ಗೃಹಸಚಿವ ಸಚಿವ ಅಮಿತ್ ಶಾ ಕರೆ ಮಾಡಿದ್ದು ಅಸ್ಸಾಂ, ಮೇಘಾಲಯ ಮತ್ತಿ ಸಿಕ್ಕಿಂನಲ್ಲಿನ ಸಿದ್ಧತೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದಾರೆ" ಎಂದು ತಿಳಿಸಿದ್ದಾರೆ.
ಅಸ್ಸಾಂ ಹಾಗೂ ಮೇಘಾಲಯದಲ್ಲಿ ಮೇ 26-27ರಂದು ಭಾರೀ ಮಳೆಯಾಗುವ ಸಂಭವವಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. "ಅಸ್ಸಾಂ ಮತ್ತು ಮೇಘಾಲಯದಲ್ಲಿ ಮೇ 26 ಮತ್ತು 27ರಂದು, ಹಾಗೂ ಬಿಹಾರದಲ್ಲಿ ಮೇ 28ರಂದು ಭಾರೀ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಟ್ವೀಟ್ನಲ್ಲಿ ತಿಳಿಸಿದೆ.
ಪಶ್ಚಿಮ ಬಂಗಾಳದಲ್ಲಿ 35 ರಾಷ್ಟ್ರೀಯ ವಿಪತ್ತು ನಿರ್ವಹಣಾ ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ. ಯಾಸ್ ಚಂಡ ಮಾರುತದ ಅಪಾಯ ಹೆಚ್ಚಾಗಿರುವ ರಾಜ್ಯಗಳಲ್ಲಿ ಈಗಾಗಲೇ ಎನ್ಡಿಆರ್ಎಫ್ ಪಡೆ ಸಂಪೂರ್ಣ ಸನ್ನದ್ಧವಾಗಿದೆ. "
ಪಶ್ಚಿಮ ಬಂಗಾಳದಲ್ಲಿ ಈಗಾಗಲೇ 35 ಎನ್ಡಿಆರ್ಎಫ್ ತುಕಡಿಗಳು ನಿಯೋಜನೆಯಾಗಿದೆ. ಚಂಡಮಾರುತದ ಪ್ರಭಾವ ತಮಿಳುನಾಡು, ಆಂಧ್ರ ಪ್ರದೇಶ ಹಾಗೂ ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿಯೂ ಹೆಚ್ಚಾಗುವ ನಿರೀಕ್ಷೆಯಿದ್ದು ಎನ್ಡಿಆರ್ಎಫ್ ಪಡೆ ಸನ್ನದ್ಧವಾಗಿದೆ. ಜೆಮ್ಶೆಡ್ಪುರ ಹಾಗೂ ರಾಂಚಿ ನಗರಗಳಲ್ಲಿಯೂ ಚಂಡಮಾರುತದ ಪ್ರಭಾವ ಬೀರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಕೆಲ ತಂಡಗಳನ್ನು ಈ ಭಾಗದಲ್ಲಿಯೂ ನಿಯೋಜಿಸಲಾಗಿದೆ ಎಂದು ಎನ್ಡಿಆರ್ಎಫ್ ಟ್ವೀಟ್ ಮೂಲಕ ಮಾಹಿತಿ ನೀಡಿದೆ.