ರೈತರನ್ನು ಕೆರಳಿಸಿದ ಕೃಷಿ ಕಾಯ್ದೆ ಕುರಿತು ಪ್ರಧಾನಿ ಮೋದಿ ಮಾತು
ನವದೆಹಲಿ, ನವೆಂಬರ್.29: ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಕೃಷಿ ಸಂಬಂಧಿತ ಕಾಯ್ದೆ ವಿರುದ್ಧ ರೈತರ ಪ್ರತಿಭಟನೆಯ ನಡುವೆ ಹೊಸ ಕಾಯ್ದೆಯಿಂದ ಆಗುವ ಪ್ರಯೋಜನಗಳೇನು ಎಂಬುದರ ಬಗ್ಗೆ ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾತನಾಡಿದ್ದಾರೆ.
ಮನ್ ಕೀ ಬಾತ್ 71ನೇ ಸಂಚಿಕೆಯಲ್ಲಿ ಮಾತನಾಡಿರುವ ಪ್ರಧಾನಿ ಮೋದಿ, ಹೊಸ ಕೃಷಿ ಕಾಯ್ದೆಯಿಂದ ಭಾರತೀಯ ರೈತರಿಗೆ ಸಾವಿರಾರು ಅವಕಾಶಗಳ ಬಾಗಿಲು ತೆರೆಯಲಿದೆ ಎಂದು ಹೇಳಿದರು. ಹಲವು ವರ್ಷಗಳಿಂದಲೂ ರೈತರ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಭರವಸೆಗಳನ್ನು ನೀಡಲಾಗುತ್ತಿತ್ತು. ರೈತರನ್ನು ಭೇಟಿ ಮಾಡುವ ಕಾರ್ಯವು ನಡೆಯುತ್ತಿರಲಿಲ್ಲ. ಅಂತಿಮವಾಗಿ ನಾವು ಆ ಕಾರ್ಯವನ್ನು ಪೂರೈಸಿದ್ದೇವೆ ಎಂದು ಮೋದಿ ಹೇಳಿದರು.
ರೈತರ ಪ್ರತಿಭಟನೆಗೆ ಪಂಜಾಬ್ ಸಿಎಂ ಅಮರಿಂದರ್ ಹೊಣೆ: ಹರಿಯಾಣ ಸಿಎಂ ಖಟ್ಟರ್
ದೇಶದ ರೈತರಿಗೆ ಈ ಮೊದಲಿದ್ದ ಹಲವು ನಿರ್ಬಂಧಗಳನ್ನು ತೆಗೆದು ಹಾಕಲಾಗಿದ್ದು, ಹೊಸ ಅವಕಾಶ ಮತ್ತು ಹಕ್ಕುಗಳನ್ನು ನೀಡಲಾಗಿದೆ. ಸರ್ಕಾರವು ಈ ನಿಟ್ಟಿನಲ್ಲಿ ಚರ್ಚೆ ನಡೆಸಿಯೇ ಹೊಸ ಕಾಯ್ದೆಗಳನ್ನು ರಚಿಸಲಾಗಿತ್ತು ಎಂದು ಪ್ರಧಾನಿ ತಿಳಿಸಿದ್ದಾರೆ.
ರೈತರೊಂದಿಗೆ ಚರ್ಚೆಗೆ ಸಿದ್ಧ ಎಂದ ಶಾ:
ಕೃಷಿ ಸಂಬಂಧಿತ ಕಾಯ್ದೆಗೆ ಸಂಬಂಧಿಸಿದಂತೆ ರೈತರೊಂದಿಗೆ ಚರ್ಚೆ ನಡೆಸುವುದಕ್ಕೆ ಕೇಂದ್ರ ಸರ್ಕಾರವು ಸದಾ ಸಿದ್ಧವಾಗಿದೆ. ಹೊಸ ಕಾಯ್ದೆಯಿಂದ ರೈತರಿಗೆ ಎದುರಾಗುವ ಸಮಸ್ಯೆ ಮತ್ತು ತೊಂದರೆಗಳೇನು ಎಂಬುದನ್ನು ಹೇಳುವುದಕ್ಕೆ ಮುಕ್ತ ಅವಕಾಶ ಕಲ್ಪಿಸಿಕೊಡಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಡಿಸೆಂಬರ್.03ರಂದು ಸಂಧಾನ ಸಭೆ:
ಕೃಷಿ ಸಂಬಂಧಿತ ಕಾಯ್ದೆ ವಿರೋಧಿಸಿ ನಡೆಸುತ್ತಿರುವ ದೆಹಲಿ ಚಲೋ ಹೋರಾಟ ಕೈಬಿಡುವಂತೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮನವಿ ಮಾಡಿಕೊಂಡಿದ್ದಾರೆ. ಮುಂದಿನ ವಾರದಲ್ಲಿ ಕೃಷಿ ಸಂಬಂಧಿತ ಕಾಯ್ದೆ ಸಂಬಂಧ ರೈತರ ಜೊತೆಗೆ ಸಂಧಾನ ಸಭೆ ನಡೆಸಲಾಗುತ್ತದೆ. ಕೇಂದ್ರ ಸರ್ಕಾರ ರೈತರ ಜೊತೆಗೆ ಚರ್ಚಿಸುವುದಕ್ಕೆ ಯಾವಾಗಲೂ ಸಿದ್ಧವಾಗಿದ್ದು, ಡಿಸೆಂಬರ್.03 ರಂದು ರೈತರೊಂದಿಗಿನ ಸಭೆ ಕರೆಯಲಾಗುವುದು. ರೈತ ಸಂಘಟನೆಗಳನ್ನು ಮತ್ತೊಂದು ಸುತ್ತಿನ ಶಾಂತಿ ಮಾತುಕತೆಗೆ ಆಹ್ವಾನಿಸಲಾಗುತ್ತದೆ. ಚಳಿಗಾಲದ ನಡುವೆ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಪ್ರಭಾವ ಹೆಚ್ಚಾಗುತ್ತಿರುವ ಹಿನ್ನೆಲೆ ಜಾಗೃತಿ ವಹಿಸಬೇಕಿದೆ. ಈ ನಿಟ್ಟಿನಲ್ಲಿ ರೈತರು ತಮ್ಮ ಪ್ರತಿಭಟನೆಯನ್ನು ಕೈಬಿಡಬೇಕು ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮನವಿ ಮಾಡಿಕೊಂಡಿದ್ದಾರೆ.
ರೈತರನ್ನು ಕಂಗೆಡಿಸಿದ ಕೃಷಿ ಸಂಬಂಧಿತ ಕಾಯ್ದೆಗಳು:
ಕಳೆದ ಸಪ್ಟೆಂಬರ್.27ರಂದು ಕೇಂದ್ರ ಸರ್ಕಾರವು ಮೂರು ಕೃಷಿ ಸಂಬಂಧಿತ ಕಾಯ್ದೆಗಳ ಜಾರಿಗೊಳಿಸಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅನುಮೋದನೆ ನೀಡಿದ್ದರು. ರೈತರ ಆಕ್ರೋಶಕ್ಕೆ ಕಾರಣವಾಗಿರುವ ಮತ್ತು ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಆ ಮೂರು ಕೃಷಿ ಸಂಬಂಧಿತ ಕಾಯ್ದೆಗಳು ಯಾವುವು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
1. ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ
2. ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ
3. ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆ