ಕಾಶ್ಮೀರ ಕುರಿತು ಕೈ ಮುಖಂಡನ ಹೇಳಿಕೆಗೆ ಸೋನಿಯಾ ಅಸಮಾಧಾನ: ಶಾ ಕೊಟ್ಟರು ದಿಟ್ಟ ಉತ್ತರ
ನವದೆಹಲಿ, ಆಗಸ್ಟ್ 06: ಕಾಶ್ಮೀರ ವಿಭಜನೆ ಕುರಿತು ಇಂದು ಲೋಕಸಭೆಯಲ್ಲಿ ಮಹತ್ವದ ಚರ್ಚೆ ನಡೆಯಿತು. ಈ ವೇಳೆ ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ಅವರು ಕಾಂಗ್ರೆಸ್ಗೆ ಮುಜುಗರ ಉಂಟಾಗುವಂತ ಹೇಳಿಕೆ ನೀಡಿದರು.
ಚರ್ಚೆಯ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ಅವರು, 'ಕಾಶ್ಮೀರ ನಮ್ಮ ಆಂತರಿಕ ವಿಷಯವೇ ಅಲ್ಲವೇ' ಎಂಬ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದರು. ಚೌಧರಿ ಅವರ ಈ ಹೇಳಿಕೆ ಕಾಂಗ್ರೆಸ್ ಸದಸ್ಯರನ್ನೇ ಚಕಿತಗೊಳಿಸಿತು.
370 ನೇ ವಿಧಿ ರದ್ದು: ವಿಶ್ವಸಂಸ್ಥೆಯ ಮೊರೆಹೋದ ಪಾಕಿಸ್ತಾನ
ಮಾತನಾಡಲು ಆರಂಭಿಸಿದ ಅಧೀರ್ ರಂಜನ್ ಚೌಧರಿ ಅವರು, ಕಾಶ್ಮೀರದ ವಿಶೇಷ ಸ್ಥಾನ ಮಾನ ರದ್ದು ಮಾಡಲು ಹೊರಟಿರುವ ಸರ್ಕಾರವು ಎಲ್ಲ ನಿಯಮಾವಳಿಗಳನ್ನು ಗಾಳಿಗೆ ತೂರಿದೆ ಎಂದು ರಂಜನ್ ಚೌಧರಿ ಆರೋಪಿಸಿದರು.
'ಜಮ್ಮು ಕಾಶ್ಮೀರ ಆಂತರಿಕ ವಿಷಯವೇ? ಇದರ ಬಗ್ಗೆ ಸ್ಪಷ್ಟತೆ ಬೇಕಿದೆ. ನಾವು ಶಿಮ್ಲಾ ಮತ್ತು ಲಾಹೋರ್ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ, ಇವು ಆಂತರಿಕ ವಿಷಯಗಳೇ ಅಥವಾ ದ್ವಿಪಕ್ಷೀಯ ವಿಚಾರಗಳೇ? ಜಮ್ಮು ಕಾಶ್ಮೀರ ಈಗಲೂ ಆಂತರಿಕ ವಿಚಾರವೇ ಎಂಬ ಬಗ್ಗೆ ಸ್ಪಷ್ಟನೆ ಬೇಕಿದೆ' ಎಂದು ಅಧೀರ್ ರಂಜನ್ ಚೌಧರಿ ಪ್ರಶ್ನೆ ಮಾಡಿದರು.
ಚೌಧರಿ ಅವರ ಮಾತು ಕೇಳಿ ಸ್ವತಃ ಕಾಂಗ್ರೆಸ್ ಸದಸ್ಯರೇ ಆತಂಕಕ್ಕೆ ಒಳಗಾದರು. ಚೌಧರಿ ಅವರ ಪಕ್ಕದಲ್ಲಿಯೇ ಕುಳಿತಿದ್ದ ಸೋನಿಯಾ ಗಾಂಧಿ ಅವರೂ ಸಹ ಗೊಂದಲಕ್ಕೆ ಒಳಗಾದರು. ರಂಜನ್ ಚೌಧರಿ ಅವರ ಮಾತಿಗೆ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದರು.
ಮೋದಿ-ಶಾ ಕಲಂ 370 ರದ್ದು ಮಾಡಲು 5 ಕಾರಣಗಳು
ಕೂಡಲೇ ತಮ್ಮ ತಪ್ಪು ತಿದ್ದಿಕೊಂಡ ಚೌಧರಿ, ನನ್ನ ಮಾತನ್ನು ತಪ್ಪಾಗಿ ಗ್ರಹಿಸಲಾಗುತ್ತಿದೆ ಎಂದು ಹೇಳಿ ಸ್ಪಷ್ಟೀಕರಣ ನೀಡಲು ಯತ್ನಿಸಿದರು. ಅಷ್ಟರಲ್ಲೇ ಅಮಿತ್ ಶಾ ಅವರು ಎದ್ದು ಚೌಧರಿ ಅವರ ಪ್ರಶ್ನೆಗೆ ಉತ್ತರಿಸಿದರು.
ಚೌಧರಿ ಅವರ ಪ್ರಶ್ನೆಗಳಿಗೆ ಉತ್ತರಿಸಿದ ಅಮಿತ್ ಶಾ, ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಲ್ಲವೆಂದು ನೀವು ಭಾವಿಸುತ್ತೀರೇನು? ಏನು ಹೇಳುತ್ತಿದ್ದೀರಿ ನೀವು? ಎಂದು ಖಾರವಾಗಿ ಪ್ರಶ್ನಿಸಿದರು.
ಮಾತು ಮುಂದುವರೆಸಿದ ಅಮಿತ್ ಶಾ, 'ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ, ನಾನು ಜಮ್ಮು ಕಾಶ್ಮೀರದ ವಿಷಯ ಪ್ರಸ್ತಾಪಿಸಿದಾಗಲೆಲ್ಲಾ ಅದರಲ್ಲಿ ಪಿಒಕೆಯು ಸೇರಿರುತ್ತದೆ. ಪಿಓಕೆಯು ಜಮ್ಮು ಕಾಶ್ಮೀರಕ್ಕೆ ಸೇರುವುದಿಲ್ಲ ಎಂದು ನೀವು ಹೇಳಿದ್ದು, ನನ್ನ ಸಿಟ್ಟಿಗೆ ಕಾರಣವಾಗಿದೆ. ಪಿಓಕೆಗಾಗಿ ಪ್ರಾಣ ಕೊಡಲೂ ನಾವು ಸಿದ್ಧ ಎಂದು ಅಮಿತ್ ಶಾ ಅಬ್ಬರಿಸಿದರು.