ದೆಹಲಿ: ರೈತರೊಂದಿನ ಸಂಧಾನ ಸಭೆಗೂ ಮುನ್ನ ಅಮರೀಂದರ್, ಶಾ ಭೇಟಿ
ನವದೆಹಲಿ, ಡಿಸೆಂಬರ್.03: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಸಂಬಂಧಿತ ಕಾಯ್ದೆ ವಿರುದ್ಧ ರೈತರ ಹೋರಾಟದ ನಡುವೆ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಜೊತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಡಿಸೆಂಬರ್.03ರ ಗುರುವಾರ ನಡೆಯಲಿರುವ ಸಭೆಯಲ್ಲೇ ಕೇಂದ್ರ ಸರ್ಕಾರವು ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕು ಎಂದು ರೈತ ಮುಖಂಡರು ಈಗಾಗಲೇ ಷರತ್ತು ವಿಧಿಸಿದ್ದಾರೆ. ನವೆಂಬರ್.26ರಿಂದ ರೈತರ ಪ್ರತಿಭಟನೆ ಆರಂಭಗೊಂಡಿದ್ದು, ಇದುವರೆಗೂ ನಡೆಸಿದ ಮೂರು ಸಂಧಾನ ಸಭೆಗಳು ವಿಫಲವಾಗಿವೆ.
ಕೃಷಿ ಕಾಯ್ದೆ ತಡೆಯುವ ಅವಕಾಶ ಕೈ ಚೆಲ್ಲಿದರಾ ಪಂಜಾಬ್ ಸಿಎಂ ಅಮರೀಂದರ್?
ಕಳೆದ ಮಂಗಳವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಸಂಪುಟ ಸಹೋದ್ಯೋಗಿಗಳ ಜೊತೆಗೆ ರೈತರ ಹೋರಾಟಕ್ಕೆ ಸಂಬಂಧಿಸಿದಂತೆ ಸಭೆ ನಡೆಸಿದ್ದರು. ಕೇಂದ್ರ ಸರ್ಕಾರವು ರೈತರ ಮುಂದಿಟ್ಟ ಪ್ರಸ್ತಾವನೆಗಳನ್ನು ರೈತ ಮುಖಂಡರು ನಿರಾಕರಿಸಿದ್ದು, ಸಂಧಾನ ಮಾತುಕತೆಯು ಮುರಿದು ಬಿದ್ದಿತ್ತು.
ಗುರುವಾರವೇ ಕೇಂದ್ರ ಸರ್ಕಾರಕ್ಕೆ ಕೊನೆ ಅವಕಾಶ:
ಕೃಷಿ ಕಾಯ್ದೆ ವಿರುದ್ಧ ನಡೆಯುತ್ತಿರುವ ಹೋರಾಟವನ್ನು ಪಂಜಾಬ್ ರೈತರ ಹೋರಾಟ ಎನ್ನುವಂತೆ ಬಿಂಬಿಸಲು ಕೇಂದ್ರ ಸರ್ಕಾರವು ಪ್ರಯತ್ನಿಸುತ್ತಿದೆ. ನಮ್ಮಲ್ಲಿಯೇ ಒಡುಕು ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ಡಿಸೆಂಬರ್.03ರಂದು ನಡೆಯುವ ಸಂಧಾನ ಸಭೆಯೇ ಸರ್ಕಾರಕ್ಕೆ ಕೊನೆಯ ಅವಕಾಶವಾಗಿದೆ. ತುರ್ತು ಅಧಿವೇಶನವನ್ನು ಕರೆದು ವಿವಾದಿತ ಕಾಯ್ದೆಗಳನ್ನು ವಾಪಸ್ ಪಡೆದುಕೊಳ್ಳಬೇಕು. ಅದರ ಜೊತೆಗೆ ರೈತರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ರೈತ ಮುಖಂಡರು ಆಗ್ರಹಿಸಿದ್ದಾರೆ.
ಏಳನೇ ದಿನಕ್ಕೆ ಕಾಲಿಟ್ಟಿರುವ ರೈತರ ಹೋರಾಟ:
ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಕೃಷಿ ಕಾಯ್ದೆ ವಿರುದ್ಧ ರೈತರು ನಡೆಸುತ್ತಿರುವ ಹೋರಾಟವು 7ನೇ ದಿನಕ್ಕೆ ಕಾಲಿಟ್ಟಿದೆ. ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆಯೂ ಸಪ್ಟೆಂಬರ್ ನಲ್ಲಿ ನಡೆದ ಸಂಸತ್ ಅಧಿವೇಶನದಲ್ಲಿ ವಿವಾದಾತ್ಮಕ ಮಸೂದೆಯನ್ನು ಅಂಗೀಕರಿಸಲಾಗಿತ್ತು. ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ನವೆಂಬರ್.26ರಂದು ರೈತರು ದಿಲ್ಲಿ ಚಲೋ ಪ್ರತಿಭಟನೆ ಕೈಗೊಂಡರು. ಕಳೆದ ಶುಕ್ರವಾರ ದೆಹಲಿ ಗಡಿ ಪ್ರದೇಶವನ್ನು ಪ್ರವೇಶಿಸಿದ ರೈತರು ಕೇಂದ್ರ ಸರ್ಕಾರಕ್ಕೆ ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.