ದೆಹಲಿ ಗಡಿ ರಸ್ತೆಗಳಲ್ಲೇ ಬಂದ್: ಇಲ್ಲಿದೆ ಬದಲಿ ಮಾರ್ಗಗಳ ವಿವರ
ನವದೆಹಲಿ, ಡಿಸೆಂಬರ್.03: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಸಂಬಂಧಿತ ಕಾಯ್ದೆ ವಿರುದ್ಧ ರೈತರ ಹೋರಾಟ 8ನೇ ದಿನಕ್ಕೆ ಕಾಲಿಟ್ಟಿದೆ. ಗುರುವಾರ ಕೇಂದ್ರ ಸರ್ಕಾರ ಪ್ರತಿಭಟನಾನಿರತ ರೈತರೊಂದಿಗೆ ಸಂಧಾನ ಸಭೆ ನಡೆಸಲಿದ್ದು, ಇದರ ನಡುವೆ ದೆಹಲಿಯ ಹಲವು ರಸ್ತೆಗಳನ್ನು ಪೊಲೀಸರು ಬಂದ್ ಮಾಡಿದ್ದಾರೆ.
ಹರಿಯಾಣ ಮತ್ತು ಉತ್ತರ ಪ್ರದೇಶದಿಂದ ಆಗಮಿಸುವ ಮತ್ತು ನಿರ್ಗಮಿಸುವ ಪ್ರಯಾಣಿಕರು ಬೇರೆ ಮಾರ್ಗದಲ್ಲಿ ಸಂಚರಿಸುವಂತೆ ಸಂಚಾರಿ ಪೊಲೀಸರು ಸೂಚನೆ ನೀಡಿದ್ದಾರೆ. ದೆಹಲಿಯ ಸಿಂಘು ಮತ್ತು ಟಿಕ್ರಿ ಗಡಿ ಪ್ರದೇಶದಲ್ಲಿ ರೈತರ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಕೃಷಿ ಕಾಯ್ದೆ ತಡೆಯುವ ಅವಕಾಶ ಕೈ ಚೆಲ್ಲಿದರಾ ಪಂಜಾಬ್ ಸಿಎಂ ಅಮರೀಂದರ್?
ಘಜಿಯಾಬಾದ್ ಗಡಿಯ ಗೌತಮ್ ಬುದ್ಧ ದ್ವಾರದ ಬಳಿ ರೈತರು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆ ನೋಯ್ಡಾಗೆ ಸಂಪರ್ಕಿಸುವ ಚಿಲ್ಲಾ ಗಡಿಯಲ್ಲಿಯೂ ಸಂಚಾರವನ್ನು ನಿರ್ಬಂಧಿಸಲಾಗಿದೆ. ನೋಯ್ಡಾಗೆ ತೆರಳುವ ಜನರು ನೋಯ್ಡಾಗೆ ಸಂಪರ್ಕಿಸುವ ರಸ್ತೆಗಳ ಬದಲಾಗಿ ನೋಯ್ಡಾ ತಲುಪಲು ರಾಷ್ಟ್ರೀಯ ಹೆದ್ದಾರಿ 24 ಮತ್ತು ಡಿಎನ್ ಡಿ ರಸ್ತೆಗಳನ್ನು ಬಳಸುವಂತೆ ಸೂಚನೆ ನೀಡಲಾಗಿದೆ.
ದೆಹಲಿಯಲ್ಲಿ ಬದಲಿ ಮಾರ್ಗಗಳ ವ್ಯವಸ್ಥೆ:
ಕೃಷಿ ಸಂಬಂಧಿತ ಕಾಯ್ದೆ ವಿರುದ್ಧ ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ದೆಹಲಿ ಮತ್ತು ಹರಿಯಾಣಕ್ಕೆ ಸಂಪರ್ಕಿಸುವ ಬಹುತೇಕ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಹರಿಯಾಣ-ದೆಹಲಿ ಗಡಿ, ಝಾರೋಡ ಗಡಿ, ಝಾತಿಕ್ರಾ ಗಡಿ ಪ್ರದೇಶಗಳಲ್ಲಿ ವಾಹನ ಸಂಚಾರವನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಹರಿಯಾಣಕ್ಕೆ ತೆರಳಲು ಬದಲಿ ಮಾರ್ಗಗಳ ವ್ಯವಸ್ಥೆ ಕಲ್ಪಿಸಲಾಗಿದ್ದು, ಧಾನ್ಸಾ, ದೌರಲಾ, ಕಪಶೆರಾ, ರಾಜೋಕ್ರಿ ರಾಷ್ಟ್ರೀಯ ಹೆದ್ದಾರಿ 8, ಬಿಜ್ವಾಸನ್, ಬಜ್ಗೆರಾ, ಪಾಲಮ್ ವಿಹಾರ್ ಮತ್ತು ದುಂಡಾಹೆರಾ ಗಡಿ ಪ್ರದೇಶದಿಂದ ಸಂಚರಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ.
ಗುರುವಾರು ರೈತರೊಂದಿಗೆ ಕೇಂದ್ರ ಸರ್ಕಾರ ಸಭೆ:
ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ 32 ರೈತ ಸಂಘಟನೆಗಳ ಮುಖಂಡರೊಂದಿಗೆ ಕೇಂದ್ರ ಸರ್ಕಾರವು ಡಿಸೆಂಬರ್.03ರಂದು ಸಂಧಾನ ಸಭೆ ನಡೆಸಲಿದೆ. ಗುರುವಾರ ನಡೆಯಲಿರುವ ಸಭೆಯು ಕೇಂದ್ರ ಸರ್ಕಾರ ಅಂತಿಮ ತೀರ್ಮಾನ ತೆಗೆದುಕೊಳ್ಳಲಿರುವ ಕೊನೆಯ ಅವಕಾಶ ಎಂದು ರೈತ ಮುಖಂಡರು ಈಗಾಗಲೇ ಷರತ್ತು ವಿಧಿಸಿದ್ದಾರೆ. ರೈತರ ಜೊತೆಗೆ ನಡೆಸಿದ ಮೂರು ಸುತ್ತಿನ ಸಂಧಾನ ಸಭೆಯು ಮುರಿದು ಬಿದ್ದಿದ್ದು, ನಾಲ್ಕನೇ ಬಾರಿ ರೈತರೊಂದಿನ ಸಭೆಯಲ್ಲಿ ಕೇಂದ್ರ ಸರ್ಕಾರದ ನಿಲುವು ಏನಾಗಿರುತ್ತದೆ ಎನ್ನುವುದರ ಮೇಲೆ ಎಲ್ಲರ ಲಕ್ಷ್ಯ ನೆಟ್ಟಿದೆ.